ಗೆಳೆಯರಿಗೆ ಹಣ್ಣು ತಿನ್ನಿಸುವುದು ನಿಲ್ಲಿಸಿ: ಅದಾನಿ, ಅಂಬಾನಿ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ನವದೆಹಲಿ, ಡಿಸೆಂಬರ್ 20: ಸ್ನೇಹಿತರಿಗೆ ಹಣ್ಣು ತಿನ್ನಿಸುವುದನ್ನು ನಿಲ್ಲಿಸಿ, ಜನರ ಸೇವೆ ಮಾಡಿ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಘೋಷಣೆ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
'₹500ಕ್ಕೆ ಗ್ಯಾಸ್ ಸಿಲಿಂಡರ್ ನೀಡುವ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ದೊಡ್ಡ ಘೋಷಣೆ ಮಾಡಿದೆ. ಇದು ಕೇಂದ್ರ ಸರ್ಕಾರದ ಬೆಲೆಯ ಅರ್ಧಕ್ಕಿಂತ ಕಡಿಮೆಯಾಗಿದೆ' ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿಗಳೇ, 'ಸ್ನೇಹಿತರಿಗೆ' ಹಣ್ಣು ತಿನ್ನಿಸುವುದನ್ನು ನಿಲ್ಲಿಸಿ, ಹಣದುಬ್ಬರದಿಂದ ಬಳಲುತ್ತಿರುವ ಜನರ ಸೇವೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರನ್ನು ಮೋದಿಯವರ 'ಸ್ನೇಹಿತರು' ಎಂದು ಪರೋಕ್ಷವಾಗಿ ರಾಹುಲ್ ಹೇಳಿದ್ದಾರೆ.
ಉದ್ಯಮಿಗಳಾದ ಅಂಬಾನಿ ಹಾಗೂ ಅದಾನಿ ಅವರು ಪ್ರಧಾನಿ ಮೋದಿ ಅವರಿಗೆ ಅತ್ಯಂತ ನಿಕಟ ವ್ಯಕ್ತಿಗಳಾಗಿದ್ದಾರೆ. ಕೇಂದ್ರ ಸರ್ಕಾರ ಅವರ ಪರವಾಗಿ ಎಲ್ಲವನ್ನೂ ಮಾಡುತ್ತದೆ. ಆದರೆ, ಬಡ ಜನರ ಸಂಕಷ್ಟವನ್ನು ಗಮನಿಸುವುದೇ ಇಲ್ಲ ಎಂದು ರಾಹುಲ್ ಈ ಹಿಂದಿನಿಂದಲೂ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

ಪ್ರಸ್ತುತ ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆಯು ನೂರು ದಿನಗಳನ್ನು ಪೂರೈಸಿದೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಧ್ಯ ಪ್ರದೇಶಗಳನ್ನು ಯಾತ್ರೆ ಈಗಾಗಲೇ ಕ್ರಮಿಸಿದೆ. ಪ್ರಸ್ತುತ ಯಾತ್ರೆಯು ರಾಜಸ್ಥಾನದಲ್ಲಿದೆ. ಯಾತ್ರೆಗೆ ಈ ವರೆಗೂ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಡಿಸೆಂಬರ್ 24ರಂದು ಭಾರತ್ ಜೋಡೊ ಯಾತ್ರೆಯು ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸಲಿದೆ. ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿದ್ದಾರೆ. ನಟ ಕಮಲ್ ಹಾಸನ್ ಹಾಗೂ ಡಿಎಂಕೆ ಪಕ್ಷದ ನಾಯಕಿ ಕನಿಮೋಳಿ ರಾಹುಲ್ಗೆ ಜೊತೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಸೇರಿದಂತೆ ಇತರ ಭಾರತ್ ಜೋಡೊ ಯಾತ್ರಿಗಳು ದೆಹಲಿಯ ರಾಜ್ಘಾಟ್, ಶಾಂತಿ ವಾನ್, ಶಕ್ತಿ ಸ್ಥಳ ಮತ್ತು ವೀರ್ ಭೂಮಿಗೆ ಭೇಟಿ ನೀಡಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿಲ್ಲ.












Click it and Unblock the Notifications