Punjab Flood: ಪಂಜಾಬ್ನಲ್ಲಿ ಪ್ರವಾಹ: 41 ಸಾವು, 1,616 ಜನರ ರಕ್ಷಣೆ
ಪಂಜಾಬ್ನಲ್ಲಿ ಭಾರಿ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭಾರಿ ಪ್ರವಾಹದ ಕಾರಣ ಈವರೆಗೂ 41 ಜನ ಸಾವನ್ನಪ್ಪಿದ್ದು, 1,616 ಜನರು ಇನ್ನೂ 173 ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ನ 19 ಜಿಲ್ಲೆಗಳಾದ ಫರೀದ್ಕೋಟ್, ಹೋಶಿಯಾರ್ಪುರ್, ರೂಪನಗರ, ಕಪುರ್ತಲಾ, ಪಟಿಯಾಲ, ಮೋಗಾ, ಲುಧಿಯಾನ, ಎಸ್ಎಎಸ್ ನಗರ, ಜಲಂಧರ್, ಸಂಗ್ರೂರ್, ಎಸ್ಬಿಎಸ್ ನಗರ, ಫಾಜಿಲ್ಕಾ, ಗುರುದಾಸ್ಪುರ್, ಮಾನ್ಸಾ, ಬಟಿಂಡಾ ಮತ್ತು ಪಠಾಣ್ಕೋಟ್ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಸರ್ಕಾರ ಮತ್ತು ರಕ್ಷಣಾ ಏಜೆನ್ಸಿಗಳು ಜಲಾವೃತ ಪ್ರದೇಶಗಳಿಂದ 27,286 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ಇಲಾಖೆ ವರದಿ ಪ್ರಕಾರ ಪ್ರವಾಹದಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ.
ಕೃಷಿ ಭೂಮಿ ಜಲಾವೃತ
ಪಂಜಾಬ್ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳು ಭಾರೀ ಮಳೆಯಿಂದ ಜರ್ಜರಿತವಾಗಿವೆ, ಜನರ ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ ಮತ್ತು ವಸತಿ, ಕೃಷಿ ಭೂಮಿ ಜಲಾವೃತವಾಗಿದೆ. ಅಪಾರ ಪ್ರಮಾಣದ ಕೃಷಿ ಭೂಮಿ ಜಲಾವೃತವಾಗಿದೆ. ಪ್ರವಾಹದಿಂದ ಹಾನಿಗೊಳಗಾದ ಎಲ್ಲಾ 595 ಸ್ಥಳಗಳಿಗೆ ವಿದ್ಯುತ್ ಪೂರೈಕೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ಪಂಜಾಬ್ ವಿದ್ಯುತ್ ಸಚಿವ ಹರ್ಭಜನ್ ಸಿಂಗ್ ಹೇಳಿದ್ದಾರೆ.
ರೂಪನಗರ, ಎಸ್ಎಎಸ್ ನಗರ, ಪಟಿಯಾಲ ಮತ್ತು ಸಂಗ್ರೂರ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರವಾಹದಿಂದಾಗಿ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸ್ಪಿಸಿಎಲ್) ಮೂಲಸೌಕರ್ಯಕ್ಕೆ ಅಪಾರ ಪ್ರಮಾಣದ ಹಾನಿಯಯಾಗಿದೆ ಎಂದು ಹೇಳಿದರು.
"ಮೂಲಸೌಕರ್ಯಗಳ ನಷ್ಟವು ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನ ಮೇಲೆ ಗಮನಾರ್ಹ ಪರಿಣಾಮ ಬೀರಿದೆ, ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯನ್ನು ಮತ್ತೆ ಆರಂಭಿಸಲು ಪಂಜಾಬ್ ವಿದ್ಯುತ್ ಇಲಾಖೆ ಕಾರ್ಯಪಡೆಯು ಹಗಲಿರುಳು ಕೆಲಸ ಮಾಡಿದೆ" ಎಂದು ಸಚಿವ ಹರ್ಭಜನ್ ಸಿಂಗ್ ಹೇಳಿದರು.
ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯಗಳು, ಟೆಲಿಕಾಂ ಮತ್ತು ನೀರು ಪೂರೈಕೆಯಂತಹ ನಿರ್ಣಾಯಕ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರೊಂದಿಗೆ ವಿದ್ಯುತ್ ಮರುಸ್ಥಾಪನೆಗಾಗಿ ಪಿಎಸ್ಪಿಸಿಎಲ್ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರವಾಹದಿಂದಾಗಿ ಪಿಎಸ್ಪಿಸಿಎಲ್ ಅಂದಾಜು 16 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಅವರು ಹೇಳಿದರು. ಹಲವು ಕಂಬಗಳು ಧರೆಗುರುಳಿದ್ದು, ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾವಿವೆ. ಪ್ರವಾಹದಿಂದ ಸಬ್ಸ್ಟೇಷನ್ ಮುಳುಗಡೆಯಾಗಿವೆ, ಉಪಕರಣಗಳು, ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ ಎಂದು ಹೇಳಿದರು.












Click it and Unblock the Notifications