ಉತ್ತರಾಖಂಡ ಚುನಾವಣೆ; ಪ್ರಬಲ ಪೈಪೋಟಿ ನಡುವೆಯೂ ಬಿಜೆಪಿಗೆ ಜಯ!
ಡೆಹರಾಡೂನ್, ಡಿಸೆಂಬರ್ 13; 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಉತ್ತರಾಖಂಡ ಸಹ ಒಂದು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮುಂದಿನ ಚುನಾವಣೆಯಲ್ಲಿಯೂ ಭಾರೀ ಪೈಪೋಟಿ ಎದುರಿಸಿದರೂ ಪಕ್ಷ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೊಸ ಸಮೀಕ್ಷೆ ವರದಿ ಹೇಳಿದೆ.
ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಉತ್ತರಾಖಂಡದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿವೆ. ಇದು ರಾಜ್ಯದಲ್ಲಿ ಎಬಿಪಿ ನ್ಯೂಸ್-ಸಿ-ವೋಟರ್ ನಡೆಸುತ್ತಿರುವ 3ನೇ ಚುನಾವಣಾ ಪೂರ್ವ ಸಮೀಕ್ಷೆಯಾಗಿದೆ. 2022ರ ಫೆಬ್ರವರಿ ಅಥವ ಮಾರ್ಚ್ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಆಡಳಿತ ವಿರೋಧಿ ಅಲೆಯ ಮತಗಳು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ವಿಭಜನೆಯಾಗಲಿದೆ. ಇದು ಬಿಜೆಪಿಗೆ ಸಹಾಯಕವಾಗಲಿದ್ದು, ಚುನಾವಣೆಯಲ್ಲಿ ಪೈಪೈಟೊ ಎದುರಿಸಿದರೂ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಶೇ 39.8ರಷ್ಟು ಮತವನ್ನು ಪಡೆಯಲಿದೆ. ಕಾಂಗ್ರೆಸ್ ಪಕ್ಷ ಶೇ 35.7 ಮತ್ತು ಆಮ್ ಆದ್ಮಿ ಪಕ್ಷ ಶೇ 12.6ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

ಯಾವಾಗ ನಡೆದ ಸಮೀಕ್ಷೆ; ಉತ್ತರಾಖಂಡದಲ್ಲಿ ನವೆಂಬರ್ 13ರಿಂದ ಡಿಸೆಂಬರ್ 9ರ ತನಕ ನಡೆಸಿದ ಸಮೀಕ್ಷೆಯ ವರದಿ ಇದಾಗಿದೆ. ರಾಜ್ಯದ 92,000+ ಜನರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ವರದಿಯಂತೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಕುಮಾವೂನ್ ಮತ್ತು ಗರ್ವಾಲ್ ಆಡಳಿತ ವಿಭಾಗದಲ್ಲಿ ಮುನ್ನಡೆ ಸಿಗಲಿದೆ. ಥರೈ ಪ್ರದೇಶದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮತಗಳು ಲಭಿಸಲಿವೆ. ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಎಂದು ಶೇ 33.5ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಪಕ್ಷದಿಂದ ಉತ್ತರಾಖಂಡದ ಪ್ರಸ್ತುತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಶೇ 26.6ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 18ರಷ್ಟು ಜನರು ಬಿಜೆಪಿಯ ಅನಿಲ್ ಸಿಂಗ್ ಬಲೂನಿ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಮಾಜಿ ಕರ್ನಲ್ ಅಜಯ್ ಕೋಥಿಯಾಲ್ ಎಎಪಿಯಿಂದ ಸಿಎಂ ಆಗಬೇಕು ಎಂದು ಶೇ 8.9ರಷ್ಟು ಜನರು ಹೇಳಿದ್ದಾರೆ.
ಪುಷ್ಕರ್ ಸಿಂಗ್ ಧಾಮಿ ಈ ವರ್ಷದ ಜುಲೈನಲ್ಲಿ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿದ್ದ ಆಡಳಿತ ವಿರೋಧಿ ಅಲೆ ಪ್ರಮಾಣ ಕಡಿಮೆಯಾಗುತ್ತಿದೆ. ಪುಷ್ಕರ್ ಸಿಂಗ್ ಧಾಮಿ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ಗಿಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶೇ 64.1ರಷ್ಟು ಜನರು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಹೊಸದಾಗಿ ಕಂಡು ಬಂದ ಅಂಶಗಳ ಪ್ರಕಾರ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕೇದಾರನಾಥ ಪ್ರವಾಸ ಬಿಜೆಪಿಗೆ ಸಹಾಯಕವಾಗಿದೆ. ಶೇ 35.9ರಷ್ಟು ಜನರು ಮೋದಿ ರಾಜ್ಯಕ್ಕೆ ಭೇಟಿ ನೀಡುವುದು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ.
ದೇವಾಲಯಗಳ ಸಮಿತಿಗಳನ್ನು ವಿಸರ್ಜನೆ ಮಾಡುವ ಪುಷ್ಕರ್ ಸಿಂಗ್ ಧಾಮಿ ಸರ್ಕಾರದ ತೀರ್ಮಾನ ಬಿಜೆಪಿಗೆ ಚುನಾವಣೆಯಲ್ಲಿ ಸಹಾಯಕವಾಗಲಿದೆ. ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿದ್ದಾಗ ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ ದೇವಾಲಯ ಸಮಿತಿಗಳನ್ನು ರಚನೆ ಮಾಡಿದ್ದರು. ಸಮಿತಿಗಳನ್ನು ವಿಸರ್ಜನೆ ಮಾಡಿದ್ದು ಬಿಜೆಪಿಗೆ ಸಹಾಯಕ ಎಂದು ಶೇ 60.1ರಷ್ಟು ಜನರು ಹೇಳಿದ್ದು, ಸಹಾಯಕವಲ್ಲ ಎಂದು ಶೇ 39.1ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೈರ್ ಸೈನ್ ನಗರವನ್ನು ರಾಜ್ಯದ ರಾಜಧಾನಿ ಮಾಡುವುದಾಗಿ ಜನರಿಗೆ ಭರವಸೆ ನೀಡಿದೆ. ಆದರೆ ಈ ಘೋಷಣೆ ರಾಜ್ಯದ ಪ್ರತಿಪಕ್ಷಕ್ಕೆ ಚುನಾವಣೆಯಲ್ಲಿ ಸಹಾಯಕವಾಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ. ಶೇ 62.4ರಷ್ಟು ಜನರು ಕಾಂಗ್ರೆಸ್ ಘೋಷಣೆ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ. 37.6ರಷ್ಟು ಜನರು ಮಾತ್ರ ಇದು ಕಾಂಗ್ರೆಸ್ಗೆ ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.












Click it and Unblock the Notifications