ಕೋವಿಂದ್ ಗೆ ಮೊದಲೇ ಶುಭಾಷಯ ಹೇಳಿದ ನರೇಂದ್ರ ಮೋದಿ
ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಪರವಾಗಿ ಅಭ್ಯರ್ಥಿಯಾಗಿರುವ ರಾಮ್ ನಾಥ್ ಕೋವಿಂದ್ ಅವರಿಗೆ ಮುಂಗಡ ಶುಭಾಷಯ. ಎನ್ ಡಿಎ ಮೈತ್ರಿಕೂಟದ ಸಭೆಯ ನಂತರ, ಕೋವಿಂದ್ ಗೆ ಮುಂಗಡವಾಗಿ ಶುಭಾಷಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ.
ನವದೆಹಲಿ, ಜುಲೈ 17: ಇಂದು ರಾಷ್ಟ್ರಪತಿ ಚುನಾವಣೆಗಾಗಿ ಮತದಾನ ನಡೆಯುತ್ತಿದೆ. ಎನ್ ಡಿಎ ವತಿಯಿಂದ ರಾಮ್ ನಾಥ್ ಕೋವಿಂದ್ ಹಾಗೂ ಯುಪಿಎ ವತಿಯಿಂದ ಮೀರಾ ಕುಮಾರ್ ಕಣಕ್ಕಿಳಿದಿದ್ದಾರೆ.
ಇಂದು ಮತದಾನ ನಡೆದು, ಜುಲೈ 20ರಂದು ಮತದಾನದ ಫಲಿತಾಂಶ ಹೊರಬೀಳಲಿದೆ. ಅಂದೇ ದೇಶದ 14ನೇ ರಾಷ್ಟ್ರಪತಿ ಯಾರೆಂಬುದು ತಿಳಿಯಲಿದೆ.
ಆದರೆ, ಅದಕ್ಕೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯವರು ಎನ್ ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ಶುಭಾಷಯ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ, ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿರುವ ಎಲ್ಲಾ ಪಕ್ಷಗಳ ನಾಯಕರೊಂದಿಗೆ ನವದೆಹಲಿಯಲ್ಲಿ ಸಮಾಲೋಚನೆ ನಡೆಸಿದ ಮೋದಿ, ಸಭೆಯ ನಂತರ ರಾಮ್ ನಾಥ್ ಅವರ ಕೈಕುಲುಕಿ ಮುಂಗಡವಾಗಿ ಶುಭಾಷಯ ಹೇಳಿದರು.
ಈ ಹಿಂದೆ, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಕಾರ್ಯದರ್ಶಿಯಾಗಿದ್ದ (ಹಿಂದಿಯಲ್ಲಿ ಆ ಹುದ್ದೆಯನ್ನು ಮೋದಿ 'ಸಹಯೋಗ್' ಎಂದು ಹೇಳಿದ್ದಾರೆ) ರಾಮ್ ನಾಥ್ ಅವರು ರಾಷ್ಟ್ರಾಧ್ಯಕ್ಷರಾದ ನಂತರವೂ ಕೇಂದ್ರ ಸರ್ಕಾರ ಎಲ್ಲಾ ರೀತಿಯ 'ಸಹಯೋಗ' ನೀಡಲಿದೆ ಎಂದರು.
ರಾಮ್ ನಾಥ್ ಗೆ ಎನ್ ಡಿಎ ಮೈತ್ರಿಕೂಟ ಮಾತ್ರವಲ್ಲದೆ ಇತರೆ 40 ಪಕ್ಷಗಳು ಬೆಂಬಲ ನೀಡಿದ್ದು, ಮೇಲ್ನೋಟಕ್ಕೆ ಅವರ ಗೆಲುವು ನಿಶ್ಚಿತ ಎನಿಸಿದೆ.