ಉತ್ತರಪ್ರದೇಶ ಚುನಾವಣೆ ಫಲಿತಾಂಶ: ಮೋದಿ ಬಗ್ಗೆ ರಾಹುಲ್ ನುಡಿದ ಭವಿಷ್ಯ
ಪ್ರಧಾನಿ ಮೋದಿ ವಿರುದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಕ್ ಪ್ರಹಾರ ಮುಂದುವರಿದಿದೆ. ಚುನಾವಣೆಯ ಫಲಿತಾಂಶ ಹೊರಬಿದ್ದ ಮೇಲೆ, ಇನ್ನೆರಡು ವರ್ಷ ಮೋದಿ ಉತ್ತರಪ್ರದೇಶದ ಬಗ್ಗೆ ಮಾತನಾಡುವುದಿಲ್ಲ ಎಂದು ರಾಹುಲ್ ಭವಿಷ್ಯ ನುಡಿದಿದ್ದಾರೆ.
ಜಲಾನ್, ಝೂನ್ಸಿ (ಉ.ಪ್ರ) ಪಿಟಿಐ, ಫೆ 19: ಏಳು ಹಂತದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಚುನಾವಣೆ ಭಾನುವಾರ (ಫೆ 19) ಮುಕ್ತಾಯಗೊಂಡಿದೆ. ಜೊತೆಗೆ, ಪ್ರಧಾನಿ ಮೋದಿ ವಿರುದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಕ್ ಪ್ರಹಾರ ಮುಂದುವರಿದಿದೆ.
ಬಿಹಾರದಲ್ಲಿ ಆದಂತಹ ಪರಿಸ್ಥಿತಿ ಬಿಜೆಪಿಗೆ ಉತ್ತರಪ್ರದೇಶದಲ್ಲಿ ಮುಂದುವರಿಯಲಿದೆ, ಇಲ್ಲಿನ ಚುನಾವಣೆಯ ಫಲಿತಾಂಶ ಹೊರಬಿದ್ದ ಮೇಲೆ, ಇನ್ನೆರಡು ವರ್ಷ ಅಂದರೆ ಮುಂದಿನ ಲೋಕಸಭಾ ಚುನಾವಣೆಯ ವರೆಗೆ ಮೋದಿ ಉತ್ತರಪ್ರದೇಶದ ಬಗ್ಗೆ ಮಾತನಾಡುವುದಿಲ್ಲ ಎಂದು ರಾಹುಲ್ ಭವಿಷ್ಯ ನುಡಿದಿದ್ದಾರೆ.
ನಾವೆಲ್ಲಾ ಸೇರಿ ಬಿಜೆಪಿ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದನ್ನು ಮೋದಿಗೆ ಮನದಟ್ಟು ಮಾಡಬೇಕಾಗಿದೆ. ಇಲ್ಲಿ ಮತ್ತೆ ಸಮಾಜವಾದಿ ಪಕ್ಷದ ಸರಕಾರ ರಚನೆಯಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಅವರ 1200 ಕೋಟಿ ಸಾಲವನ್ನು ಮೋದಿ ಸರಕಾರ ಮನ್ನಾ ಮಾಡಿದೆ. ವಿಜಯ್ ಮಲ್ಯ ಅವರಿಂದ ದೇಶದಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎನ್ನುವುದನ್ನು ಮೋದಿ ದೇಶಕ್ಕೆ ತಿಳಿಸಬೇಕು ಎಂದು ರಾಹುಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾನುವಾರ (ಫೆ 19) ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಮಲ್ಯ ಅವರಿಂದ ಹಣವನ್ನು ವಸೂಲಿ ಮಾಡಿ ಉತ್ತರಪ್ರದೇಶದ ಕರಕುಶುಲ ಉದ್ಯಮಕ್ಕೆ ನೀಡಿದ್ದರೆ ಎಷ್ಟೊಂದು ಉದ್ಯೋಗ ಸೃಷ್ಟಿಯಾಗುತ್ತಿತ್ತು. ನಾವು ಮತದಾರರಿಗೆ ಸುಳ್ಳು ಭರವಸೆ ನೀಡುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಅಪನಗದೀಕರಣದಿಂದ ಜನರ ದುಡ್ಡನ್ನು ಪೇಪರ್ ಗಿಂತ ಕಡೆಮಾಡಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲಬೇಕು. ದೊಡ್ಡ ನೋಟನ್ನು ನಿಷೇಧಗೊಳಿಸಿದ್ದರಿಂದ ಎಷ್ಟೊಂದು ಅಮಾಯಕರು ಪ್ರಾಣತೆತ್ತರು.
ನೋಟ್ ಬ್ಯಾನ್ ನಿಂದಾದ ತೊಂದರೆಯನ್ನು ಜನರ ಮುಂದೆ ಸರಿಯಾಗಿ ತೋರಿಸಲು ಮಾಧ್ಯಮಗಳು ವಿಫಲವಾದವು, ಮಾಧ್ಯಮಗಳಿಗೆ ಮೋದಿ ಅಂದರೆ ಭಯ ಎಂದು ರಾಹುಲ್, ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೊನೇ ಮಾತು: ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿ, ಸೋಲಲಿ ನೀವು ಮಾತ್ರ ನಿಮ್ಮ ಲೋಕಸಭಾ ಕ್ಷೇತ್ರ ಅಮೇಠಿಗೆ ಆವಾಗಾವಾಗ ತಲೆ ಹಾಕ್ತಾ ಇರಿ ಸ್ವಾಮಿ ಎಂದು ಸಭೆಯಲ್ಲಿದ್ದ ಜನ ಮಾತಾಡಿ ಕೊಳ್ತಾ ಇದ್ರಾ ಏನೋ?












Click it and Unblock the Notifications