ಭಾರತೀಯ ವೈದ್ಯರ ನಿಯೋಗದ ಪಾಕಿಸ್ತಾನ ಪ್ರವಾಸ ರದ್ದು
ನವದೆಹಲಿ, ಫೆಬ್ರವರಿ 16: ಪಲ್ವಾಮಾ ಅತ್ಮಾಹುಳಿ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದೆ. ನಂತರ ಪಾಕಿಸ್ತಾನದಿಂದ ಆಮದಾಗುವ ಎಲ್ಲಾ ವಸ್ತುಗಳ ಮೇಲಿನ ಆಮದು ತೆರಿಗೆಯನ್ನು ಶೇ.200ರಷ್ಟು ಹೆಚ್ಚಿಸಿದೆ. ಈಗ ಪಾಕಿಸ್ತಾನಕ್ಕೆ ತೆರಳಬೇಕಿದ್ದ ಭಾರತೀಯ ವೈದ್ಯರ ನಿಯೋಗವು ತನ್ನ ಪ್ರವಾಸವನ್ನು ರದ್ದುಗೊಳಿಸಿದೆ.
ಲಾಹೋರ್ ನಲ್ಲಿ ಮಾರ್ಚ್ 07ರಂದು ನಿಗದಿಯಾಗಿದ್ದ 13ನೇ ಸಾರ್ಕ್ ವೈದ್ಯರ ಕಾಂಗ್ರೆಸ್ ಸಮಾವೇಶಕ್ಕೆ ಭಾರತೀಯ ನಿಯೋಗ ತೆರಳಬೇಕಿತ್ತು. ಆದರೆ, ಪುಲ್ವಾಮಾ ದಾಳಿ ನಂತರ ಪಾಕಿಸ್ತಾನ ವಿರುದ್ಧ ಭಾರತ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪೋಖ್ರಾನ್ ನಲ್ಲಿ ಭಾರತೀಯ ವಾಯುಸೇನೆಯಿಂದ ಶಕ್ತಿ ಪ್ರದರ್ಶನವೂ ಪಾಕಿಸ್ತಾನಕ್ಕೆ ದಿಗಿಲು ಹುಟ್ಟಿಸಿರುತ್ತದೆ.

ಪಾಕಿಸ್ತಾನವನ್ನು ವಿಶ್ವಮಟ್ಟದಲ್ಲಿ ಏಕಾಂಗಿಯನ್ನಾಗಿಸಲು ಸಾಧ್ಯವಿರುವ ಎಲ್ಲಾ ರಾಜತಾಂತ್ರಿಕ ಕ್ರಮಗಳನ್ನು ಭಾರತ ಕೈಗೊಳ್ಳಲಿದೆ. ಪಾಕಿಸ್ತಾನದಿಂದ ಆಮದಾಗುವ ಎಲ್ಲಾ ವಸ್ತುಗಳ ಮೇಲಿನ ಮೂಲ ಆಮದು ತೆರಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇ.200ರಷ್ಟು ಹೆಚ್ಚಿಸಲಾಗಿದೆ ಎಂದು ಜೇಟ್ಲಿ ಟ್ವೀಟ್ ಮಾಡಿದ್ದಾರೆ.
2018ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ವಿದೇಶ ವ್ಯವಹಾರದ ಶೇ.0.4ರಷ್ಟು ಅಂದರೆ ಪಾಕಿಸ್ತಾನದಿಂದ 2.40 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ವಸ್ತುಗಳು ಭಾರತಕ್ಕೆ ಆಮದಾಗಿದೆ. ಭಾರತದಿಂದ ಪಾಕ್ ಆಮದು ಮಾಡಿಕೊಳ್ಳುವುದಕ್ಕಿಂತ ನಾಲ್ಕುಪಟ್ಟು ಭಾರತಕ್ಕೆ ರಫ್ತು ಮಾಡುತ್ತಿದೆ.
ಭಾರತದಿಂದ ಹತ್ತಿ, ಬಣ್ಣ, ರಾಸಾಯನಿಕ ವಸ್ತುಗಳು, ತರಕಾರಿ, ಕಬ್ಬಿಣ ಮತ್ತು ಸ್ಟೀಲ್ ಉತ್ಪನ್ನಗಳು ಪಾಕಿಸ್ತಾನಕ್ಕೆ ರಫ್ತಾಗುತ್ತಿದೆ. ಪಾಕಿಸ್ತಾನದಿಂದ ಹಣ್ಣು, ಸಿಮೆಂಟ್, ಸಾಂಬಾರ ವಸ್ತು ಹಾಗೂ ಚರ್ಮದ ಉತ್ಪನ್ನಗಳು ಆಮದಾಗುತ್ತಿವೆ.
ಎಲ್ಲಾ ಡಬ್ಯುಟಿಒ(ವಿಶ್ವ ವ್ಯಾಪಾರ ಸಂಘಟನೆಯ) ಸದಸ್ಯ ರಾಷ್ಟ್ರಗಳೂ ಮತ್ತೊಂದು ಸದಸ್ಯ ರಾಷ್ಟ್ರಕ್ಕೆ ಪರಮಾಪ್ತ ಸ್ಥಾನಮಾನ ನೀಡಬೇಕೆಂದು 1988ರ ಜಿಎಟಿಟಿ ಒಪ್ಪಂದದಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತವೂ ಪಾಕ್ಗೆ ಪರಮಾಪ್ತ ಸ್ಥಾನಮಾನ ನೀಡಿತ್ತು.












Click it and Unblock the Notifications