ದೆಹಲಿ ಪೊಲೀಸರಿಗೆ 'ನಿಮಗೆ ನಾಚಿಕೆ ಆಗಲ್ವಾ' ಅಂದ ರಾಹುಲ್ ಗಾಂಧಿ
OROP ಸ್ಕೀಂ ವಿಳಂಬವಾಗುತ್ತಿರುವುದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮಾಜಿ ಸೈನಿಕ ರಾಂ ಕಿಶನ್ ಗರೆವಾಲ್ ಕುಟುಂಬಕ್ಕೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ ನೀಡಲು ರಾಹುಲ್ ಹೊರಟಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನವದೆಹಲಿ, ನ 2: ನಿಮಗೆ ನಾಚಿಕೆಯಾಗಲ್ವಾ (ಆಪ್ ಕೋ ಶರಂ ನಹೀ ಆತಿ), ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕನ ಮಗನನ್ನು ಬಂಧಿಸುತ್ತೀರಲ್ಲಾ, ಇದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಳಿದ ಪ್ರಶ್ನೆ.
OROP (ಒನ್ ರ್ಯಾಂಕ್ ಒನ್ ಪೆನ್ಸನ್) ಸ್ಕೀಂ ವಿಳಂಬವಾಗುತ್ತಿರುವುದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮಾಜಿ ಸೈನಿಕ ರಾಂ ಕಿಶನ್ ಗರೆವಾಲ್ ಕುಟುಂಬಕ್ಕೆ ಸಾಂತ್ವನ ಹೇಳಲು, ಅವರ ಕುಟುಂಬದ ಸದಸ್ಯರ ಜೊತೆ ರಾಂ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಲು ರಾಹುಲ್ ಹೊರಟಿದ್ದಾಗ ದೆಹಲಿ ಪೊಲೀಸರು ಅವರನ್ನು ತಡೆ ಹಿಡಿದರು.
ಆಸ್ಪತ್ರೆಯ ಇನ್ನೊಂದು ದ್ವಾರದ ಮೂಲಕ ರಾಹುಲ್ ತೆರಳಿ, ಪೊಲೀಸರ ಕ್ರಮದ ವಿರುದ್ದ ಅಲ್ಲೇ ಪ್ರತಿಭಟನೆಗೆ ಮುಂದಾದರು. ಸ್ಥಳಕ್ಕೆ ಆಗಮಿಸಿ, ಇದು ಪ್ರತಿಭಟನೆ ಮಾಡುವ ಸ್ಥಳವಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತರು ಮಾಡಿದ ಮನವಿಗೆ ರಾಹುಲ್ ಗಾಂಧಿ ಕ್ಯಾರೇ ಅನ್ನಲಿಲ್ಲ.

ಆಗ ಪೊಲೀಸರು ರಾಹುಲ್ ಗಾಂಧಿ ಮತ್ತು ಗರೆವಾಲ್ ಕುಟುಂಬದವರನ್ನು ವಶಕ್ಕೆ ಪಡೆದು ಮಂದಿರ್ ಮಾರ್ಗ್ ಠಾಣೆಗೆ ಕರೆದೊಯ್ದರು. ಆಗ ಠಾಣೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ರಾಹುಲ್ ತರಾಟೆಗೆ ತೆಗೆದುಕೊಂಡರು.
ನಿಮಗೆ ನಾಚಿಕೆಯಾಗಲ್ವಾ ಮುಂತಾದ ಪ್ರಶ್ನೆಗೆ ಯಾವ ರೀತಿ ಉತ್ತರಿಸಬೇಕೆಂದ ತಿಳಿಯದ ಪೊಲೀಸ್ ಅಧಿಕಾರಿ, ಇಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ರಾಹುಲ್ ಗಾಂಧಿಗೆ ವಿವರಿಸುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
OROP ವಿಳಂಬವಾಗುತ್ತಿರುವುದಕ್ಕೆ ಬೇಸತ್ತು ಮಾಜಿ ಸೈನಿಕ ರಾಂ ಕಿಶನ್ ಗರೆವಾಲ್ ಮಂಗಳವಾರ ( ನ 1) ಆತ್ಮಹತ್ಯೆಗೆ ಶರಣಾಗಿದ್ದರು.
ಕೇಜ್ರಿವಾಲ್ ವಶಕ್ಕೆ: OROP ಸಂಬಂಧ ಪ್ರತಿಭಟನೆಗೆ ಮುಂದಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ನನ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ, ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವುದರ ಬಗ್ಗೆ ತಿಳಿದಿಲ್ಲ ಎಂದು ಖುದ್ದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಕೇಜ್ರಿವಾಲ್ ಅವರನ್ನು ಆರ್ ಕೆ ಪುರಂ ಠಾಣೆಗೆ ಕರೆದೊಯ್ಯಲಾಗಿದೆ.












Click it and Unblock the Notifications