ಮಿರ್ಚಿ ಆರ್ ಜೆ ಶುಭಂ ಸಾವಿಗೆ ಆತನ ನಿರ್ಲಕ್ಷ್ಯವೇ ಕಾರಣ?
ನಾಗ್ಪುರ, ಅಕ್ಟೋಬರ್ 23: ರೇಡಿಯೋ ಮಿರ್ಚಿಯಲ್ಲಿ ಹಾಯ್ ನಾಗ್ಪುರ್ ಶೋನ ರೇಡಿಯೋ ಜಾಕಿ (ಆರ್ ಜೆ) ನಾಗ್ಪುರ ಮೂಲದ ಶುಭಂ ಕೆಚೆ ಸಾವಿನ ಸುದ್ದಿ ಎಲ್ಲರಿಗೂ ತಿಳಿದಿರಬಹುದು. ಶೋ ಮಧ್ಯದಲ್ಲೇ ಹೃದಯಾಘಾತಕ್ಕೊಳಗಾಗಿ ಆತ ಮೃತಪಟ್ಟ ಘಟನೆ ಹಲವರನ್ನು ಬೆಚ್ಚಿಬೀಳಿಸಿದೆ. ಕಚೇರಿಗೆ ಬಂದಾಗಲೇ ಎದೆನೋವು ಕಾಣಿಸಿಕೊಂಡರೂ ನಿರ್ಲಕ್ಷಿಸಿದ್ದು ಆತನ ಜೀವಕ್ಕೆ ಮಾರಕವಾಯಿತು ಎಂಬ ಅಂಶ ಬೆಳಕಿಗೆ ಬಂದಿದೆ.
24 ವರ್ಷದ ಶುಭಂ ಬೆಳಗ್ಗೆ 9.30ರ ವೇಳೆಗೆ ಎದೆನೋವಿನಿಂದ ಬಳಲಿದ್ದರು. ಗುರುವಾರ ಎಂದಿನಂತೆ 'Hi Nagpur" ಶೋ ನಡೆಸಿಕೊಡುತ್ತಿದ್ದ ಶುಭಂ ಅವರಿಗೆ ಮೊದಲ ಬಾರಿಗೆ ಎದೆ ನೋವು ಕಾಣಿಸಿಕೊಂಡಾಗಲೇ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದರೆ, ಜೀವ ಉಳಿಸುವ ಸಾಧ್ಯತೆ ಹೆಚ್ಚಿತ್ತು. ಶುಭಂ ಪ್ರಾಣ ಹೋಗಿ 10-15 ನಿಮಿಷವಾದ ಮೇಲೆ ಆಸ್ಪತ್ರೆಗೆ ಕರೆತರಲಾಗಿದೆ. ಸರ್ಕಾರಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಡಾ. ಸಂಜಯ್ ಕೃಪಲಾನಿ ಹೇಳಿದ್ದಾರೆ.[ಸ್ಟೇಜ್ ಶೋ ಮಧ್ಯದಲ್ಲೇ ಹೃದಯಾಘಾತ, ನೃತ್ಯಗಾರ್ತಿ ದುರ್ಮರಣ]

ಆದರೆ, ಕಾರ್ಯಕ್ರಮದ ಮಧ್ಯೆ ಬ್ರೇಕ್ ಸಿಕ್ಕಾಗ ರೆಕಾರ್ಡಿಂಗ್ ರೂಮಿನಿಂದ ಹೊರಬಂದಿದ್ದ ಶುಭಂ ಅವರು ಬಾತ್ ರೂಮ್ ಗೆ ಹೋಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಕಚೇರಿಯ ಭದ್ರತಾ ಸಿಬ್ಬಂದಿ ಬಂದು ನೋಡುವಷ್ಟರಲ್ಲಿ ಶುಭಂ ಅವರ ಹೃದಯ ಬಡಿತ ನಿಂತಿದೆ. ಚಿಕಿತ್ಸೆ ಕೊಡಿಸಿ ಶುಭಂರನ್ನು ಉಳಿಸಿಕೊಳ್ಳಲು ಸಾದರ್ ಸಮೀಪವಿದ್ದ ಹೈಟೆಕ್ ಆಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಶುಭಂ ಪ್ರಾಣ ಹಾರಿ ಹೋಗಿದೆ.[ಜಗಮೆಚ್ಚಿದ ಬೆಂಗಳೂರು ಹುಡ್ಗ ರಿಯಾಜ್ ಬಾಷಾ]
ಆದರೆ, ಆರ್ ಜೆ ಶುಭಂ ಸಹದ್ಯೋಗಿ ಹೇಳಿಕೆ ಹೀಗಿದೆ: ಬೆಳಗ್ಗೆ ಕಚೇರಿಯಲ್ಲಿ ಹೆಚ್ಚು ಜನರು ಇರಲಿಲ್ಲ, ಬಾತ್ ರೂಮಿನಲ್ಲಿ ಕುಸಿದು ಬೀಳುತ್ತಿದ್ದಂತೆ ಶುಭಂ ನೆರವಿಗಾಗಿ ಕೂಗಿದ್ದಾನೆ. ಭದ್ರತಾ ಸಿಬ್ಬಂದಿ ಜತೆ ನಾನು ಆಸ್ಪತ್ರೆಗೆ ಕರೆದೊಯ್ದೆ.
ಆದರೆ, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೃದಯ ಹಾಗೂ ವಿಸೇರಾದ ಭಾಗಗಳನ್ನು ಕೆಮಿಕಲ್ ಅನಾಲಿಸಿಸ್ ಗಾಗಿ ಕಳಿಸಲಾಗಿದೆ. ಕೆಲಸದ ಒತ್ತಡದಿಂದ ಹೃದಯಾಘಾತ ಬಂದಿರುವ ಸಂಭವಿದ್ದರೂ ಸದ್ಯಕ್ಕೆ ಪೂರ್ಣ ಮಾಹಿತಿ ಇಲ್ಲ ಎಂದು ನಾಗ್ಪುರ ಪೊಲೀಸರು ಹೇಳಿದ್ದಾರೆ.
ಸಣ್ಣ ಪಾನ್ ಶಾಪ್ ಇಟ್ಟುಕೊಂಡಿರುವ ಆರ್ ಜೆ ಶುಭಂ ಅವರ ಮನೆಯವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಮೂರು ವರ್ಷಗಳ ಹಿಂದೆ ಶುಭಂ ಅವರ ತಂದೆ ಮೃತಪಟ್ಟಿದ್ದು, ತಾಯಿ ಹಾಗೂ ಸಹೋದರಿಯೊಬ್ಬರನ್ನು ಸಾಕುವ ಜವಾಬ್ಧಾರಿ ಶುಭಂ ಮೇಲಿತ್ತು.












Click it and Unblock the Notifications