ಚಿತ್ರಗಳು : ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ನಾಯಕರು
ನವದೆಹಲಿ, ಫೆಬ್ರವರಿ 16 : ಪುಲ್ವಾಮದ ಅವಂತಿಪುರ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರ ಕಾಫಿನ್ ಬಾಕ್ಸ್ ನವದೆಹಲಿ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಯೋಧರಿಗೆ ಅಂತಿನ ನಮನ ಸಲ್ಲಿಸಿದರು.
ಶುಕ್ರವಾರ ರಾತ್ರಿ ವಿಶೇಷ ಸೇನಾ ವಿಮಾನದ ಮೂಲಕ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪಾರ್ಥಿವ ಶರೀರವನ್ನು ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ತರಲಾಯಿತು.
ಮೊದಲು ಸೇನಾಪಡೆಯಿಂದ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗೃಹ ಸಚಿವ ರಾಜನಾಥ್ ಸಿಂಗ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
ವಿಮಾನ ನಿಲ್ದಾಣದಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಕಾಫಿನ್ ಬಾಕ್ಸ್ಗಳನ್ನು ಯೋಧರ ತವರು ರಾಜ್ಯಕ್ಕೆ ಕಳುಹಿಸಲಾಯಿತು. ಕರ್ನಾಟಕ ಯೋಧ ಎಚ್.ಗುರು ಅವರು ಸಹ ಹುತಾತ್ಮರಾಗಿದ್ದು, ಶನಿವಾರ ಬೆಳಗ್ಗೆ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಲಿದೆ.

ನಮಸ್ಕರಿಸಿ ಗೌರವ
ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರ ಕಾಫಿನ್ ಬಾಕ್ಸ್ಗಳನ್ನು ಸಾಲಾಗಿ ಜೋಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಯೋಧರ ಶವ ಪೆಟ್ಟಿಗೆಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿ ಗೌರವ ಸಲ್ಲಿಸಿದರು.

ರಕ್ಷಣಾ ಸಚಿವರಿಂದ ಗೌರವ
ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮನ್ ಅವರು ಹುತಾತ್ಮರಾದ ಯೋಧರಿಗೆ ಅಂತಿಮ ನಮನವನ್ನು ಸಲ್ಲಿಸಿದರು. ಮೂರು ಸೇನಾ ಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಎಐಸಿಸಿ ಅಧ್ಯಕ್ಷರಿಂದ ನಮನ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಸಂಜೆ ಪಾಲಂ ವಿಮಾನ ನಿಲ್ದಾಣಕ್ಕೆ ತೆರಳಿ ಪುಲ್ವಾಮದ ಅವಂತಿಪುರ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು.

ಗೃಹ ಸಚಿವರಿಂದ ನಮನ
ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯೋಧರ ಪಾರ್ಥಿವ ಶರೀರಕ್ಕೆ ಹೆಗೆಲು ಕೊಟ್ಟಿದ್ದರು. ಪಾಲಂ ವಿಮಾನ ನಿಲ್ದಾಣಕ್ಕೂ ಆಗಮಿಸಿದ ಅವರು ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು.

ಸೇನಾಪಡೆಯಿಂದ ಅಂತಿಮ ನಮನ
ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರ ಕಾಫಿನ್ ಬಾಕ್ಸ್ ನವದೆಹಲಿ ತಲುಪುತ್ತಿದ್ದಂತೆ ಎಲ್ಲಾ ಸೇನೆಯ ಮುಖ್ಯಸ್ಥರು ಆಗಮಿಸಿದರು. ಸೇನಾಪಡೆಯಿಂದ ಹುತಾತ್ಮ ಯೋಧರಿಗೆ ಅಂತಿಮ ನಮನವನ್ನು ಸಲ್ಲಿಸಲಾಯಿತು.












Click it and Unblock the Notifications