ಮತ್ತೆ 21 ದಿನ ಜನತಾ ಕರ್ಫ್ಯೂ; ಯಾರು ಏನಂದರು?
ನವದೆಹಲಿ, ಮಾರ್ಚ್ 24: ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
21 ದಿನ ಇಡೀ ದೇಶವೇ ಲಾಕ್ ಡೌನ್ ಆಗಿರಲಿದೆ. ದಯವಿಟ್ಟು ಮನೆಯಲ್ಲಿ ಇದ್ದು, ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಶ್ರಮವಹಿಸಿ ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ಅವರ ಈ ಕರೆಗೆ ಹಲವು ರಾಜಕೀಯ ಮುಖಂಡರು ಬೆಂಬಲ ಸೂಚಿಸಿದ್ದಾರೆ. ನಾವೆಲ್ಲ ಕೊರೊನಾ ಓಡಿಸಲು ಸಿದ್ದ ಎಂದು ಹೇಳಿದ್ದಾರೆ. ಲಾಕ್ಡೌನ್ ಮಾಡುವುದೇ ಈ ಹಂತದಲ್ಲಿ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. #IndiaFightsCorona ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಸವಾಲನ್ನು ಎದುರಿಸೋಣ; ಶಾ
ದೇಶವನ್ನು ಕರೋನ ವೈರಸ್ ನಿಂದ ರಕ್ಷಿಸಲು ಪ್ರಧಾನಿ ಮೋದಿ ಅವರ ಮನವಿಯಂತೆ 21 ದಿನಗಳು ಮನೆಗಳಿಂದ ಹೊರಗಡೆ ಬರುವುದು ಬೇಡ. ಸರ್ಕಾರದ ಎಲ್ಲಾ ಆದೇಶಗಳನ್ನು ಪಾಲಿಸಿ. ನಮ್ಮ ಎಲ್ಲರ ರಕ್ಷಣೆ ನಮ್ಮೆಲ್ಲರ ಹೊಣೆ. ಸಮಾಜ ಒಂದಾಗಿ ಈ ಸನ್ನಿವೇಶವನ್ನು ಎದುರಿಸೋಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.

ಚಾಚೂ ತಪ್ಪದೆ ಪಾಲಿಸಬೇಕು
ಕೊರೊನಾ ವಿರುದ್ಧದ ನಿರ್ಣಾಯಕ ಸಮರಕ್ಕಾಗಿ ಪ್ರಧಾನಿ ಅವರು ಕೈಗೊಂಡಿರುವ ಕ್ರಮಗಳನ್ನು ಸ್ವಾಗತಿಸುತ್ತೇನೆ. ಮೋದಿ ಅವರ ಮನವಿಯಂತೆ ಎಲ್ಲ ನಾಗರಿಕರೂ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಇಡೀ ಮಾನವಕುಲವೇ ಎದಿರುಸುತ್ತಿರುವ ಈ ಸಂಕಟದ ಘಳಿಗೆಯನ್ನು ದಾಟಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಲು ಕೋರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಒಂದು ತಿಂಗಳ ಸಂಬಳ
ಲಾಕ್ ಡೌನ್ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಸದಾನಂದ ಗೌಡ ಅವರು, ಕೊರೊನಾ ವಿರುದ್ಧದ ಹೋರಾಟಕ್ಕೆ ತಮ್ಮ ಒಂದು ತಿಂಗಳ ಸಂಬಳವನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡುವುದಾಗಿ ಹೇಳಿದ್ದಾರೆ.

ಯಾಕೆ ಕಡಿಮೆ ಹಣ ಮೀಸಲು?
ಕೊರೊನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಕೇಂದ್ರದ ಜೊತೆಗಿದೆ. ಆದರೆ, ದೇಶದ ಜನರಿಗೆ ಪ್ರಧಾನಿ ಅವರು ಕೊಟ್ಟ ಭರವಸೆ ಏನು? ಕೇರಳ ಒಂದೇ ರಾಜ್ಯ ಒಂದು ವಾರದ ಹಿಂದೆಯೇ ₹20,000 ಕೋಟಿ ಬಿಡುಗಡೆ ಮಾಡಿದೆ. ಆದರೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಕೇವಲ ₹16,000 ಕೋಟಿ ಘೋಷಿಸಿರುವುದು 130 ಕೋಟಿ ಜನತೆಗೆ ಸಾಕಾಗುವುದೇ? ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications