'ಚುನಾವಣೆ ಹಿನ್ನೆಲೆ ಕೃಷಿ ಕಾಯ್ದೆ ವಾಪಾಸ್ ಪಡೆದ ಪ್ರಧಾನಿ ಮೋದಿ'
ನವದೆಹಲಿ, ನವೆಂಬರ್ 19: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಾಪಾಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಸೇರಿ ಐದು ರಾಜ್ಯಗಳಲ್ಲಿ ಚುನಾವಣೆಯು ನಡೆಯಲಿರುವ ನಡುವೆ ಪ್ರಧಾನಿ ಈ ಘೋಷಣೆಯನ್ನು ಮಾಡಿರುವುದನ್ನು ವಿರೋಧ ಪಕ್ಷಗಳು ಲೇವಡಿ ಮಾಡಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ ಪ್ರಚಾರ ಕಾರ್ಯವನ್ನು ನಿರ್ವಹಣೆ ಮಾಡುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, "ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ವರ್ಷ ಚುನಾವಣೆ ಇದೆ ಎಂಬ ಕಾರಣದಿಂದಾಗಿ ಈ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ," ಎಂದು ಆರೋಪ ಮಾಡಿದ್ದಾರೆ.
ಮೂರು ಕೃಷಿ ಕಾಯ್ದೆ ವಾಪಸ್; ರಾಜಕೀಯ ನಾಯಕರು, ರೈತರ ಪ್ರತಿಕ್ರಿಯೆ ಏನು?
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ ಗಾಂಧಿ ವಾದ್ರಾ, "ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಷಮೆ ಕೇಳುತ್ತಿದ್ದಾರೆಯೇ?. ಇನ್ನು ಕೆಲವೇ ತಿಂಗಳಿನಲ್ಲಿ ಚುನಾವಣೆಯು ನಡೆಯಲಿದೆ. ಬಿಜೆಪಿಗೆ ಇನ್ನು ಮುಂದೆ ಗೆಲುವು ಕಷ್ಟವಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಆದ್ದರಿಂದಾಗಿ ಈಗ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುತ್ತಿದ್ದಾರೆ," ಎಂದು ಆರೋಪ ಮಾಡಿದ್ದಾರೆ.
"ನಾನು ಈ ಸಂದರ್ಭದಲ್ಲಿ ಇತ್ತೀಚೆಗೆ ಲಖಿಂಪುರ ಖೇರಿ ಪ್ರಕರಣದಲ್ಲಿ ಸಾವನ್ನಪ್ಪಿದ ದಲ್ಜೀತ್ ಸಿಂಗ್ರ ಕುಟುಂಬದ ಬಗ್ಗೆ ನೆನಪು ಆಗುತ್ತದೆ. ನಾನು ಆ ಕುಟುಂಬವು ಈಗ ಏನು ಭಾವಿಸುತ್ತಿರಬಹುದು?. ಮೋದಿ ಸರ್ಕಾರದ ಸಚಿವರ ಪುತ್ರನೇ ದಲ್ಜೀತ್ ಸಿಂಗ್ರ ಹತ್ಯೆ ಮಾಡಿದ್ದಾನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದಿಗೂ ತಮ್ಮನ್ನು ಭೇಟಿಯಾಗಲಾರರು ಎಂದು ಈ ಕುಟುಂಬ ಯೋಚನೆ ಮಾಡುತ್ತಿರಬಹುದು. ಕೇಂದ್ರ ಸಚಿವರ ಪುತ್ರ ರೈತರ ಹತ್ಯೆ ಮಾಡಿದ್ದಾನೆ, ಆದರೆ ಪ್ರಧಾನಿ ಮೋದಿ ಮಾತ್ರ ಆ ಸಚಿವರೊಂದಿಗೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಉದ್ದೇಶವನ್ನು ಯಾರು ನಂಬುವವರು ಇದ್ದಾರೆ?. ಈಗ ದೇಶದ ಮುಂದೆ ಎಲ್ಲಾ ವಿಚಾರವೂ ಪಾರದರ್ಶಕವಾಗಿ ಇದೆ. ಸರ್ಕಾರ ರೈತರ ವಿಚಾರವಾಗಿ ಗಂಭೀರವಾಗಿ ಇದೆ ಎಂದಾದರೆ ಲಖಿಂಪುರ ಖೇರಿಯಲ್ಲಿ ನಡೆದ ಘಟನೆಯ ಬಗ್ಗೆ ಸರಿಯಾದ ತನಿಖೆಯನ್ನು ನಡೆಸಬೇಕು," ಎಂದು ಆಗ್ರಹ ಮಾಡಿದ್ದಾರೆ.
ಕೃಷಿ ಕಾಯ್ದೆ ಹಿಂಪಡೆಯುವ ಬಗ್ಗೆ ರಾಹುಲ್ ಗಾಂಧಿ ಅಂದೇ ಹೇಳಿದ್ದರು: ಯುಟಿ ಖಾದರ್
ಇಂದು ಮುಂಜಾನೆ ಕೃಷಿ ಕಾಯ್ದೆ ಹಿಂಪಡೆಯುವ ಘೋಷಣೆ ಮಾಡಿದ ಪ್ರಧಾನಿ
ಇಂದು ಮುಂಜಾನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ನಾನು ದೇಶಕ್ಕೆ ಕ್ಷಮೆಯಾಚಿಸುತ್ತೇನೆ. ನನ್ನ ಸರಕಾರ ರೈತರಿಗೆ ನೆರವಾಗಲು ಅವರನ್ನು ಸ್ವಾವಲಂಬಿಗಳನ್ನಾಗಿಸುವ ಅನೇಕ ನಿರ್ಧಾರಗಳಿಗೆ ಮುಂದಾಗಿದೆ. ಈ ಹಿನ್ನೆಲೆ ಕೃಷಿ ಕಾಯ್ದೆಯನ್ನು ಜಾರಿ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ ಅದನ್ನು ಕೆಲ ವರ್ಗದ ಜನರ ಅರ್ಥ ಮಾಡಿಕೊಳ್ಳಲು ವಿಫಲವಾಗಿ, ದಂಧೆ ಎಬ್ಬಿಸುತ್ತಿದ್ದಾರೆ. ಉರಿಯುತ್ತಿರುವ ದೀಪವಷ್ಟೇ ಕೇಂದ್ರ ಸರ್ಕಾರ ರೈತರಿಗಾಗಿ ಕೆಲಸ ಮಾಡುತ್ತಿದೆ. ಈ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯಲು ನಾವು ನಿರ್ಧಾರ ಮಾಡಿದ್ದೇವೆ ಎಂದು ಇಡೀ ದೇಶಕ್ಕೆ ನಾನು ತಿಳಿಸಲು ಇಚ್ಛಿಸುತ್ತೇನೆ. ಈ ತಿಂಗಳ ಕೊನೆಯಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ," ಎಂದು ಘೋಷಣೆ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಘೋಷಣೆ ಮಾಡಿದ್ದಾರೆ. ಈ ಕೃಷಿ ಕಾಯ್ದೆಯು ದೇಶದ ಹಿತಾಸಕ್ತಿಗಾಗಿ ನಾವು ಜಾರಿಗೆ ತಂದಿದ್ದೆವು. ಆದರೆ ನಾವು ಈ ಸಂದರ್ಭದಲ್ಲಿ ಈ ಕಾಯ್ದೆ ವಿರುದ್ಧದ ಧ್ವನಿಯನ್ನು ಕಡೆಗಣಿಸಲಾಗದು. ನಾವು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾದೆವು. ಮಾತುಕತೆಯು ಪ್ರಜಾಪ್ರಭುತ್ವದ ದೊಡ್ಡ ಶಕ್ತಿ. ಈಗ ಕೃಷಿ ಕಾಯ್ದೆಯನ್ನು ಹಿಂಪಡೆದ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಬೇಕಾಗಿದೆ," ಎಂದು ಟ್ವೀಟ್ ಮಾಡಿದ್ದಾರೆ.
(ಒನ್ಇಂಡಿಯಾ)