ಕೋಮು ಗಲಭೆಗಳಿಗೆ ರಾಜಕಾರಣಿಗಳು ಕಾರಣ
ಉತ್ತರ ಪ್ರದೇಶ, ಅ.9 : ಮುಜಾಫರ್ ನಗರ ಕೋಮುಗಲಭೆಗೆ ರಾಜಕೀಯ ಪಕ್ಷಗಳ ಪಿತೂರಿಯೇ ಕಾರಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಗಲಭೆಗಳಿಂದ ಜನರು ಸಂಕಷ್ಟ ಅನುಭವಿಸುತ್ತಾರೆ ಎಂದು ಅವರು ಕಾಳಜಿ ವ್ಯಕ್ತಪಡಿಸಿದ್ದಾರೆ.
ಬುಧವಾರ ಪಶ್ಚಿಮ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಪಕ್ಷದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು, ತಮ್ಮ ಮಾತಿನ ತುಂಬಾ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ವಿರುದ್ಧ ರಾಹುಲ್ ಟೀಕಾ ಪ್ರಹಾರ ಮಾಡಿದರು.

ಮುಜಾಫರ್ ನಗರದಲ್ಲಿ ಗಲಭೆ ವಿಕೋಪಕ್ಕೆ ತಿರುಗಲು ರಾಜಕಾರಣಿಗಳೆ ಕಾರಣ ಎಂದು ಆರೋಪಿಸಿದರು. ರಾಜ್ಯದ ಆಡಳಿತ ನಡೆಸುತ್ತಿರುವ ಸಿಎಂ ಅಖಿಲೇಶ್ ಯಾದವ್ ಅವರಿಂದ ಸಮರ್ಥ ಆಡಳಿತ ನೀಡಲು ಸಾಧ್ಯವಾಗಿಲ್ಲ ಎಂದು ದೂರಿದರು.
ಜನರಿಗೆ ಲ್ಯಾಪ್ ಟಾಪ್ ನೀಡುವ ಆಮಿಷವೊಡ್ಡುವುದರಿಂದ ರಾಜ್ಯ ಅಭಿವೃದ್ಧಿ ಆಗುವುದಿಲ್ಲ. ರಾಜ್ಯದಲ್ಲಿ ಶಾಂತಿ ಕಾಪಾಡಬೇಕಾದರೆ, ಗಲಭೆಯನ್ನು ನಿಯಂತ್ರಿಸಬೇಕು ಎಂದು ಅಖಿಲೇಶ್ ಯಾದವ್ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದರು.
ಗಲಭೆಗಳನ್ನು ಮಾಡಿಸುವ ಮೂಲಕ ಹಿಂದು-ಮುಸ್ಲಿಂಮರ ನಡುವೆ ಬಿರುಕು ಮೂಡಿಸಿ ಚುನಾವಣೆಯಲ್ಲಿ ಗೆಲ್ಲವಂತಹ ಹೀನ ಕೃತ್ಯಗಳಿಗೆ ರಾಜಕಾರಣಿಗಳು ಮುಂದಾಗುತ್ತಿದ್ದಾರೆ. ಇಂತಹ ವೋಟ್ ಬ್ಯಾಂಕ್ ರಾಜಕಾರಣ ನಮಗೆ ಬೇಡ ಎಂದು ರಾಹುಲ್ ಹೇಳಿದರು.
ಮುಜಾಫರ್ ನಗರದ ಹಿಂದು-ಮುಸ್ಲಿಂಮರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ ಎಂದು ಅಲ್ಲಿಗೆ ಭೇಟಿ ನೀಡಿದ ನಂತರ ತಿಳಿಯಿತು. ರಾಜಕಾರಣಿಗಳು ಅವರ ನಡುವೆ ಒಡಕು ಮೂಡಿಸಲು ಯತ್ನಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದರು ಎಂದು ರಾಹುಲ್ ತಿಳಿಸಿದರು.
ಕೋಮು ಗಲಭೆಗಳು ಸಂಭವಿಸಿದಾಗ ಯಾವುದೇ ರಾಜಕಾರಣಿ ಸತ್ತ ನಿದರ್ಶನಗಳಿಲ್ಲ. ಕೇವಲ ಸಾಮಾನ್ಯ ಜನರು ಮಾತ್ರ ಇಂತಹ ದುಷ್ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ರಾಜಕಾರಣಿಗಳು ಕೇವಲ ಜನರಲ್ಲಿ ಕಿಚ್ಚು ಹಚ್ಚಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಜನಾಂಗಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ಉತ್ತರ ಪ್ರದೇಶ ಇನ್ನು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಎಸ್ಪಿ ಮತ್ತು ಬಿಎಸ್ಪಿ ಎರಡು ಪಕ್ಷಗಳು ಉತ್ತರ ಪ್ರದೇಶವನ್ನು ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿವೆ. ಹೀಗಾಗಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತನ್ನಿ ಎಂದು ರಾಹುಲ್ ಜನರಿಗೆ ಮನವಿ ಮಾಡಿದರು.












Click it and Unblock the Notifications