"ಆಹಾ ಏನ್ ಹೇಳಿದ್ರಿ ಸಾಹೇಬ್ರೆ"; ಪ್ರಧಾನಿ ಕುರಿತು ಪ್ರಶಾಂತ್ ಕಿಶೋರ್ ಲೇವಡಿ
ನವದೆಹಲಿ, ಮಾರ್ಚ್ 11: ಐದು ರಾಜ್ಯಗಳ ಪೈಕಿ ನಾಲ್ಕು ಕಡೆಗಳಲ್ಲಿ ಭಾರತೀಯ ಜನತಾ ಪಕ್ಷವು ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರುವುದು ಪಕ್ಕಾ ಆಗಿದೆ. ಗುರುವಾರ ಅಂತಿಮ ಫಲಿತಾಂಶ ಹೊರ ಬೀಳುತ್ತಿದ್ದಂತೆ 2022ರ ಈ ತೀರ್ಪು, 2024ರ ದಿಕ್ಸೂಚಿ ಎಂದು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಟೀಕಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯ ಹೋರಾಟದ ವೈಖರಿ ಬೇರೆಯದ್ದೇ ಆಗಿರುತ್ತದೆ. ಅಂದು ದೇಶಕ್ಕಾಗಿ ಹೋರಾಟ ನಡೆಯುತ್ತದೆ, ಅದನ್ನು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ವಿಶ್ಲೇಷಿಸಿದ್ದಾರೆ.
"ಭಾರತಕ್ಕಾಗಿ ನಡೆಯುವ ಯುದ್ಧವು 2024ರಲ್ಲಿ ನಿರ್ಧಾರವಾಗುತ್ತದೆಯೇ ಹೊರತೂ ಯಾವುದೇ ರಾಜ್ಯ ಚುನಾವಣೆಗಳಲ್ಲಿ ಅಲ್ಲ, ಇದು ಸಾಹೇಬರಿಗೆ ತಿಳಿದಿಲ್ಲ. ಆದ್ದರಿಂದಲೇ ಪ್ರತಿಪಕ್ಷಗಳ ಮೇಲೆ ಮಾನಸಿಕವಾಗಿ ಪರಿಣಾಮ ಬೀರುವ ಉದ್ದೇಶದಿಂದ ರಾಜ್ಯ ಚುನಾವಣಾ ಫಲಿತಾಂಶವನ್ನು ಹೆಚ್ಚಾಗಿ ಮುನ್ನಲೆಯಲ್ಲಿ ಬಿಂಬಿಸುವ ಬುದ್ಧವಂತ ಪ್ರಯತ್ನ ಮಾಡಲಾಗುತ್ತಿದೆ. ನೀವು ಈ ಸುಳ್ಳಿನಲ್ಲಿ ಬೀಳಬೇಡಿ ಅಥವಾ ಸುಳ್ಳಿನ ಭಾಗವಾಗಬೇಡಿ," ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

2024ರ ಚುನವಣಾ ದಿಕ್ಸೂಚಿ ಎಂದಿದ್ದ ಮೋದಿ:
ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ಮತದಾರರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ 5 ರಾಜ್ಯಗಳ ಚುನಾವಣೆ ಅದರಲ್ಲೂ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು 2024ರ ಲೋಕಸಭೆ ಚುನಾವಣೆ ಫಲಿತಾಂಶದ ದಿಕ್ಸೂಚಿ ಎಂದು ಕರೆದಿದ್ದರು.
ಪ್ರಧಾನಮಂತ್ರಿ ಮೋದಿ ಹೇಳಿದ್ದೇನು?:
ದೆಹಲಿಯ ಬಿಜೆಪಿ ಪ್ರಧಾನ ಕಛೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕುಟುಂಬ ರಾಜಕೀಯ ನಿರ್ಮೂಲನೆ ಆಗುವ ದಿನಗಳು ದೂರವಿಲ್ಲ ಎಂದರು. "ಕಳೆದ 2017 ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾದಾಗ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಭವಿಷ್ಯವನ್ನು ನಿರ್ಧರವಾಗುತ್ತದೆ ಎಂದು ಅನೇಕರು ಹೇಳಿದ್ದರು. ಅದೇ ಆಲೋಚನೆ ಈಗಲೂ ಅನ್ವಯ ಆಗುತ್ತದೆ ಎಂದು ನಾನು ಹೇಳಬಲ್ಲೆ. 2024ರ ಸಾರ್ವತ್ರಿಕ ಚುನಾವಣಾ ಫಲಿತಾಂಶದಲ್ಲಿಯೂ 2022 ಯುಪಿ ಚುನಾವಣೆಯ ಫಲಿತಾಂಶವನ್ನು ನೋಡಬಹುದು," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪಂಚರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆಲುವು:
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಹೊರ ಬಿದ್ದಿದೆ. ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರವನ್ನು ಪಡೆದುಕೊಳ್ಳುವ ಮೂಲಕ ಭಾರತೀಯ ಜನತಾ ಪಕ್ಷವು ಹೊಸ ದಾಖಲೆ ಬರೆದಿದೆ. ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲೂ ಬಿಜೆಪಿ ಗೆಲುವಿನ ಬಾವುಟ ಹಾರಿಸಿದೆ. ಪಂಜಾಬ್ ನೆಲದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ತನ್ನ ಕುರ್ಚಿಯನ್ನು ಆಮ್ ಆದ್ಮಿ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.
ಅತಿಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಯುಪಿ:
ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡುವುದಾದರೆ ಉತ್ತರ ಪ್ರದೇಶದಲ್ಲಿ ಅತಿಹಚ್ಚು ಕ್ಷೇತ್ರಗಳಿವೆ. ಯುಪಿಯೊಂದರಲ್ಲೇ 80 ಲೋಕಸಭೆ ಕ್ಷೇತ್ರಗಳಿದ್ದು, ಅಧಿಕಾರವನ್ನು ಪಡೆಯಲು ಈ ರಾಜ್ಯದ ಮೇಲೆ ಹಿಡಿತ ಸಾಧಿಸುವುದು ತೀರಾ ಮುಖ್ಯವಾಗಿರುತ್ತದೆ.
2014ರಲ್ಲಿ ಹೆಚ್ಚು ಸುದ್ದಿಯಾಗಿದ್ದ ಪ್ರಶಾಂತ್ ಕಿಶೋರ್:
ಕಳೆದ 2014 ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ರಣತಂತ್ರಗಳನ್ನು ರೂಪಿಸಿದ ಪ್ರಶಾಂತ್ ಕಿಶೋರ್ ಹೆಚ್ಚು ಸುದ್ದಿ ಆಗಿದ್ದರು. ತದನಂತರ ಬಿಜೆಪಿ ವಿರುದ್ಧ ನಿಂತ ಅವರು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ತಮಿಳುನಾಡಿನಲ್ಲಿ ಎಂಕೆ ಸ್ಟ್ಯಾಲಿನ್ ಪರವಾಗಿ ಚುನಾವಣಾ ರಣತಂತ್ರಗಳನ್ನು ರೂಪಿಸಿದರು.
ಈ ಹಿಂದೆಯೂ ಹಲವು ಬಾರಿ ಬಿಜೆಪಿ ವಿರುದ್ಧ ಮಾತನಾಡಿದ ಪ್ರಶಾಂತ್ ಕಿಶೋರ್, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶವನ್ನೇ ನಿದರ್ಶನವನ್ನಾಗಿ ತೆಗೆದುಕೊಂಡರು. 2012ರಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸರ್ಕಾರ ರಚನೆ ಆಯಿತು. ಆದರೆ ಅದಾಗಿ ಎರಡು ವರ್ಷಗಳಲ್ಲಿ ನಡೆದ 2014ರ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಅದು ಪರಿಣಾಮ ಬೀರಲಿಲ್ಲ ಎಂದು ಉಲ್ಲೇಖಿಸಿದ್ದಾರೆ.












Click it and Unblock the Notifications