ವಾರಣಾಸಿ: ಮೋದಿ ಸಮಾವೇಶಕ್ಕೆ ಬ್ರೇಕ್
ವಾರಣಾಸಿ, ಮೇ.7: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶ ನಡೆಸದಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ ಗುರುವಾರ ನಡೆಯಬೇಕಿದ್ದ ಎರಡು ಸಮಾವೇಶವನ್ನು ಬಲ್ವಾಂತವಾಗಿ ರದ್ದುಪಡಿಸಬೇಕಾಗಿ ಬಂದಿರುವುದಕ್ಕೆ ಬಿಜೆಪಿ ಕೆಂಡಕಾರಿದೆ.
ಚುನಾವಣಾ ಆಯೋಗ ಕೊನೆ ಕ್ಷಣದಲ್ಲಿ ಈ ರೀತಿ ಸೂಚನೆ ನೀಡಿರುವ ಕಾರಣವಾದರೂ ಏನು? ಚುನಾವಣಾ ನೀತಿ ಸಂಹಿತೆ ಧಿಕ್ಕರಿಸುವ ಕಾರ್ಯವನ್ನು ಬಿಜೆಪಿ ಏನು ಮಾಡಿಲ್ಲ. ಹೀಗಿದ್ದೂ ಆಯೋಗ ಏಕಾಏಕಿ ಸಮಾವೇಶಗಳನ್ನು ರದ್ದುಪಡಿಸುವಂತೆ ಆದೇಶ ನೀಡಿರುವುದು ವಿಪರ್ಯಾಸ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆಯೋಗದ ನಿರ್ದೇಶನಕ್ಕೆ ತಕ್ಕಂತೆ ಕುಣಿಯುತ್ತಿರುವ ಜಿಲ್ಲಾಡಳಿತ ಅಲಿಖಿತ ಆದೇಶವನ್ನು ಪಾಲಿಸುತ್ತಿದೆ. ಆಡಳಿತಾರೂಢ ಸಮಾಜವಾದಿ ಪಕ್ಷ ಇಲ್ಲೂ ತನ್ನ ರಾಜಕೀಯ ತಂತ್ರ ಹೂಡುತ್ತಿದೆ ಎಂದು ನಿರ್ಮಲಾ ಕಿಡಿಕಾರಿದ್ದಾರೆ.

ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಮಾತನಾಡಿ, 'ಮೋದಿ ಸಮಾವೇಶಗಳನ್ನು ನಿಲ್ಲಿಸುವುದರಿಂದ ಯಾರಿಗೆ ಲಾಭವೋ ಗೊತ್ತಿಲ್ಲ. ಈ ಸಂಚಿನಲ್ಲಿ ಯಾರಿದ್ದರೋ ಬಹಿರಂಗವಾಗಬೇಕು. ಪಾರದರ್ಶಕ ಚುನಾವಣಾ ಪ್ರಕ್ರಿಯೆ ನಡೆಸಲು ಇಲ್ಲಿನ ರಿಟರ್ನಿಂಗ್ ಅಧಿಕಾರಿ ಸಮರ್ಥರಿದ್ದಾರೆ ಎಂದು ನಂಬಿದ್ದೇನೆ' ಎಂದಿದ್ದಾರೆ.
ಗುರುವಾರ ನಡೆಯಬೇಕಿರುವ ಎರಡು ಸಮಾವೇಶಕ್ಕೆ ಅನುಮತಿ ಕೋರಿ ಮಂಗಳವಾರ ಅರ್ಜಿ ಬಂದಿತ್ತು. ಈ ಬಗ್ಗೆ ಆಯೋಗ ನೀಡಿರುವ ನಿರ್ದೇಶನದಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಎಡಿಎಂ ಎಂಪಿ ಸಿಂಗ್ ಹೇಳಿದ್ದಾರೆ.
ವಾರಣಾಸಿಯಲ್ಲಿ ಕಾಂಗ್ರೆಸ್ ಶಾಸಕ ಆಜಯ್ ರಾಯ್, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೇರ ಹಣಾಹಣಿ ನಡೆಸಿದ್ದಾರೆ. ಏ.24 ರಂದು ಬೃಹತ್ ಮೆರವಣಿಗೆ ಮೂಲಕ ಮ್ದಿ ಅವರು ನಾಮಪತ್ರ ಸಲ್ಲಿಸಿದ ಮೇಲೆ ಮೋದಿ ಅಲೆ ಬಗ್ಗೆ ಪ್ರತಿಸ್ಪರ್ಧಿಗಳು ಎಚ್ಚೆತ್ತುಕೊಂಡಿದ್ದಾರೆ. ವಾರಣಾಸಿಯಲ್ಲಿ ಮೇ.12ರಂದು 9ನೇ ಹಾಗೂ ಕೊನೆ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.
ಗುರುವಾರದಂದು ಮೋದಿ ಅವರು ಪವಿತ್ರ ನದಿ ಗಂಗೆಗೆ ಪೂಜೆ ಸಲ್ಲಿಸಿ ಆರತಿ ಬೆಳಗುವ ಕಾರ್ಯಕ್ರಮವೂ ನಿಗದಿಯಾಗಿದೆ. ಜತೆಗೆ ಎರಡು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲು ವೇದಿಕೆ ಸಜ್ಜಾಗಿದೆ.












Click it and Unblock the Notifications