ಗುಜರಾತ್ ಚುನಾವಣೆ: ರಾಹುಲ್ ಗಾಂಧಿಯನ್ನು ಸಂಪರ್ಕಿಸಿದ ಚುನಾವಣಾ ಚಾಣಕ್ಯ
ನವದೆಹಲಿ, ಮಾರ್ಚ್ 24: ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರನ್ನು ಪ್ರಶಾಂತ್ ಕಿಶೋರ್ ಸಂಪರ್ಕ ಮಾಡಿದ್ದಾರೆ ಎಂದು ಕಾಂಗ್ರೆಸ್ನ ಮೂಲಗಳು ತಿಳಿಸಿದೆ.
ಕಳೆದ ವರ್ಷ ಗುಜರಾತ್ ಚುನಾವಣೆಯ ನಿಟ್ಟಿನಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಶಾಂತ್ ಕಿಶೋರ್ ನಡುವೆ ಹಲವಾರು ಹಂತಗಳ ಮಾತುಕತೆ ನಡೆದಿದ್ದು, ಎಲ್ಲವೂ ಮುರಿದು ಬಿದ್ದಿತ್ತು. ಆದರೆ ಇದೀಗ ನಾಟಕೀಯ ತಿರುವು ಪಡೆದುಕೊಂಡಿದ್ದು, ರಾಹುಲ್ ಗಾಂಧಿಯ ಜೊತೆ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.
ಕಾಂಗ್ರೆಸ್ ನಾಯಕತ್ವ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಮಾತುಕತೆಗಳು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮುರಿದು ಬಿದ್ದಿತ್ತು. ಕಾಂಗ್ರೆಸ್ ಪಕ್ಷವನ್ನು ಹುರಿದುಂಬಿಸುವಲ್ಲಿ ಚುನಾವಣಾ ತಂತ್ರಜ್ಞರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಹಾಗೆಯೇ ಕಾಂಗ್ರೆಸ್ ಬಗ್ಗೆ ನೇರವಾಗಿ, ಕಟುವಾದ ಹೇಳಿಕೆಗಳನ್ನು ನೀಡಿದ್ದರು.

ಕಾಂಗ್ರೆಸ್ ಆ ಬಳಿಕ ತನ್ನ ಚುನಾವಣಾ ಪ್ರಚಾರಗಳನ್ನು ನಿರ್ವಹಿಸಲು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರ ಮಾಜಿ ಸಹವರ್ತಿಯೊಂದಿಗೆ ಸಹಿ ಹಾಕಿತು. ಆದರೆ ಕಿಶೋರ್, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ಗೆ ಪ್ರಮುಖ ವ್ಯಕ್ತಿಯಾದರು. ಟಿಎಂಸಿ ಮತ್ತೆ ಗದ್ದುಗೆ ಏರಲು ಮುಖ್ಯ ಪಾತ್ರವನ್ನು ಕೂಡಾ ವಹಿಸಿದರು.
ಮಂಗಳವಾರ ಗುಜರಾತ್ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಭೆಯಲ್ಲಿ ಕಿಶೋರ್ ಅವರ ಪ್ರಸ್ತಾಪದ ಬಗ್ಗೆ ಕಾಂಗ್ರೆಸ್ ಇನ್ನೂ ಕೂಡಾ ಮಾಹಿತಿ ನೀಡಿಲ್ಲ. ಕೆಲವು ಗುಜರಾತ್ ಕಾಂಗ್ರೆಸ್ ನಾಯಕರು ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ಚುನಾವಣಾ ತಂತ್ರಜ್ಞರಾಗಿ ಜೊತೆಯಾಗಿಸಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ರಾಹುಲ್ ಗಾಂಧಿ ಕೈಗೊಳ್ಳಲಿದ್ದಾರೆ ಎಂದು ವರದಿ ಹೇಳಿದೆ. ಆದರೆ ಈ ವಿಚಾರವನ್ನು ಪ್ರಶಾಂತ್ ಕಿಶೋರ್ ನಿಕಟ ವ್ಯಕ್ತಿಗಳು ಮಾತ್ರ ನಿರಾಕರಿಸಿದ್ದಾರೆ.
ಗಾಂಧಿಗಳೊಂದಿಗೆ ಹಲವು ಹಂತದ ಚರ್ಚೆ ನಡೆಸಿದ್ದ ಪ್ರಶಾಂತ್ ಕಿಶೋರ್
ಕಳೆದ ವರ್ಷ ಪ್ರಶಾಂತ್ ಕಿರೋರ್ ಕಾಂಗ್ರೆಸ್ಗೆ ಸೇರುವ ನಿಜವಾದ ಸಾಧ್ಯತೆ ಇತ್ತು. ಆದರೆ ಹಲವಾರು ಕಾರಣಗಳಿಂದ ಈ ಮಾತುಕತೆಯು ಮುರಿದು ಬಿದ್ದಿತು ಎಂದು , ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ವಾದ್ರಾ ಈ ವರ್ಷದ ಆರಂಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಪ್ರಶಾಂತ್ ಕಿಶೋರ್ ಕಳೆದ ವರ್ಷ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈ ಮೂರು ನಾಯಕರೊಂದಿಗೆ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿದರು. ರಾಹುಲ್ ಗಾಂಧಿಯವರ ಮನೆಗೆ ಹೋಗುತ್ತಿರುವ ಪ್ರಶಾಂತ್ ಕಿಶೋರ್ ಚಿತ್ರಗಳು ಭಾರೀ ಊಹಾಪೋಹಗಳಿಗೆ ಕಾರಣವಾಯಿತು.












Click it and Unblock the Notifications