ಫೆಬ್ರವರಿ.14 'ಪ್ರೇಮಿಗಳ ದಿನ'ವಲ್ಲ ಭಾರತೀಯರ ಪಾಲಿಗೆ 'ಕರಾಳ ದಿನ'!
ಶ್ರೀನಗರ್, ಫೆಬ್ರವರಿ.14: ರಾಷ್ಟ್ರವೇ ಪ್ರೇಮಿಗಳ ದಿನದ ಸಂಭ್ರಮದಲ್ಲಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾರತದ ಪಾಲಿಗೆ ಫೆಬ್ರವರಿ.14 ಕರಾಳ ದಿನವಾಗಿ ಬದಲಾಗುತ್ತಿರಲಿಲ್ಲ. ಆದರೆ ಕಣಿವೆ ರಾಜ್ಯದಲ್ಲಿ ನಡೆದ ಪುಲ್ವಾಮಾ ದಾಳಿ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸಿ ಬಿಟ್ಟಿತು.
ಸೂರ್ಯ ಮುಳುಗುತ್ತಿದ್ದಂತೆ ಉಗ್ರರು ಮೆರೆದ ಅಟ್ಟಹಾಸಕ್ಕೆ ಭಾರತೀಯ ವೀರಯೋಧರು ವೀರ ಮರಣ ಅಪ್ಪಿದರು. ಒಬ್ಬರಲ್ಲ.. ಇಬ್ಬರಲ್ಲ.. 40 ಮಂದಿ ಸಿಆರ್ ಪಿಎಫ್ ಯೋಧರು ಭಾರತ ಮಾತೆ ಶಿಖರದ ಮಣ್ಣಿನಲ್ಲಿ ನೆತ್ತರು ಸುರಿಸುತ್ತಾ ಹುತಾತ್ಮರ ಪಟ್ಟಿಗೆ ಸೇರಿದರು.
2019ರ ಫೆಬ್ರವರಿ.14ರಂದು ನಡೆದ ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಈ ಶುಕ್ರವಾರವನ್ನು ಭಾರತೀಯರೆಲ್ಲ ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ. ಆ ಮೂಲಕ ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ. ಹಾಗಾದರೆ ಅಂದು ನಡೆದ ಉಗ್ರರ ದಾಳಿ ಹೇಗಿತ್ತು. ವರ್ಷದ ಹಿಂದೆ ಇದೇ ಫೆಬ್ರವರಿ.14ರಂದು ಪುಲ್ವಾಮಾದಲ್ಲಿ ಏನೆಲ್ಲಾ ಆಯಿತು ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.

ಶ್ರೀನಗರದತ್ತ 2,547 ಸಿಆರ್ ಪಿಎಫ್ ಯೋಧರು
ಕಣಿವೆ ರಾಜ್ಯದಲ್ಲಿ ಮೂರು ದಿನಗಳಿಂದ ಮಂಜು ಕವಿದ ಹಿನ್ನೆಲೆಯಲ್ಲಿ ಸಿಆರ್ ಪಿಎಫ್ ಯೋಧರು ಮಧ್ಯಾಹ್ನದ ಬಳಿಕ ಶ್ರೀನಗರದತ್ತ ಪ್ರಯಾಣಿಸುತ್ತಿದ್ದರು. 78 ಸೇವಾ ವಾಹನಗಳಲ್ಲಿ 2,547 ಸಿಆರ್ ಪಿಎಫ್ ಯೋಧರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳುತ್ತಿದ್ದರು.

ಪುಲ್ವಾಮಾದ ಅವಂತಿಪೊರ್ ನಲ್ಲಿ ಸ್ಫೋಟ
ಶ್ರೀನಗರಕ್ಕೆ ಇನ್ನೇನು 30 ಕಿಲೋ ಮೀಟರ್ ಗಳ ಅಂತರವಷ್ಟೇ. ಪುಲ್ವಾಮಾ ಬಳಿಯ ಅವಂತಿಪೊರ್ ಸಮೀಪದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲೇ ಸೇನಾ ವಾಹನ ಸ್ಫೋಟಗೊಂಡಿತು. ಜೈಷ್-ಇ-ಮೊಹಮ್ಮದ್ ಸಂಘಟನೆಯ ವಾಹನದಲ್ಲಿದ್ದ ಆತ್ಮಾಹುತಿ ಬಾಂಬರ್, 76ನೇ ಬೆಟಾಲಿಯನ್ ಇರುವ 5ನೇ ಸೇನಾ ವಾಹನಕ್ಕೆ ಡಿಕ್ಕಿ ಹೊಡೆದನು. ಇದರಿಂದ 6ನೇ ಸೇನಾ ವಾಹನದಲ್ಲಿದ್ದ ಯೋಧರು ಕೂಡಾ ಗಾಯಗೊಂಡಿದ್ದರು.

40 ಯೋಧರು ಹುತಾತ್ಮ, 39 ಮಂದಿಗೆ ಗಾಯ
ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ಸೇನಾ ವಾಹನಕ್ಕೆ ಸ್ಫೋಟಕಗಳನ್ನು ತುಂಬಿದ ವಾಹನದಿಂದ ಡಿಕ್ಕಿ ಹೊಡೆಯುತ್ತಿದ್ದಂತೆ ಸೇನಾ ವಾಹನವು ಸ್ಫೋಟಗೊಳ್ಳುತ್ತದೆ. ಇದರಿಂದ ಸ್ಥಳದಲ್ಲೇ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದರೆ, 39 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

80 ಕೆಜಿ ಆರ್ ಡಿಎಕ್ಸ್, 300 ಕೆಜಿ ಸ್ಪೋಟಕ
ಇನ್ನು, ಜೈಷ್-ಇ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ಬಾಂಬರ್ ತೆಗೆದುಕೊಂಡು ಬಂದಿದ್ದ ವಾಹನದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ತುಂಬಲಾಗಿತ್ತು. ಬರೋಬ್ಬರಿ 300 ಕೆಜಿ ಸ್ಫೋಟಕಗಳ ಜೊತೆಗೆ 80 ಕೆಜಿ ಆರ್ ಡಿಎಕ್ಸ್ ನ್ನು ವಾಹನದಲ್ಲಿ ತುಂಬಿಕೊಂಡು ಬಂದಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿತ್ತು.

ಪಾಕಿಸ್ತಾನಕ್ಕೆ ಪ್ರಧಾನಮಂತ್ರಿ ಮೋದಿ ಎಚ್ಚರಿಕೆ
ಪುಲ್ವಾಮಾ ದಾಳಿ ಹಿಂದಿರುವ ರಾಷ್ಟ್ರ ಮತ್ತು ಉಗ್ರ ಸಂಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆಯನ್ನು ನೀಡಿದ್ದರು. ಭಾರತೀಯ ಯೋಧರ ಸಾವಿನಿಂದ ಹೆತ್ತವರು ಮತ್ತು ಸಂಬಂಧಿಕರು ಸುರಿಸುತ್ತಿರುವ ಪ್ರತಿಹನಿ ಕಣ್ಣೀರಿಗೂ ಪ್ರತೀಕಾರದ ದಂಡವನ್ನು ತೆರಬೇಕಾಗುತ್ತದೆ. ಭಾರತೀಯ ಸೇನಾ ಯೋಧರ ಎದೆಯಲ್ಲಿ ಪ್ರತೀಕಾರದ ಕಿಚ್ಚು ಹೊತ್ತಿಕೊಂಡಿರುವ ಬಗ್ಗೆ ತಿಳಿದಿದೆ. ಅದಕ್ಕಾಗಿ ಸಮಯ ಮತ್ತು ಸ್ಥಳವನ್ನು ನೀವೇ ನಿರ್ಧರಿಸಿ, ಸರ್ಕಾರವು ಸದಾ ನಿಮ್ಮ ಬೆಂಬಲಕ್ಕೆ ನಿಂತಿರುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದರು.

ಚೀನಾ ಸೇರಿದಂತೆ ಹಲವು ರಾಷ್ಟ್ರಗಳಿಂದ ಪಾಕ್ ಗೆ ಛೀಮಾರಿ
ಪುಲ್ವಾಮಾ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಭಾರತವು ಖಡಕ್ ಸಂದೇಶವನ್ನು ರವಾನಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಬಟಾಬಯಲಾಯಿತು. ಪಾಕ್ ಮಿತ್ರರಾಷ್ಟ್ರವೆಂದೇ ಗುರುತಿಸಿ ಕೊಂಡಿದ್ದ ಚೀನಾ ಆದಿಯಾಗಿ ಅಮೆರಿಕಾ, ಫ್ರಾನ್ಸ್, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕಿದರು.












Click it and Unblock the Notifications