ಕೊರೊನಾ ಲಸಿಕೆ ಕುರಿತು ಕೇಂದ್ರದ ವಾದವೇ ಹಾಸ್ಯಾಸ್ಪದ; ರಾಹುಲ್ ಗಾಂಧಿ
ನವದೆಹಲಿ, ಏಪ್ರಿಲ್ 7: ಕೊರೊನಾ ಲಸಿಕೆಯನ್ನು ಅಗತ್ಯವಿರುವವರಿಗೆ ನೀಡಬೇಕಿದೆ, ಲಸಿಕೆ ಬಯಸುವವರಿಗೆಲ್ಲರಿಗೂ ಅಲ್ಲ ಎಂದು ಲಸಿಕೆ ಕುರಿತ ಕೇಂದ್ರ ಸರ್ಕಾರದ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧಿಸಿದ್ದಾರೆ. ಈ ವಾದ ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.
ಲಸಿಕೆ ಅವಶ್ಯಕತೆ ಇರುವವರು ಹಾಗೂ ಬಯಸುವವರು ಎಂಬುದರ ನಡುವಿನ ಚರ್ಚೆಯೇ ಹಾಸ್ಯಾಸ್ಪದವಾಗಿದೆ. ಇಂಥ ಸಮಯದಲ್ಲಿ ಈ ಚರ್ಚೆ ನಡೆಸುವುದು ಸರಿಯಲ್ಲ. ತಮ್ಮ ಪ್ರಾಣ ರಕ್ಷಣೆಗೆ ಪ್ರತಿ ಭಾರತೀಯನೂ ಅರ್ಹ ಎಂದು ಟ್ವೀಟ್ ಮೂಲಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರವಷ್ಟೇ ಕೊರೊನಾ ಲಸಿಕೆ ವಿತರಣೆ ಕುರಿತು ಆರೋಗ್ಯ ಸಚಿವಾಲಯ ಮಾಹಿತಿ ನೀಡಿತ್ತು. ಇದುವರೆಗೂ 8,70,77,474 ಮಂದಿಗೆ ಕೊರೊನಾ ಲಸಿಕೆ ನೀಡಿರುವುದಾಗಿ ತಿಳಿಸಿ, ಸದ್ಯಕ್ಕೆ ಕೊರೊನಾ ಲಸಿಕೆಯನ್ನು ಅಗತ್ಯವಿರುವವರಿಗೆ ನೀಡಬೇಕಿದೆ, ಲಸಿಕೆ ಬಯಸುವವರಿಗೆಲ್ಲರಿಗೂ ಅಲ್ಲ ಎಂದು ಹೇಳಿತ್ತು.

"ಎಷ್ಟೋ ಜನರು ಏಕೆ ಎಲ್ಲರಿಗೂ ಕೊರೊನಾ ಲಸಿಕೆ ನೀಡುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಲಸಿಕೆ ನೀಡುವಲ್ಲಿ ಎರಡು ಪ್ರಮುಖ ಉದ್ದೇಶಗಳಿವೆ. ಮೊದಲು, ಸಾವನ್ನು ತಗ್ಗಿಸುವುದು ಹಾಗೂ ಎರಡನೆಯದು ದೇಶದ ಆರೋಗ್ಯ ವ್ಯವಸ್ಥೆಯನ್ನು ಕಾಪಾಡುವುದು. ಕೊರೊನಾ ಲಸಿಕೆಯನ್ನು ಅಗತ್ಯವಿರುವವರಿಗೆ ನೀಡಬೇಕಿದೆ, ಲಸಿಕೆ ಬಯಸುವವರಿಗೆಲ್ಲರಿಗೂ ಅಲ್ಲ" ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಹೇಳಿದ್ದರು.
ಜನವರಿ 16ರಂದು ದೇಶದಲ್ಲಿ ಕೊರೊನಾ ಅಭಿಯಾನ ಆರಂಭಗೊಂಡಿದ್ದು, ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸೂಚನೆ ನೀಡಲಾಗಿದ್ದು, ಇದೀಗ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸೂಚಿಸಲಾಗಿದೆ.












Click it and Unblock the Notifications