Delhi Election: ಯಮುನಾ ನೀರು ಕುಡಿಯಿರಿ ಕೇಜ್ರಿವಾಲ್ಗೆ ರಾಹುಲ್ ಗಾಂಧಿ ಸವಾಲು
ದೆಹಲಿ ವಿಧಾನಸಭಾ ಚುನಾವಣೆ ಹತ್ತಿರುವಾಗುತ್ತಿದ್ದಂತೆ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ. ಲೋಕಸಭಾ ಚುನಾವಣೆ ವೇಳೆ ಪರಸ್ಪರ ಸ್ನೇಹಿತರಂತೆ ಇಂಡಿಯಾ ಒಕ್ಕೂಟದ ಅಡಿಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದು, ಉಭಯ ಪಕ್ಷಗಳ ನಾಯಕರು ಪರಸ್ಪರ ಟೀಕೆಗಳನ್ನು ಮಾಡುತ್ತಿದ್ದಾರೆ.
ಭಾನುವಾರ ದೆಹಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸತತ ಎರಡು ಬಾರಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ ಯಮುನಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದು ಅರವಿಂದ್ ಕೇಜ್ರಿವಾಲ್ ಯಮುನಾ ನದಿಯಲ್ಲಿ ಒಂದು ಲೋಟ ನೀರು ಕುಡಿಯಲಿ ಎಂದು ಸವಾಲು ಹಾಕಿದರು.

ಎರಡು ಬಾರಿ ಚುನಾವಣೆಯಲ್ಲಿ ಯಮುನಾ ನದಿ ಸ್ವಚ್ಛತೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಕೇಜ್ರಿವಾಲ್ ದೆಹಲಿ ಜನತೆಗೆ ಭರವಸೆ ಕೊಟ್ಟಿದ್ದರು. ಆದರೆ ಈ ಭರವಸೆ ಈಡೇರಿಸುವಲ್ಲಿ ಅವರು ವಿಫಲವಾಗಿದ್ದಾರೆ ಎಂದು ಹೇಳಿದರು.
ಬಿಜೆಪಿಯ ಶೀಶ್ ಮಹಲ್ ಟೀಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಎಪಿಯನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. ಕೇಜ್ರಿವಾಲ್ ಹೊಸ ರಾಜಕೀಯ ವ್ಯವಸ್ಥೆ ತರುವ ಭರವಸೆಯೊಂದಿಗೆ ಎಲ್ಲಿಂದಲೋ ಬಂದರು ಆದರೆ ಕಂಬವನ್ನು ಹತ್ತಿದ ಬಳಿಕ ನೇರವಾಗಿ ಶೀಶ್ ಮಹಲ್ಗೆ ಪ್ರವೇಶಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಡುವೆ ಯುದ್ಧ ನಡೆಯುತ್ತಿತ್ತು, ಆದರೆ ಅವರಿಂದ್ ಕೇಜ್ರಿವಾಲ್ ಎಲ್ಲಿಂದಲೋ ಬಂದರು, ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ, ಸಹೋದರತ್ವ ಹರಡುವುದಾಗಿ ಮತ್ತು ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿದ್ದರು. ಹೊಸ ರಾಜಕೀಯ ವ್ಯವಸ್ಥೆಯನ್ನು ತರುತ್ತೇನೆ, ಭ್ರಷ್ಟಾಚಾರ ಕೊನೆಗೊಳಿಸುತ್ತೇನೆ ಎಂದಿದ್ದರು. ಐದು ವರ್ಷಗಳಲ್ಲಿ ಯಮುನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡುವುದಾಗಿ ಭರವಸೆ ನೀಡಿದ್ದರು, ನಾನು ಅವರಿಗೆ ಒಂದು ಲೋಟ ಯಮುನಾ ನೀರು ಕುಡಿಯುವಂತೆ ಸವಾಲು ಹಾಕುತ್ತೇನೆ, ಒಂದು ವೇಳೆ ನೀರು ಕುಡಿದರೆ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ಸಣ್ಣ ವ್ಯಾಗನ್ ಆರ್ ಕಾರಿನಲ್ಲಿ ಬಂದರು, ಸ್ವೆಟರ್ ಧರಿಸಿ ಕಂಬನ್ನು ಹತ್ತಿ ಅಲ್ಲಿಂದ ನೇರವಾಗಿ ಶೀಷ್ ಮಹಲ್ಗೆ ಪ್ರವೇಶ ಪಡೆದರು ಎಂದು ವ್ಯಂಗ್ಯವಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಕೂಡ ಪ್ರಧಾನಿ ನರೇಂದ್ರ ಮೋದಿಯಂತೆಯೇ ಸುಳ್ಳು ಭರವಸೆ ನೀಡುತ್ತಾರೆ ಎಂದು ಹೇಳಿದರು.












Click it and Unblock the Notifications