2019 ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಕಣಕ್ಕೆ?
ಲಕ್ನೋ, ಜನವರಿ 24: ನೆಹರೂ ಕುಟುಂಬದ ಮತ್ತೊಂದು ಕುಡಿ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಸದ್ಯದ ಮಾಹಿತಿಗಳ ಪ್ರಕಾರ ಪ್ರಿಯಾಂಕಾ ವಾದ್ರಾ 2019ರ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸದ್ಯ ಈ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ.
ಆಗಾಗ ಪ್ರಚಾರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದವರು ಪ್ರಿಯಾಂಕಾ ವಾದ್ರಾ. ಈ ಹಿಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷ ಮುನ್ನಡೆಸುವಲ್ಲಿ ವಿಫಲವಾದಾಗ, ಗುರಿಯಾದಾಗೆಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಿಯಾಂಕರನ್ನು ಕರೆತರುವಂತೆ ಬೇಡಿಕೆಗಳು ಕೇಳಿ ಬಂದಿದ್ದವು. ಆದರೆ ಸೋನಿಯಾ ಗಾಂಧಿ ಯಾಕೋ ಮಗಳನ್ನು ಚುನಾವಣಾ ರಾಜಕಾರಣಕ್ಕೆ ಎಳೆದು ತರಲು ಮನಸ್ಸು ಮಾಡಿರಲಿಲ್ಲ.[ಉತ್ತರಪ್ರದೇಶ : 105 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಅಂತಿಮ]
ಸದ್ಯ ಪ್ರಿಯಾಂಕ ಆಗಮನಕ್ಕೆ ಸಮಯ ಕೂಡಿ ಬಂದಿರುವಂತೆ ಕಾಣಿಸುತ್ತಿದೆ. ಪ್ರಿಯಾಂಕಾ ಕೂಡಾ ಸಕ್ರಿಯವಾಗಿ ಪಕ್ಷದ ಆಗು ಹೋಗುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿಯ ಹಿಂದಿದ್ದವರು ಕೂಡಾ ಇದೇ ಪ್ರಿಯಾಂಕಾ. ಕೊನೆಯ ಕ್ಷಣದಲ್ಲಿ ಮೈತ್ರಿ ಮುರಿದು ಬೀಳುವ ಸಾಧ್ಯತೆಗಳಿತ್ತು. ಈ ಹಂತದಲ್ಲಿ ಪ್ರಿಯಾಂಕಾ ಗಾಂಧಿ ಎಂಟ್ರಿ ಕೊಟ್ಟು ಮೈತ್ರಿ ಉಳಿಸಿದ್ದಾರೆ. ಈಗಾಗಲೇ ಅವರನ್ನು ಕಾಂಗ್ರೆಸ್-ಎಸ್ಪಿ ಮೈತ್ರಿಯ ರೂವಾರಿ ಎಂದು ಕಾರ್ಯಕರ್ತರು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಈ ಮೂಲಕ ಪರೋಕ್ಷವಾಗಿ ಚುನಾವಣೆಗೆ ಕರೆತರುವಂತೆ ಹೇಳುತ್ತಿದ್ದಾರೆ.[ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ಗೆಲುವಿಗೆ 35-37% ಮತಗಳು ಸಾಕಂತೆ!]
ಇಂಥಹದ್ದೊಂದು ಮೈತ್ರಿ ನಡೆಸುವಂತೆ ಗುಲಾಬ್ ನಬಿ ಅಝಾದ್ ಮತ್ತು ಪ್ರಿಯಾಂಕ ವಾದ್ರಾಗೆ ಸ್ವತಃ ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ಅದರಂತೆ ತಮ್ಮ ಜವಾಬ್ದಾರಿಯನ್ನು ಪ್ರಿಯಾಂಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸೋನಿಯಾ ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು ಅವರ ಜಾಗಕ್ಕೆ ಮಗಳು ಪ್ರಿಯಾಂಕಾರನ್ನು ಕರೆ ತರುವುದು ಉತ್ತಮ ಎಂಬ ಅಭಿಪ್ರಾಯ ಒಂದಷ್ಟು ಕಾಂಗ್ರೆಸ್ಸಿಗರಲ್ಲಿದೆ. ಇದಕ್ಕಾಗಿ ರಾಯಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸಿದರೆ ಹೇಗೆ ಎಂಬ ಆಲೋಚನೆಯೂ ಮೊಳಕೆಯೊಡೆದಿದೆ.
ರಾಯ್ ಬರೇಲಿ ಹಿಂದಿನಿಂದಲೂ ನೆಹರೂ ಕುಟುಂಬದ ಹಿಡತದಲ್ಲಿದೆ. ಇಲ್ಲಿ ಇಂದಿರಾ ಗಾಂಧಿಯೂ ಸ್ಪರ್ಧಿಸುತ್ತಿದ್ದರು. 2004ರಿಂದ ಸೋನಿಯಾ ಈ ಕ್ಷೇತ್ರ ಪ್ರತಿನಿಧಿಸುತ್ತಿ್ದ್ದು ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ. ಹಾಗಾಗಿ ಇದೇ ಪ್ರಿಯಾಂಕಾ ರಾಜಕೀಯ ಪಾದಾರ್ಪಣೆಗೆ ಸೂಕ್ತ ಕ್ಷೇತ್ರ ಎಂದುಕೊಳ್ಳಲಾಗಿದೆ.
ಸದ್ಯ ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಪ್ರಿಯಾಂಕಾ ತೊಡಗಿಸಿಕೊಳ್ಳಲಿದ್ದಾರೆ. ಒಂದೊಮ್ಮೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಚೇತರಿಸಿಕೊಂಡರೆ ಅದರ ಯಶಸ್ಸು ಪ್ರಿಯಾಂಕಾ ಪಾಲಾಗಲಿದೆ. ಆಗ ಅವರ ಆಗಮನ ಸಾಧ್ಯತೆ ಮತ್ತಷ್ಟು ಹೆಚ್ಚಾಗಲಿದೆ.
(ಚಿತ್ರ ಕೃಪೆ: ಪಿಟಿಐ)