ರಾಹುಲ್ ಗಾಂಧಿ ಆಧುನಿಕ ಭಾರತದ ಮಹಾತ್ಮ ಗಾಂಧಿ: ಶಾಸಕ
ನವದೆಹಲಿ, ಏಪ್ರಿಲ್ 6: ರಾಹುಲ್ ಗಾಂಧಿ ಅವರ ಅನರ್ಹತೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಛತ್ತೀಸ್ಗಡದ ಕಾಂಗ್ರೆಸ್ ಶಾಸಕ ಅಮಿತೇಶ್ ಶುಕ್ಲಾ ಅವರು ರಾಹುಲ್ ಗಾಂಧಿಯನ್ನು ಆಧುನಿಕ ಭಾರತದ ಮಹಾತ್ಮ ಗಾಂಧಿ ಎಂದು ಬಣ್ಣಿಸಿದ್ದಾರೆ.
ಛತ್ತೀಸ್ಗಡ ರಾಜ್ಯದ ರಜೀಂ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದ ಅಮಿತೇಶ್ ಶುಕ್ಲಾ ಮಹಾತ್ಮ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ಹಲವಾರು ಸಾಮ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಅಮಿತೇಶ್ ಶುಕ್ಲಾ, ರಾಹುಲ್ ಗಾಂಧಿ ಅವರು ಆಧುನಿಕ ಭಾರತದ ಮಹಾತ್ಮ ಗಾಂಧಿ. ಅವರು ಮಹಾತ್ಮ ಗಾಂಧಿಯವರೊಂದಿಗೆ ಸಾಕಷ್ಟು ಹೋಲಿಕೆಗಳನ್ನು ಹೊಂದಿದ್ದಾರೆ. ಮಹಾತ್ಮ ಗಾಂಧಿಯವರು ದಂಡಿ ಮೆರವಣಿಗೆ ಮಾಡಿದಂತೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಮಾಡಿದರು. ಹೀಗಾಗಿ ರಾಹುಲ್ ಗಾಂಧಿ ಅವರು ರಾಷ್ಟ್ರದ ಮಗ ಎಂದು ಕರೆದರು.
ನಾನು ಈ ಹೇಳಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನೀಡಿದ್ದೇನೆ. ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸೇರಿದವನು. ನನ್ನ ತಂದೆ (ಅವಿಭಜಿತ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ಯಾಮ ಚರಣ್ ಶುಕ್ಲಾ) ಮತ್ತು ಚಿಕ್ಕಪ್ಪ (ಹಿರಿಯ ಕಾಂಗ್ರೆಸ್ ನಾಯಕ ವಿದ್ಯಾ ಚರಣ್ ಶುಕ್ಲಾ) ಅವರಿಂದ ನಾನು ಕೇಳಿರುವ ವಿಷಯಗಳು. ಮಹಾತ್ಮಾ ಗಾಂಧಿಯವರ ಬಗ್ಗೆ, ಮಹಾತ್ಮ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ಹಲವಾರು ಸಾಮ್ಯತೆಗಳಿವೆ ಎಂದು ನಾನು ಭಾವಿಸುತ್ತೇನೆ ಎಂದರು.

ಮಹಾತ್ಮ ಗಾಂಧಿ ಅವರು ಭಾರತದ ಮೊದಲ ಪ್ರಧಾನಿಯಾಗಬಹುದಿತ್ತು. ಆದರೆ ಅವರು ಆಗಲಿಲ್ಲ. ಅದೇ ರೀತಿ 2004 ಮತ್ತು 2008ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು, ಆದರೆ ಆಗಲಿಲ್ಲ. ದಂಡಿ ಯಾತ್ರೆ ಸಮಯದಲ್ಲಿ ಮಹಾತ್ಮ ಗಾಂಧಿಯವರು ಸಾವಿರಾರು ಕಿಲೋಮೀಟರ್ಗಳಷ್ಟು ಮೆರವಣಿಗೆ ನಡೆಸಿದ್ದಂತೆ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ದೇಶಾದ್ಯಂತ ನಡೆದರು ಮತ್ತು ಜನರೊಂದಿಗೆ ಸಂವಾದ ನಡೆಸಿದರು ಎಂದರು.
ತಮ್ಮ ಸತ್ಯ ಹಾಗೂ ಅಹಿಂಸೆಯ ಅಸ್ತ್ರದಿಂದ ಬ್ರಿಟಿಷ್ ಸಾಮ್ರಾಜ್ಯವನ್ನು ಅಂತ್ಯಗೊಳಿಸಿದ ಮಹಾತ್ಮ ಗಾಂಧಿಯಂತೆ, ರಾಹುಲ್ ಗಾಂಧಿ ಕೂಡ ಅದಾನಿ ಷೇರುಗಳ ಸಮಸ್ಯೆಯ ಬಗ್ಗೆ ಸತ್ಯವನ್ನು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಉಪನಾಮೆ ಕುರಿತಾದ ಮಾನನಷ್ಟ ಮೊಕದ್ದಮೆಯಲ್ಲಿ ಇಂದು ಗುಜರಾತ್ನ ಸೆಷನ್ಸ್ ನ್ಯಾಯಾಲಯದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಾಮೀನು ಪಡೆದಿದ್ದಾರೆ. ಜಾಮೀನು ಪಡೆದ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಸತ್ಯವೇ ನನ್ನ ಅಸ್ತ್ರವೆಂದು ರಾಹುಲ್ ಗಾಂಧಿ ತಿಳಿಸಿದ್ದರು.
ಇದು 'ಮಿತ್ರಕಾಲ'ದ ವಿರುದ್ಧದ ಪ್ರಜಾಪ್ರಭುತ್ವ ಉಳಿಸುವ ಹೋರಾಟ. ಈ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನ್ನ ಆಶ್ರಯ ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. 'ಮಿತ್ರಕಾಲ' ಎಂದರೆ ಪ್ರಧಾನಿ ಮೊದಿ ಹಾಗೂ ಗೌತಮ್ ಅದಾನಿ ನಡುವಿನ ಸ್ನೇಹದ ಬಗ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಅದಾನಿ ಪರ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ' ಕ್ರೋನಿ ಕ್ಯಾಪಿಟಲಿಸ್ಟ್ ಸ್ನೇಹಿತರ ' ಲಾಭಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಫೆಬ್ರವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು 'ಮಿತ್ರ ಕಾಲ ಬಜೆಟ್' ಎಂದು ರಾಹುಲ್ ಗಾಂಧಿ ಕರೆದಿದ್ದರು.












Click it and Unblock the Notifications