ಅಗಲಿದ ಮಹಾನ್ ಚೇತನಕ್ಕೆ ದೇಶಾದ್ಯಂತ ಅಶ್ರುತರ್ಪಣ
ನವದೆಹಲಿ, ಜು. 28: ನಮ್ಮನ್ನು ಅಗಲಿದ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಅನೇಕ ಗಣ್ಯರು ಪಾಲಂ ವಿಮಾನ ನಿಲ್ದಾಣದಲ್ಲಿ ನಮನ ಸಲ್ಲಿಸಿದರು.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]
ಮೇಘಾಲಯದ ಶಿಲ್ಲಾಂಗ್ನಿಂದ ಗುವಾಹತಿ ಮೂಲಕ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಮಧ್ಯಾಹ್ನ 12.30 ಕ್ಕೆ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ತರಲಾಯಿತು. ದೆಹಲಿ ಲೆ.ಗವರ್ನರ್ ನಜೀಬ್ ಜಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಭೂಸೇನೆ, ವಾಯು ಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಕಲಾಂ ಅವರಿಗೆ ನಮನ ಸಲ್ಲಿಸಿದರು.[ಅಬ್ದುಲ್ ಕಲಾಂಗೆ ಕನ್ನಡ ದಿನಪತ್ರಿಕೆಗಳ ಸಲಾಂ]
ಕಲಾಂ ಕುಟುಂಬದವರ ಇಚ್ಛೆಯಂತೆ ಅವರ ಹುಟ್ಟೂರು ತಮಿಳುನಾಡಿನ ರಾಮೇಶ್ವರಂನಲ್ಲಿ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ. ದೆಹಲಿಯ ಕಲಾಂ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. (ಪಿಟಿಐ ಚಿತ್ರಗಳು)
ರಾಷ್ಟ್ರಧ್ವಜ ಇಳಿಸಿ ಗೌರವ ಸೂಚನೆ
ಕಲಾಂ ನಿಧನದ ಹಿನ್ನೆಲೆಯಲ್ಲಿ ಸಂಸತ್ ಭವನದ ಮೇಲಿನ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸೂಚಿಸಲಾಯಿತು.
ಮಾಯಾವತಿ ಸಂತಾಪ
ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಕಲಾಂ ನಿಧನಕ್ಕೆ ನವದೆಹಲಿಯಲ್ಲಿ ಸಂತಾಪ ಸೂಚಿಸಿದರು. ಕಲಾಂ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಕಲಾಂ ಮಾತುಗಳಲ್ಲೇನಿದೆ?
ಪ್ರಧಾನಿ ನರೇಂದ್ರ ಮೋದಿ ಕಲಾಂ ಅವರಿಗೆ ಸಂಬಂಧಿಸಿದ ಪುಸ್ತಕವೊಂದನ್ನು ತದೇಕಚಿತ್ತದಿಂದ ಓದುತ್ತಿರುವುದು. ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಮೋದಿ ಜತೆಗಿದ್ದರು.
ರಾಹುಲ್ ಗಾಂಧಿ ಸಂತಾಪ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಲಾಂ ಅವರ ಆದರ್ಶಗಳನ್ನು ಕೊಂಡಾಡಿದರು. ದೇಶ ಒಬ್ಬ ಅಪ್ರತಿಮ ಜ್ಞಾನಿಯನ್ನು ಕಳೆದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗುವಾಹತಿಯಲ್ಲಿ ಸೈನಿಕರ ನಮನ
ಭಾರತೀಯ ವಾಯುಸೇನೆ ಸೈನಿಕರು ಗುವಾಹತಿಯಲ್ಲಿ ಅಬ್ದುಲ್ ಕಲಾಂ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಇಲ್ಲಿಂದಲೇ ಕಲಾಂ ಶರೀರ ನವದೆಹಲಿಗೆ ರವಾನೆಯಾಯಿತು.
ಲೋಕಸಭೆಯಲ್ಲಿ ಮೌನ
ಲೋಕಸಭಾ ಸದಸ್ಯರು ಒಂದು ನಿಮಿಷ ಕಾಲ ಮೌನಾಚರಣೆ ಮಾಡಿ ಮಾಜಿ ರಾಷ್ಟ್ರಪತಿ ಕಲಾಂ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.
ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ
ಮುಂಬೈನಲ್ಲಿ ಮೊಂಬತ್ತಿ ಬೆಳೆಗಿ ಕಲಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಿದ್ಯಾರ್ಥಿಗಳು. ತಮ್ಮ ಮಾತಿನಿಂದಲೇ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಹುಟ್ಟು ಹಾಕುತ್ತಿದ್ದ ಅಬ್ದುಲ್ ಕಲಾಂ ಇನ್ನು ನೆನಪು ಮಾತ್ರ.
ಕಲಾಂ ಇನ್ನು ನೆನಪು ಮಾತ್ರ
ಅಬ್ದುಲ್ ಕಲಾಂ ಅವರ ಭಾವಚಿತ್ರ ಹಿಡಿದು ಮೊಂಬತ್ತಿ ಬೆಳಗಿಸುವ ಮೂಲಕ ನಾಗರಿಕರು ಶ್ರದ್ಧಾಂಜಲಿ ಸಲ್ಲಿಕೆ ಮಾಡಿದರು.
ಅರುಣ್ ಜೇಟ್ಲಿ ಅಂತಿಮ ನಮನ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಕೆ ಮಾಡಿದರು.
ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಷಿಪಣಿ ಪಿತಾಮಹನಿಗೆ ನವದೆಹಲಿಯಲ್ಲಿ ಅಂತಿಮ ನಮನ ಸಲ್ಲಿಸಿದರು.
ಮನಮೋಹನ್ ಸಿಂಗ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನವದೆಹಲಿಯಲ್ಲಿ ಅಬ್ದುಲ್ ಕಲಾಂ ಅವರ ಅಂತಿಮ ದರ್ಶನ ಪಡೆದರು.
ಮರಳಲ್ಲಿ ಅರಳಿದ ಕಲಾಂ
ಪುರಿಯ ಸಮುದ್ರ ದಂಡೆಯಲ್ಲಿ ಕಲಾವಿದರೊಬ್ಬರು ಕಲಾಂ ಚಿತ್ರವನ್ನು ಬಿಡಿಸಿ ಅಂತಿಮ ನಮನ ಸಲ್ಲಿಕೆ ಮಾಡಿದರು.
ಮಕ್ಕಳ ನೆಚ್ಚಿನ ಕಲಾಂ
ಸದಾ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿದ್ದ ಅಬ್ದುಲ್ ಕಲಾಂ ಅವರಿಗೆ ಚಿಕ್ಕಮಗಳೂರಿನಲ್ಲಿ ಮಕ್ಕಳು ಅಂತಿಮ ನಮನ ಸಲ್ಲಿಕೆ ಮಾಡಿದ್ದು ಹೀಗೆ.