ಪುಲ್ವಾಮಾ ಘಟನೆ: ಇನ್ನಷ್ಟು ಆತ್ಮಹತ್ಯಾ ದಾಳಿಗಳ ಅಪಾಯದ ಮುನ್ಸೂಚನೆಯೇ?
ನವದೆಹಲಿ, ಫೆಬ್ರವರಿ 16: ಅಫ್ಘಾನಿಸ್ತಾನ, ಸಿರಿಯಾ, ಇರಾಕ್ಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಆತ್ಮಾಹುತಿ ಕಾರ್ ಬಾಂಬ್ ದಾಳಿ ಭಾರತದಲ್ಲಿಯೂ ನಡೆದಿದೆ. ಭಾರತದಲ್ಲಿ ಭಯೋತ್ಪಾದನಾ ದಾಳಿಗೂ ಇತಿಹಾಸವಿದೆ. ಆದರೆ, ಹೆಚ್ಚಿನ ದಾಳಿಗಳು ಉಗ್ರರ ಗುಂಡಿನ ದಾಳಿ ಅಥವಾ ಬಾಂಬ್ ಸ್ಫೋಟದಿಂದ ನಡೆದಿದ್ದವು.
ಈ ರೀತಿಯ ಆತ್ಮಾಹುತಿ ದಾಳಿಗಳು ರಾಜಕೀಯ ಕಾರಣಗಳಿಂದ ಭಾರತದಲ್ಲಿ ಬಳಕೆಯಾಗುತ್ತಿರಲಿಲ್ಲ. ಸ್ಥಳೀಯವಾಗಿ ಬೆಳೆದು ಉಗ್ರಗಾಮಿಗಳಾದವರು ಇದರಿಂದ ದೂರವೇ ಇದ್ದರು. ಸ್ಥಳೀಯ ಉಗ್ರರು ಈ ಪ್ರಯೋಗಕ್ಕೆ ಇಷ್ಟು ಸಮಯ ಮುಂದಾಗಿರಲಿಲ್ಲ. ಕಾಶ್ಮೀರ ಕಣಿವೆಯ ಇತಿಹಾಸದಲ್ಲಿ ಸ್ಥಳೀಯನೊಬ್ಬ ನಡೆಸಿದ ಎರಡನೆಯ ಆತ್ಮಾಹುತಿ ದಾಳಿ ಇದು.
ಕಾಶ್ಮೀರದಲ್ಲಿ ಅನೇಕ ಸುಧಾರಿತ ಸ್ಫೋಟಕಗಳ ದಾಳಿ ನಡೆದಿವೆ. ಆದರೆ, ಕಾರ್ ಬಾಂಬ್ ದಾಳಿ ಘಟಿಸಿರಲಿಲ್ಲ. ಈ ದಾಳಿಗಳಲ್ಲಿ ಬಹುತೇಕ ಜೈಶ್ ಎ ಮೊಹಮ್ಮದ್ ಸಂಘಟನೆಯಿಂದ ನಡೆದಿದ್ದರೆ, ದಾಳಿಕೋರರೆಲ್ಲರೂ ಪಾಕಿಸ್ತಾನಿ ರಾಷ್ಟ್ರೀಯರಾಗಿದ್ದರು. ಹೊಸ ಕಾಲಘಟ್ಟದ ಉಗ್ರರು, ಅದರಲ್ಲಿಯೂ ಸ್ಥಳೀಯರು ಈ ರೀತಿಯ ದಾಳಿಗಳಿಂದ ದೂರಿವಿದ್ದರು.
ಆದರೆ, ಪುಲ್ವಾಮಾ ದಾಳಿ ಉಗ್ರರ ದಾಳಿಯ ಸ್ವರೂಪದ ಬಗ್ಗೆ ಆತಂಕ ಮೂಡಿಸಿದೆ. ಭಾರತದಲ್ಲಿಯೂ ಇತರೆ ದೇಶಗಳಂತೆ ಕಾರ್ ಬಾಂಬ್ ಆತ್ಮಾಹುತಿ ದಾಳಿಗಳು ಹೆಚ್ಚಾಗುವ ಭೀತಿ ಉಂಟಾಗಿದೆ.
ಅಫ್ಘಾನಿಸ್ತಾನದಂತಹ ಸ್ಥಳಗಳಲ್ಲಿ ಕಂಡುಬರುವ ಈ ರೀತಿಯ ಹಿಂಸಾಕೃತ್ಯಗಳನ್ನು ಸಹಿಸಿಕೊಳ್ಳುವ ಶಕ್ತಿ ಕಾಶ್ಮೀರಕ್ಕಿಲ್ಲ. ಆದರೆ ದುರದೃಷ್ಟವಶಾತ್ ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರಿಗಳು ಹಿಂಸಾಚಾರವನ್ನು ಎದುರಿಸಿದ ಬಗೆ ಪರಿಸ್ಥಿತಿಯನ್ನು ಇನ್ನಷ್ಟು ಹಾಳುಗೆಡವಿದೆ ಎಂದು ಕಾಶ್ಮೀರ ಮೂಲದ ರಾಜಕೀಯ ವಿಶ್ಲೇಷಕ ನೂರ್ ಮೊಹಮ್ಮದ್ ಬಾಬಾ ಹೇಳಿದ್ದಾರೆ.

ಈ ಹಿಂದಿನ ದಾಳಿಗಳು
ಎಂಬತ್ತರ ದಶಕದ ಬಳಿಕ ಕಾಶ್ಮೀರದಲ್ಲಿ ಸಾವಿರಾರು ಸಂಖ್ಯೆಯ ಸಶಸ್ತ್ರ ಉಗ್ರರು ಇದ್ದರೂ ಆತ್ಮಾಹುತಿ ದಾಳಿಗಳು ನಡೆದಿರಲಿಲ್ಲ. 1999ರಲ್ಲಿ ಜೈಶ್ ಎ ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ನನ್ನು ಭಾರತ ಬಿಡುಗಡೆ ಮಾಡಿದ ಬಳಿಕ ಆ ಸಂಘಟನೆ ಚಾಲ್ತಿಗೆ ಬಂದಿತು.
ಆಫಕ್ ಶಾ ಎಂಬ ಶ್ರೀನಗರ ನಿವಾಸಿ 2000ನೇ ಇಸವಿಯಲ್ಲಿ ಬದಾಮಿ ಬಾಗ್ ಕಂಟೋನ್ಮೆಂಟ್ ಕಡೆ ಕಾರ್ ನುಗ್ಗಿಸಿ ಸ್ಫೋಟಿಸಿಕೊಂಡಿದ್ದ. ಆ ದಾಳಿ ವಿಫಲವಾಗಿತ್ತು. ಆದರೆ ಈ ಮೂಲಕ ಜೈಶ್ ಎ ಮೊಹಮ್ಮದ್ ಸಂಘಟನೆ ಚಿಗುರಿದ್ದನ್ನು ಪ್ರಚುರಪಡಿಸಿದ್ದ.
2001ರಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಶ್ರೀನಗರದ ಹೊರಭಾಗದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ 38 ಜನರ ಸಾವಿಗೆ ಕಾರಣನಾಗಿದ್ದ.
ಅದರ ಬಳಿಕ ಬ್ರಿಟನ್ನಲ್ಲಿ ಜನಿಸಿದ್ದ ಅಬ್ದುಲ್ಲಾ ಎಂಬಾತ ಮಾರುತಿ ಕಾರ್ನಲ್ಲಿ ಸ್ಫೋಟಕಗಳನ್ನು ತುಂಬಿಸಿಕೊಂಡು ಭಾರತೀಯ ಸೇನೆಯ ಕೇಂದ್ರ ಕಚೇರಿಯತ್ತ ದಾಳಿ ನಡೆಸಲು ನುಗ್ಗಿದ್ದ. ಆದರೆ ಈ ದಾಳಿ ಹೆಚ್ಚಿನ ಹಾನಿಯಾಗದೆ ವಿಫಲವಾಗಿತ್ತು.

ಯುವಕರನ್ನು ಸೆಳೆಯುವ ಅಪಾಯ
ಗುರುವಾರ ನಡೆದ ದಾಳಿ ಕಾಶ್ಮೀರದ ಇತಿಹಾಸದಲ್ಲಿಯೇ ಅತಿ ದೊಡ್ಡ ಆತ್ಮಹತ್ಯಾ ದಾಳಿ. ಅದನ್ನು ನಡೆಸಿದವನು ಘಟನೆ ನಡೆದ ಕೇವಲ 10 ಕಿ.ಮೀ. ದೂರದಲ್ಲಿ ನೆಲೆಸಿದ್ದ 22 ವರ್ಷದ ಯುವಕ ಆದಿಲ್ ರಶೀದ್ ದಾರ್.
ಈ ಕೃತ್ಯದ 'ಯಶಸ್ಸು' ಉಗ್ರರಿಗೆ ತಮ್ಮ ಚಟುವಟಿಕೆಗಳು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಗಳನ್ನು ಹೆಚ್ಚಿಸಿದೆ. ಅಲ್ಲದೆ, ಭಯೋತ್ಪಾದನಾ ಚಟುವಟಿಕೆಗಳತ್ತ ಒಲವು ಹೊಂದಿರುವ ಯುವಕರಿಗೆ ಜೈಶ್ ಎ ಮೊಹಮ್ಮದ್ ಸಂಘಟನೆಯತ್ತ ಆಕರ್ಷಣೆ ಉಂಟಾಗುವುದನ್ನು ಅಲ್ಲಗಳೆಯುವಂತಿಲ್ಲ. ದಾರ್, ಈ ಕೃತ್ಯ ನಡೆಸಲು ಒಂದು ವರ್ಷ ಕಾಲ ಕಾದಿದ್ದ.

ಈ ಮಾರ್ಗವನ್ನೇ ಆಯ್ದುಕೊಳ್ಳಬಹುದು
ಕಳೆದ ವರ್ಷ ಭದ್ರತಾ ಪಡೆಗಳು ಸುಮಾರು 250 ಉಗ್ರರನ್ನು ಹತ್ಯೆ ಮಾಡಿವೆ. ಕೆಲವು ಸಾವುಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಉಗ್ರ ಸಂಘಟನೆಗಳು ಪ್ರಮುಖ ದಾಳಿಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಗುರುವಾರ ನಡೆದ ಅನಾಹುತಕಾರಿ ದಾಳಿ, ಉಗ್ರರು ಇನ್ನು ಇದೇ ಮಾರ್ಗವನ್ನು ಅನುಸರಿಸಲು ಪ್ರಚೋದನೆ ನೀಡಲೂಬಹುದು ಎನ್ನುತ್ತಾರೆ ಕಾಶ್ಮೀರ ಮೂಲದ ಪೊಲೀಸ್ ಅಧಿಕಾರಿಯೊಬ್ಬರು. ದೇಶ, ಪ್ರದೇಶ ಮತ್ತು ಧರ್ಮ ವಿರೋಧಿ ಮನಸುಗಳು ಇಂತಹ ಕೃತ್ಯಗಳು ಫಲಪ್ರದವಾದಾಗ ಸಹಜವಾಗಿಯೇ ತಾವೂ ಅದರಲ್ಲಿ ಸೇರಿಸಿಕೊಳ್ಳಬೇಕು ಎಂದು ಆಕರ್ಷಿತವಾಗುತ್ತವೆ.
ರಾಜಕೀಯ ಚಳವಳಿಯೊಂದನ್ನು ಈ ರೀತಿ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಥಳೀಯರು ಕೂಡ ಪ್ರಶ್ನಿಸಿದ್ದಾರೆ. 'ಇದು ಕಾಶ್ಮೀರದಲ್ಲಿ ನಡೆಯುತ್ತಿದೆಯೇ? ನಾವು ಎತ್ತ ಸಾಗುತ್ತಿದ್ದೇವೆ? ಇದು ಅಫ್ಘಾನಿಸ್ತಾನದಂತೆ ಕಾಣಿಸುತ್ತಿದೆಯೇ? ಪ್ರತಿ ಅಮಾಯಕರ ಹತ್ಯೆಯನ್ನೂ ನಾವು ಖಂಡಿಸಬೇಕು. ಇದು ಭಯಾನಕವಾದದು' ಎಂದು ಜಾವೇದ್ ನಬಿ ಎಂಬುವವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.

ಆತ್ಮಹತ್ಯಾ ದಾಳಿಯ ಆಯ್ಕೆ ಏಕೆ?
ಆತ್ಮಹತ್ಯಾ ದಾಳಿಗಳಿಗೆ ಹೆಚ್ಚಿನ ಖರ್ಚು ಆಗುವುದಿಲ್ಲ. ಅಲ್ಲದೆ ಇದು ಹೆಚ್ಚಿನ ಸಂಖ್ಯೆಯ ಸಾವು ನೋವುಗಳಿಗೆ ಕಾರಣವಾಗಬಲ್ಲದು. ಉಗ್ರರು ದಾಳಿನ ನಡೆಸಲು ಮೊದಲು ಅದರ ರೂಪುರೇಷೆ ಸಿದ್ಧಪಡಿಸುತ್ತಾರೆ. ಮದ್ದುಗುಂಡು, ಬಂದೂಕುಗಳನ್ನು ಸಿದ್ಧಪಡಿಸುವುದು, ನುಗ್ಗುವ ದಾರಿ, ಎಲ್ಲೆಲ್ಲಿ ದಾಳಿ ನಡೆಸಬೇಕು, ಬಳಿಕ ಅಲ್ಲಿಂದ ಹೇಗೆ ಹೊರಬರಬೇಕು ಎಂಬುದೆಲ್ಲವೂ ಯೋಜಿತವಾಗಿರುತ್ತವೆ. ಆದರೆ, ಆತ್ಮಹತ್ಯಾ ದಾಳಿಯಲ್ಲಿ ಇಷ್ಟು ಕೆಲಸಗಳಿರುವುದಿಲ್ಲ. ಸ್ಫೋಟಕ ಮತ್ತು ಗುರಿಗಳಿದ್ದರೆ ಸಾಕು. ಅಲ್ಲದೆ, ನಾಲ್ಕೈದು ಜನರು ಇಲ್ಲಿಗೆ ಹೋಗಬೇಕಿಲ್ಲ. ಸಾಯಲು ಸಿದ್ಧನಿರುವ ಒಬ್ಬ ಸಾಕು. ಇಲ್ಲಿ ಸಾಯುತ್ತಲೇ ಸಾಯಿಸುವುದು ಅಂತಿಮ ಗುರಿಯಾಗಿರುತ್ತದೆ. ಅದಕ್ಕೆ ಸಿದ್ಧರಿರುವ ಯುವಕರೂ ಸಿದ್ಧರಾಗುತ್ತಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿ.

ಸಂಕೋಚ ಸ್ವಭಾವದವರೇ ಹೀಗಾಗುತ್ತಿದ್ದಾರೆ!
ಗುರುವಾರ ದಾಳಿ ನಡೆಸಿದ ಆದಿಲ್ನಂತೆಯೇ ಮೊದಲ ಬಾರಿಗೆ ಆತ್ಮಹತ್ಯಾ ದಾಳಿ ನಡೆಸಿದ್ದ ಆಫಕ್ ಶಾ ಕೂಡ ತುಂಬಾ ನಾಚಿಕೆ ಸ್ವಭಾವದ ಮತ್ತು ಅಂತರ್ಮುಖಿ ವ್ಯಕ್ತಿತ್ವದವನಾಗಿದ್ದ. ಸಾಯುವಾಗ ಆತನಿಗೆ 17 ವರ್ಷ ವಯಸ್ಸು. ವೈದ್ಯನಾಗಬೇಕು ಎಂಬ ಆಸೆಯಿಂದ ಓದುತ್ತಿದ್ದ.
'ಆದಿಲ್ ಇಂತಹ ದಾಳಿ ನಡೆಸುತ್ತಾನೆ ಎಂದು ನಾನು ಊಹಿಸಲೂ ಸಾಧ್ಯವಿಲ್ಲ. ಆದರೆ, ಇದು ಕಾಶ್ಮೀರ. ಈಗ ಏನು ಬೇಕಾದರೂ ಸಂಭವಿಸಬಹುದು' ಎಂದು ಆದಿಲ್ ಬೆಳೆದ ಪುಲ್ವಾಮಾ ಜಿಲ್ಲೆಯ ಕಾಕಪೊರಾ ಪ್ರದೇಶದ ಗಂಡಿಬಾಗ್ ನಿವಾಸಿ ಆಶಿಕ್ ಅಹ್ಮದ್ ಹೇಳುತ್ತಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications