ನಿತಿಶ್ ಮನವೊಲಿಸಲು ಲಾಲೂ ಇನ್ನಿಲ್ಲದ ಪ್ರಯತ್ನ
ನವದೆಹಲಿ, ಜೂನ್ 23 : ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಎಂದು ಸೋನಿಯಾ ಗಾಂಧಿ ಅವರು ಗುರುವಾರ ಘೋಷಿಸುತ್ತಿದ್ದಂತೆ, ಅವರನ್ನು ಯುಪಿಎ ಅಭ್ಯರ್ಥಿ, ಮತ್ತೊಬ್ಬ ದಲಿತ ರಾಮ್ ನಾಥ್ ಕೋವಿಂದ್ ವಿರುದ್ಧ ಗೆಲ್ಲಿಸಲೇಬೇಕೆಂದು ಪ್ರಯತ್ನಗಳು ನಡೆಯುತ್ತಿವೆ.
ಮೀರಾ ಕುಮಾರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸುವ ಮುನ್ನವೇ ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ರಾಮ್ ನಾಥ್ ಕೋವಿಂದ್ ಅವರಿಗೆ ತಮ್ಮ ಬೆಂಬಲ ಎಂದು ಪ್ರಕಟಿಸಿದ್ದು, ವಿರೋಧಿಗಳಿಗೆ ನುಂಗಲಾಗದ ತುತ್ತಾಗಿದೆ.
ಈಗ ಎಚ್ಚೆತ್ತುಕೊಂಡಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು, ನಿತಿಶ್ ಕುಮಾರ್ ಅವರ ಮನವೊಲಿಕೆ ಮಾಡಬೇಕೆಂದು ಶತಾಯಗತಾಯ ಯತ್ನಿಸುತ್ತಿದ್ದಾರೆ. ರಾಮ್ ನಾಥ್ ಅವರನ್ನು ನಾನು ವೈಯಕ್ತಿಕವಾಗಿ ಬೆಂಬಲಿಸುತ್ತೇನೆ ಎಂದು ನಿತಿಶ್ ಹೇಳಿ ಸಾಕಷ್ಟು ಇರುಸುಮುರುಸು ತಂದಿದ್ದರು.

ಅದಕ್ಕೆ ಕಾರಣವೂ ಇಲ್ಲದಿಲ್ಲ. ರಾಮ್ ನಾಥ್ ಕೋವಿಂದ್ ಅವರು ಬಿಹಾರದ ರಾಜ್ಯಪಾಲರು, ಮೇಲಾಗಿ ದಲಿತರು. ನಿತಿಶ್ ಕುಮಾರ್ ಮತ್ತು ರಾಮ್ ನಾಥ್ ಕೋವಿಂದ್ ಅವರ ನಡುವಿನ ಬಾಂಧವ್ಯವೂ ಚೆನ್ನಾಗಿಯೇ ಇದೆ. ಹಾಗಾಗಿ, ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಮೋದಿ ಘೋಶಿಸುತ್ತಿದ್ದಂತೆ ನಿತಿಶ್ ಸಂಭ್ರಮಿಸಿದ್ದರು.
ಇತ್ತೀಚಿನ ದಿನಗಳಲ್ಲಿ, ಒಂದು ಕಾಲದಲ್ಲಿ ಬದ್ಧ ವೈರಿಯಾಗಿದ್ದ ನಿತಿಶ್ ಕುಮಾರ್ ಅವರು ಮೋದಿ ಅವರ ಪರ ಒಲವು ತೋರುತ್ತಿರುವುದು ಕೂಡ ಇದಕ್ಕೆ ಕಾರಣ. ಕೆಲ ದಿನಗಳ ಹಿಂದೆ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆಂದು ವಿರೋಧಿಗಳು ಸಭೆ ನಡೆಸಿದಾಗ, ನಿತಿಶ್ ಅವರು ಮೋದಿ ಅವರೊಂದಿಗೆ ಕೈಕುಲುಕುತ್ತಿದ್ದರು.
"ನಿತಿಶ್ ಅವರು ಯಾಕೆ ಇಂಥ ನಿರ್ಣಯ ತೆಗೆದುಕೊಂಡರೆಂದು ಗೊತ್ತಿಲ್ಲ. ನಿಮ್ಮಿಂದ ತಪ್ಪಾಗಿದೆ ಎಂದು ಅವರಿಗೆ ಮನವೊಲಿಕೆ ಮಾಡಿಕೊಡುತ್ತೇವೆ. ಮೀರಾ ಕುಮಾರ್ ಅವರು ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ" ಎಂದು ಲಾಲೂ ಪ್ರಸಾದ್ ಯಾದವ್ ಅವರು ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಮ್ ನಾಥ್ ಕೋವಿಂದ್ ಅವರು ಶುಕ್ರವಾರ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಜುಲೈ 17ರಂದು ಚುನಾವಣೆ ನಡೆಯಲಿದೆ. ಟಿಡಿಪಿ, ಟಿಆರ್ಎಸ್, ಎಐಎಡಿಎಂಕೆ ಮುಂತಾದ ಪಕ್ಷಗಳು ಯುಪಿಎಗೆ ಬೆಂಬವ ಸೂಚಿಸಿವೆ. ಪರಿಣಾಮವಾಗಿ ಶೇ.63ರಷ್ಟು ಮತಗಳನ್ನು ಎನ್ಡಿಎ ಹೊಂದಿದೆ.












Click it and Unblock the Notifications