ದೆಹಲಿಯಲ್ಲಿ ಕಾಂಗ್ರೆಸ್ ಯಾತ್ರೆ ಪುನರಾರಂಭ, ಸಂಚಾರ ಸಲಹೆ ನೀಡಿದ ಪೊಲೀಸರು
ನವದೆಹಲಿ, ಜ. 02: ದೆಹಲಿಯಲ್ಲಿರುವ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಮಂಗಳವಾರ ಪುನರಾರಂಭಗೊಳ್ಳಲಿದೆ. ನಗರದ ಕೇಂದ್ರ ಭಾಗದಿಮದ ಆರಂಭಗೊಂಡು ಲೋನಿ ಗಡಿ ದಾಟಿ ಉತ್ತರ ಪ್ರದೇಶಕ್ಕೆ ಪ್ರವೇಶಿಸಲಿದೆ ಭಾರತ್ ಜೋಡೋ ಯಾತ್ರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಗರದ ಕೇಂದ್ರ ಭಾಗದಿಂದ ಆರಂಭವಾಗಲಿದ್ದು, ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಸುಗಮ ಸಂಚಾರ ವ್ಯವಸ್ಥೆ ಮಾಡುವುದು ಪೊಲೀಸರ ಕರ್ತವ್ಯವಾಗಿದ್ದು, ಈ ಕಾರಣದಿಂದ ದೆಹಲಿ ಪೊಲೀಸರು ಸೋಮವಾರ ಸಂಚಾರ ಸಲಹೆ ನೀಡಿದ್ದಾರೆ.
ಪೊಲೀಸರ ಸೂಚನೆಯ ಪ್ರಕಾರ, ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಂಗ್ರೆಸ್ ಯಾತ್ರೆಯು ಕೆಂಪು ಕೋಟೆ ಬಳಿಯ ಹನುಮಾನ್ ಮಂದಿರದ ಮಾರ್ಗತ್ ವಾಲೆ ಬಾಬಾದಿಂದ ಪುನರಾರಂಭಗೊಂಡು ಮಧ್ಯಾಹ್ನ 12 ರ ಸುಮಾರಿಗೆ ಲೋನಿ ಗಡಿಯನ್ನು ತಲುಪಲಿದೆ.

ಕಾಂಗ್ರೆಸ್ ಪಾದಯಾತ್ರೆಯು ಐರನ್ ಬ್ರಿಡ್ಜ್ - ಶಾಸ್ತ್ರಿ ಪಾರ್ಕ್ ಮೆಟ್ರೋ ಸ್ಟೇಷನ್, ಓಲ್ಡ್ ಜಿಟಿ ರಸ್ತೆ, ಫರ್ನಿಚರ್ ಮಾರ್ಕೆಟ್, ಅನ್ಸಾರಿ ರಸ್ತೆ, ಮೌಜ್ಪುರ, ಬಾಬರ್ಪುರ, ವಜೀರಾಬಾದ್ ರಸ್ತೆ ಮತ್ತು ಗೋಕುಲ್ಪುರಿ ಪೊಲೀಸ್ ಠಾಣೆ ಮೂಲಕ ಲೋನಿ ವೃತ್ತವನ್ನು ತಲುಪಲಿದೆ.
ಪಾದಯಾತ್ರೆ ಸಾಗುವ ಈ ಮಾರ್ಗದಲ್ಲಿ ಹಲವು ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ವಾಹನಗಳು ಯಾತ್ರೆಗೆ ಸೇರುವ ನಿರೀಕ್ಷೆಯಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ನ ಐಕ್ಯತಾ ಯಾತ್ರೆಯ ಕಾರಣದಿಂದಾಗಿ ಶ್ಯಾಮ ಪ್ರಸಾದ್ ಮುಖರ್ಜಿ ಮಾರ್ಗ, ನೇತಾಜಿ ಸುಭಾಷ್ ಮಾರ್ಗ, ರಿಂಗ್ ರೋಡ್, ಎಂಜಿಎಂ ಮಾರ್ಗ, ಹನುಮಾನ್ ಮಂದಿರದಿಂದ ಹಳೆ ಕಬ್ಬಿಣದ ಸೇತುವೆ, ಗೀತಾ ಕಾಲೋನಿ, ಪುಷ್ಟ ರಸ್ತೆ, ಅನ್ಸಾರಿ ರಸ್ತೆ, ಜಿಟಿ ರಸ್ತೆ, ಜಾಫ್ರಾಬಾದ್ ಮುಖ್ಯರಸ್ತೆ, ವಜೀರಾಬಾದ್ ರಸ್ತೆ, ಲೋನಿ ರಸ್ತೆಗಳಲ್ಲಿ ವಾಹನ ಸವಾರರಿಗೆ ತೊಂದರೆಯಾಗಲಿದೆ ಎಂದು ಪೊಲಿಸರ ಹೇಳಿಕೆ ತಿಳಿಸಿದೆ.

ಛಾತಾ ರೈಲ್ ಚೌಕ್, ಕೆಂಪು ಕೋಟೆ, ಎಸ್ಪಿಎಂ ಮಾರ್ಗ, ಹಳೆ ಕಬ್ಬಿಣದ ಸೇತುವೆ, ಪುಷ್ತಾ ರಸ್ತೆ, ಅನ್ಸಾರಿ ರಸ್ತೆ, ಜಿಟಿ ರಸ್ತೆಯಲ್ಲಿ ಯುಧಿಷ್ಠಿರ್ ಸೇತುದಿಂದ ಸೀಲಾಂಪುರ್ ಟಿ-ಪಾಯಿಂಟ್ವರೆಗೆ, ಶಾಹ್ದ್ರಾ ಫ್ಲೈಓವರ್ನಿಂದ ವಜೀರಾಬಾದ್ ರಸ್ತೆಯ ಲೋನಿ ಗೋಲ್ ಚಕ್ಕರ್ವರೆಗೆ ವಾಹನ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಈ ರಸ್ತೆಗಳನ್ನು ಬಿಟ್ಟು ಬೈಪಾಸ್ ಮೂಲಕ ಅಥವಾ ಹೆಚ್ಚು ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಪ್ರಯಾಣಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇನ್ನು, ಮಂಗಳವಾರ ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳ ಕಡೆಗೆ ಹೋಗುವ ಜನರು ಬೇಗನೆ ತಮ್ಮ ಮನೆಗಳಿಂದ ಹೊರಡುವಂತೆ ಸಲಹೆ ನೀಡಲಾಗಿದೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯು ಡಿಸೆಂಬರ್ 24 ರಂದು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರ ಪ್ರಕಾರ, ಜನವರಿ 3 ರಂದು ಪಾದಯಾತ್ರೆ ರಾಜ್ಯಕ್ಕೆ ಪ್ರವೇಶಿಸುತ್ತದೆ. ಜನವರಿ 5 ರಂದು ಹರಿಯಾಣಕ್ಕೆ ಹೊರಡಲಿದೆ.












Click it and Unblock the Notifications