Rajasthan assembly elections 2023; ಕಾಂಗ್ರೆಸ್ಗೆ 124 ಸೀಟು!
ಜೈಪುರ, ಸೆಪ್ಟೆಂಬರ್ 08; ದೇಶದ ಕುತೂಹಲ ಕೆರಳಿಸಿರುವ ರಾಜಸ್ಥಾನ ವಿಧಾನಸಭೆ ಚುನಾವಣೆ 2023ರ ಕುರಿತು ಚುನಾವಣಾ ಪೂರ್ವ ಸಮೀಕ್ಷೆಯೊಂದು ಪ್ರಕಟವಾಗಿದೆ. ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿದೆ, ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿದ್ದಾರೆ.
ಈ ವರ್ಷದ ನವೆಂಬರ್ನಲ್ಲಿ 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆಯಲಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಈ ವಿಧಾನಸಭೆ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದು ಲೋಕಸಭೆಯಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.

ವಿವಿಧ ಸಂಸ್ಥೆಗಳು ರಾಜಸ್ಥಾನದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸುತ್ತಿವೆ. ಇದುವರೆಗೂ ಪ್ರಕಟಗೊಂಡಿರುವ ಎರಡು ಸಮೀಕ್ಷೆಗಳು ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ರಾಜಸ್ಥಾನದ ಪ್ರಭಾವಿ ಕಾಂಗ್ರೆಸ್ ನಾಯಕರು.
ಸಮೀಕ್ಷೆಯ ಫಲಿತಾಂಶ; Poll Tracker ರಾಜಸ್ಥಾನದ ಜನರ ನಾಡಿ ಮಿಡಿತ ಅರಿಯಲು ಜುಲೈ 1 ರಿಂದ ಸೆಪ್ಟೆಂಬರ್ 5ರ ತನಕ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಯ ವರದಿಯ ಪ್ರಕಾರ ಕಾಂಗ್ರೆಸ್ ಪಕ್ಷ 108 ರಿಂದ 124 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ರಾಜ್ಯದಲ್ಲಿ ಬಿಜೆಪಿ 67-86 ಸ್ಥಾನ, ಇತರರು 3-12 ಸ್ಥಾನದಲ್ಲಿ ಜಯಗಳಿಸಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಿಸುವುದು ಮಾತ್ರವಲ್ಲ ಶೇ 46.2ರಷ್ಟು ಮತಗಳಿಕೆ ಮಾಡಲಿದೆ. ಬಿಜೆಪಿ ಶೇ 42.6ರಷ್ಟು ಮತಗಳಿಸಲಿದೆ. ಇತರರು 11.2ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
Poll Tracker OF Public Pulse For Rajasthan Assembly Election 2023
— Poll Tracker (@PollTracker) September 7, 2023
⚫️ Total Seat - 200 /200
▪️BJP - 67 - 86
▪️INC - 108-124
▪️OTH - 03 - 12#PollTracker #RajasthanElections2023 #RajasthanAssemblyElection #RajasthanElection pic.twitter.com/Qj61yIO104
ಇನ್ನೊಂದು ಸಮೀಕ್ಷೆ ವರದಿ; ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಬಗ್ಗೆ SmallBoxIndia ಚುನಾವಣಾ ಪೂರ್ವ ಸಮೀಕ್ಷೆಯನ್ನು ಜುಲೈ 22 ರಿಂದ ಆಗಸ್ಟ್ 24ರ ತನಕ ನಡೆಸಿತ್ತು. ಈ ಸಮೀಕ್ಷೆ ವರದಿಯ ಪ್ರಕಾರ ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ 102-108 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ 78-84 ಮತ್ತು ಇತರರು 6-8 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.
ಎರಡು ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದು ಹೇಳಿದ್ದು, ಪಕ್ಷದ ನಾಯಕರ ಉತ್ಸಾಹ ಹೆಚ್ಚಿಸಿದೆ. ರಾಜ್ಯದ ಪ್ರತಿಪಕ್ಷವಾದ ಬಿಜೆಪಿ ತನ್ನ ಚುನಾವಣಾ ತಂತ್ರವನ್ನು ಬದಲಾವಣೆ ಮಾಡಲು ಸೂಚನೆ ನೀಡಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ಕಾಂಗ್ರೆಸ್ನ ಪ್ರಭಾವಿ ನಾಯಕರು. ಆದರೆ ಇಬ್ಬರು ನಾಯಕರ ನಡುವೆ ಹೊಂದಾಣಿಕೆಯ ಕೊರತೆ ಆಗಾಗ ಸುದ್ದಿಯಾಗುತ್ತದೆ. ಹೈಕಮಾಂಡ್ ನಾಯಕರಯ ಇಬ್ಬರ ಮನವೊಲಿಕೆ ಮಾಡುತ್ತಾರೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವೆ ಸಂಧಾನ ನಡೆಸಿದ್ದಾರೆ. ಅಸಮಾಧಾನ ಮರೆತು ಒಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ರಾಹುಲ್ ಗಾಂಧಿ, ಕೆ. ಸಿ. ವೇಣುಗೋಪಾಲ್ ಸಹ ಇಬ್ಬರು ನಾಯಕರಿಗೆ ನಿರ್ದೇಶನಗಳನ್ನು ನೀಡಿದ್ದಾರೆ.
ರಾಜಸ್ಥಾನದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಈ ಕುರಿತು ಮಾತನಾಡಿದ್ದು, "ನಾವು ಯಾವತ್ತೂ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ. ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ. ಮೊದಲು ಭಿನ್ನಾಭಿಪ್ರಾಯವಿತ್ತು. ಈಗ ಎಲ್ಲಾ ನಾಯಕರು ಒಟ್ಟಾಗಿ ಹೋರಾಟ ಮಾಡುತ್ತಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ವಸುಂಧರಾ ರಾಜೇ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿ ಅಧಿಕಾರ ಪಡೆಯಿತು. ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.












Click it and Unblock the Notifications