ರಾಹುಲ್ ರಾಜೀನಾಮೆ ನೀಡಿದರೆ ಬಿಜೆಪಿ ಬಲೆಗೆ ಬಿದ್ದಂತಾಗುತ್ತದೆ : ಪ್ರಿಯಾಂಕಾ ವಾದ್ರಾ
Recommended Video
ಲೋಕಸಭೆ ಚುನಾವಣೆ ಸೋಲಿನ ಹೊಣೆಹೊತ್ತು ರಾಜೀನಾಮೆ ನೀಡುವ ನಿರ್ಧಾರಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಟಿಬದ್ಧವಾಗುತ್ತಿದ್ದಂತೆ, ಕಾಂಗ್ರೆಸ್ ಪಾಳಯದಲ್ಲಿ ಕಟ್ಟಾ ನಿಷ್ಠಾವಂತರಿಂದ ನಾಟಕೀಯ ಘಟನೆಗಳು ನಡೆಯುತ್ತಿವೆ.
ಡಾ. ಮನಮೋಹನ್ ಸಿಂಗ್, ಎಕೆ ಆಂಟನಿ, ಮಲ್ಲಿಕಾರ್ಜುನ ಖರ್ಗೆ, ಚಿದಂಬರಂ ಮುಂತಾದ ಹಿರಿಯಾತಿ ಹಿರಿಯರು ಸೇರಿದಂತೆ, ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಬಾರದು, ನೀವು ಚುನಾವಣೆಯಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೀರಿ, ನಿಮ್ಮಂಥವರು ನಮಗೆ ಬೇಕೇಬೇಕು ಎಂದು ರಾಹುಲ್ ಗಾಂಧಿ ಅವರನ್ನು ಬೇಡಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ, ನೀವು ರಾಜೀನಾಮೆ ನೀಡಿದರೆ ಪಕ್ಷದ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಬೆದರಿಕೆಯ ಜೊತೆ ಸೆಂಟಿಮೆಂಟಲ್ ಆಗಿ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ. ಈ ಯಾವುದಕ್ಕೂ ಸೊಪ್ಪು ಹಾಕದ ರಾಹುಲ್ ಗಾಂಧಿ, 'ನಾನೇ ಏಕೆ?' ಎಂದು ಪಕ್ಷದ ನಾಯಕರನ್ನು ಕೇಳುತ್ತಿದ್ದಾರೆ.

ಈ ನಡುವೆ, ರಾಜೀನಾಮೆ ನೀಡಬೇಕೆಂಬ ಅಣ್ಣನ ನಿಲುವನ್ನು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಸ್ವಾಗತಿಸಿದರೂ, ಒಂದು ವೇಳೆ ರಾಹುಲ್ ಅವರು ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟರೆ, ಬಿಜೆಪಿಯ ನಿರೀಕ್ಷಿಸಿದ ಬಲೆಗೆ ಕಾಂಗ್ರೆಸ್ ಬಿದ್ದಂತಾಗುತ್ತದೆ. ನೀವೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ವಾದ್ರಾ ಅವರು ಈ ಮಾತನ್ನು ಏಕೆ ಹೇಳಿದ್ದಾರೆಂದರೆ, ದೇಶದ ಅತೀಪುರಾತನ ಪಕ್ಷವಾದ ಕಾಂಗ್ರೆಸ್ ಸದ್ಯಕ್ಕೆ ಹಲ್ಲುಮುರಿದ ಹಾವಂತಾಗಿದೆ, ಪಕ್ಷದಲ್ಲಿ ನೈತಿಕವಾಗಿ ಶಕ್ತಿ ಉಡುಗಿಹೋಗಿದೆ. ರಾಹುಲ್ ಗಾಂಧಿ ಅವರ ಸ್ಥಾನ ತುಂಬಬಲ್ಲಂಥ ನಾಯಕರು ಯಾರೂ ಇಲ್ಲ. ಇದ್ದರೂ ಅವರು ಯಾರೂ ಜವಾಬ್ದಾರಿ ಹೊರಲು ಮುಂದೆ ಬರುತ್ತಿಲ್ಲ. ಈ ಕಾರಣದಿಂದಾಗಿ ರಾಹುಲ್ ರಾಜೀನಾಮೆ ನೀಡಿದರೆ, ಬಿಜೆಪಿಯ ಬಲ ಇನ್ನಷ್ಟು ಹೆಚ್ಚುತ್ತದೆಯೇ ಹೊರತು, ಬೇರೆಯವರು ಬಂದರೆ ಕುಗ್ಗುವುದಿಲ್ಲ ಎಂಬುದಾಗಿತ್ತು.
ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ರಾಜೀನಾಮೆಯ ಸುಳಿವನ್ನು ರಾಹುಲ್ ಗಾಂಧಿ ನೀಡಿದ್ದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮುಂದಿಡುತ್ತಿದ್ದಂತೆ, ಭಾವುಕ ವಾತಾವರಣ ಸೃಷ್ಟಿಯಾಗಿದೆ, ಹಿರಿಯರು ಪರಿಸ್ಥಿತಿಯನ್ನು ಸಂಭಾಳಿಸುವ ಬದಲು ರಾಹುಲ್ ಗಾಂಧಿಯವರನ್ನು ಸಂತೈಸುವಲ್ಲಿ ನಿರತರಾಗಿದ್ದಾರೆ.
ಆದರೂ, ನೀವು ರಾಜೀನಾಮೆ ನೀಡಿದರೆ ಯಾರು ನಿಮ್ಮ ಸ್ಥಾನ ತುಂಬಬಲ್ಲರು ಎಂದು ಹಿರಿಯ ನಾಯಕರೊಬ್ಬರು ಕೇಳಿದ್ದರೆ, ಮೊದಲೇ ಮುಖ ಕೆಂಪಗೆ ಮಾಡಿಕೊಂಡಿದ್ದ ರಾಹುಲ್ ಗಾಂಧಿ ಅವರು, 'ಕೇವಲ ನಾನೇ ಏಕೆ?' ಎಂದು ತಿರುಗೇಟು ನೀಡಿದ್ದಾರೆ. ಮುಂದೆ ಯಾರು ಎಂಬುದಕ್ಕೆ ಎಲ್ಲರ ಬಾಯಿ ಬಂದ್ ಆಗಿದೆ. ಏಕೆಂದರೆ, ರಾಹುಲ್ ಗಾಂಧಿಯಂತೆ ಜವಾಬ್ದಾರಿ ಹೊರಲು ಯಾರೂ ಸಿದ್ದರಿಲ್ಲ.
ಇಷ್ಟೆಲ್ಲ ನಾಟಕೀಯ ಬೆಳವಣಿಗೆಗಳ ನಡುವೆ ರಾಹುಲ್ ಗಾಂಧಿ ಅವರು ರಾಜೀನಾಮೆಯ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಭಾನುವಾರ ಕೂಡ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಲೋಕಸಭೆ ಚುನಾವಣೆಯ ಅನಿರೀಕ್ಷಿತ ಸೋಲು ಅವರನ್ನು ತೀರಾ ಕಂಗೆಡುವಂತೆ ಮಾಡಿದೆ. ಹೋಗಲಿ, ಅವರ ಜವಾಬ್ದಾರಿಯನ್ನು ತುಸು ಸಮಯವಾದರೂ ಇಳಿಸಬಲ್ಲಂಥ ನಾಯಕರು ಕಾಂಗ್ರೆಸ್ಸಿನಲ್ಲಿ ಯಾರಿದ್ದಾರೆ?












Click it and Unblock the Notifications