ಭಾರತದ ಅಭಿವೃದ್ಧಿಗೆ ಪಂಚಸೂತ್ರದ ಮಂತ್ರ ಜಪಿಸಿದ ಮೋದಿ
ನವದೆಹಲಿ, ಮೇ.12: ನೊವೆಲ್ ಕೊರನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತೀಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ದೇಶದ ಅಭಿವೃದ್ಧಿಗೆ ಪಂಚಸೂತ್ರದ ಮಂತ್ರವನ್ನು ಮೋದಿ ಜಪಿಸಿದ್ದಾರೆ.
ಭಾರತ ಲಾಕ್ ಡೌನ್ ಬಳಿಕ 5ನೇ ಬಾರಿಗೆ ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ಭಾರತೀಯರಲ್ಲಿ ಗುಲಾಮಿ ಮನಸ್ಥಿತಿ ಹೋಗಿದ್ದು ಅಭಿವೃದ್ಧಿಯ ಪಥದಲ್ಲಿ ಸಾಗಲು ಭಾರತೀಯರು ಹಾತೊರೆಯುತ್ತಿದ್ದಾರೆ.
ಭಾರತೀಯರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಪ್ರಧಾನಮಂತ್ರಿ!
ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಪಂಚಸೂತ್ರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತದ ಯಶಸ್ಸಿನ ಹಾದಿಗೆ ಪ್ರಧಾನಿ ಪಂಚಸೂತ್ರಗಳನ್ನು ನೀಡಿದ್ದಾರೆ. ದೇಶದ ಆರ್ಥಿಕತೆಯ ಐದುಸ್ತಂಭಗಳು ಭಾರತವನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಪ್ರಧಾನಿ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪಂಚಸ್ತಂಭ ಸೂತ್ರ:
ಭಾರತದ ಅಭಿವೃದ್ಧಿಗಾಗಿ ಪಂಚಸ್ತಂಭಗಳು ಪ್ರಮುಖ ಪಾತ್ರ ವಹಿಸಲಿವೆ. ದೇಶದ ಆರ್ಥಕತೆ, ಮೂಲಸೌಕರ್ಯ, ನಮ್ಮ ವ್ಯವಸ್ಥೆ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಜನಸಂಖ್ಯೆ ಹಾಗೂ ಕೊನೆಯದಾಗಿ ಬೇಡಿಕೆ ಭಾರತದ ಪಾಲಿನ ಪಂಚಸ್ತಂಭಗಳಾಗಿವೆ. ದೇಶದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯ ಸರಪಳಿ ನಿರಂತರವಾಗಿ ಇರಬೇಕು. ವಿಶ್ವದಲ್ಲಿ ಪೂರೈಕೆಯ ಸರಪಳಿಯನ್ನು ವೃದ್ಧಿಸುವ ಕಾರ್ಯವನ್ನು ಭಾರತೀಯರು ಮಾಡಬೇಕಿದೆ. ಈ ನಿಟ್ಟಿನಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.