ಗೊಂದಲಕ್ಕೆ ತೆರೆ: ಪುದುಚೇರಿ ಸಚಿವ ಸಂಪುಟಕ್ಕೆ ಸೇರಿದ ಐವರು ಸಚಿವರು!
ಪುದುಚೇರಿ, ಜೂನ್ 27: ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) ನೇತೃತ್ವದ ಪಕ್ಷಕ್ಕೆ ಗದ್ದುಗೆ ಒಲಿದಿದೆ. ಆದರೆ ಸರ್ಕಾರ ರಚನೆ ಬಳಿಕ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಂಪುಟ ಸರ್ಕಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವವರು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಮುಖ್ಯಮಂತ್ರಿ ಎನ್ ರಂಗಸ್ವಾಮಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಇಬ್ಬರು ಬಿಜೆಪಿ ಶಾಸಕರು ಸೇರಿದಂತೆ ಐವರಿಗೆ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾನುವಾರ ರಾಜ ನಿವಾಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ತಮಿಲಿಸಾಯಿ ಸೌಂದರಾಜನ್ ನೂತನ ಸಚಿವರಾದ ಎ ನಮಸ್ಸಿವಾಯಂ, ಕೆ. ಲಕ್ಷ್ಮಿ ನಾರಾಯಣನ್, ಸಿ ದೇಜುಕುಮಾರ್, ಚಂದಿರ ಪ್ರಿಯಾಂಗ್ ಮತ್ತು ಎಕೆ ಸಾಯಿ ಜೆ ಸರವಣ ಕುಮಾರ್ ರಿಗೆ ಪ್ರಮಾಣವಚನ ಬೋಧಿಸಿದರು.
ಸರಳವಾಗಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯ ಸಂಪುಟ ಸೇರಿದ ಎಲ್ಲ ನೂತನ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಖಾತೆ ಹಂಚಿಕೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ:
ನೂತನ ಸಚಿವರಾದ ಕೆ. ಲಕ್ಷ್ಮಿ ನಾರಾಯಣನ್, ಸಿ ದೇಜುಕುಮಾರ್, ಚಂದಿರ ಪ್ರಿಯಾಂಗ್ ಎಐಎನ್ಆರ್ ಸಿ ಪಕ್ಷದಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದು, ಉಳಿದ ಎ ನಮಸ್ಸಿವಾಯಂ ಮತ್ತು ಎಕೆ ಸಾಯಿ ಜೆ ಸರವಣ ಕುಮಾರ್ ಬಿಜೆಪಿಯ ಶಾಸಕರಾಗಿದ್ದಾರೆ. ಈ ಐವರು ನೂತನ ಸಚಿವರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
41 ವರ್ಷಗಳ ನಂತರ ಮೊದಲ ದಾಖಲೆ:
ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಂದಿರ ಪ್ರಿಯಾಂಗ್ ರಿಗೆ ಸಚಿವ ಸ್ಥಾನ ನೀಡುವ ಮೂಲಕ 41 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸಚಿವರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು 1980-83ರ ಅವಧಿಯಲ್ಲಿ ಡಿಎಂಕೆ ನೇತೃತ್ವದ ಮುಖ್ಯಮಂತ್ರಿ ಎಂ ಡಿ ಆರ್ ರಾಮಚಂದ್ರನ್ ಸರ್ಕಾರದಲ್ಲಿ ರೇಣುಕಾ ಅಪ್ಪಾದೊರೈ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದರು.

ಪುದುಚೇರಿ ಕೇಂದ್ರಾಡಳಿತ ಪ್ರದೇಶದ 30 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಎನ್ ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಿತು. ಕಳೆದ ಮೇ 7ರಂದು ಎಐಎನ್ಆರ್ ಸಿ ಸಂಸ್ಥಾಪಕ ಹಾಗೂ ಶಾಸಕ ಎನ್ ರಂಗಸ್ವಾಮಿ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು. ತದನಂತರದಲ್ಲಿ ಸಂಪುಟ ರಚನೆಗಾಗಿ ಒಂದು ತಿಂಗಳವರೆಗೂ ತಿಕ್ಕಾಟ ನಡೆಯಿತು. ಅಂತಿಮವಾಗಿ ಜೂನ್ 23ರಂದು ಸಂಪುಟಕ್ಕೆ ಆಯ್ಕೆಯಾದ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಸಲ್ಲಿಸಿದ್ದರು.












Click it and Unblock the Notifications