ಮೋದಿ ಗೆಲುವಿನ ಹಿಂದಿದ್ದ 'ಆ ವ್ಯಕ್ತಿ' ನಿತೀಶ್ ಕುಮಾರ್ ಜೆಡಿಯು ಸೇರ್ಪಡೆ
ನವದೆಹಲಿ, ಸೆಪ್ಟೆಂಬರ್ 16: ರಾಜಕೀಯ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಭಾನುವಾರದಂದು ಅಧಿಕೃತವಾಗಿ ಜೆಡಿಯು ಸೇರಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಉಪಸ್ಥಿತಿಯಲ್ಲಿ ಪಾಟ್ನಾದಲ್ಲಿ ಪ್ರಶಾಂತ್ ಕಿಶೋರ್ ಜೆಡಿಯುಗೆ ಸೇರ್ಪಡೆಗೊಂಡಿದ್ದಾರೆ. ಭಾರತದ ರಾಜಕಾರಣದಲ್ಲಿ ಮಿಂಚುವ ಮುನ್ನ ಪ್ರಶಾಂತ್ ಕಿಶೋರ್ ವಿಶ್ವಸಂಸ್ಥೆ ಜತೆಗೆ ಕೆಲಸ ಮಾಡಿದ್ದರು.
2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಚುನಾವಣೆ ಎದುರಿಸುವಾಗ ಪ್ರಶಾಂತ್ ಕಿಶೋರ್ ಬಿಜೆಪಿಗಾಗಿ ಕೆಲಸ ಮಾಡಿದ್ದರು. ಅದಾಗಿ ಎರಡು ವರ್ಷಗಳ ನಂತರ ಸಿಟಿಜನ್ಸ್ ಫಾರ್ ಅಕೌಂಟಬಲ್ ಗವರ್ನೆನ್ಸ್ ಅಥವಾ ಸಿಎಜಿಯನ್ನು ರೂಪಿಸಿದರು. ಭಾರತದ ರಾಜಕಾರಣದಲ್ಲಿ ಬದಲಾವಣೆ ತರಬೇಕು ಎಂಬ ಉತ್ಸಾಹದಲ್ಲಿರುವ ಯುವ ವೃತ್ತಿಪರರು ಆ ತಂಡದಲ್ಲಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅದ್ಭುತ ಗೆಲುವು ಸಾಧಿಸುವಲ್ಲಿ ಪ್ರಶಾಂತ್ ಕಿಶೋರ್ ಮತ್ತವರ ತಂಡ ಮುಖ್ಯ ಪಾತ್ರ ವಹಿಸಿತ್ತು. ಅದಾಗಿ ಒಂದು ವರ್ಷಕ್ಕೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಪರ ಕೆಲಸ ಮಾಡಿದರು ಪ್ರಶಾಂತ್ ಕಿಶೋರ್. ಆ ಸಲ ನಿತೀಶ್ ಕುಮಾರ್ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಜೆಡಿಯು, ಆರ್ ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಕೂಟವು ಬಿಹಾರದ ಒಟ್ಟು 243 ವಿಧಾನಸಭೆ ಸದಸ್ಯ ಬಲದಲ್ಲಿ 178 ಸ್ಥಾನಗಳಲ್ಲಿ ಭರ್ಜರಿ ಜಯ ದಾಖಲಿಸಿತ್ತು.












Click it and Unblock the Notifications