ಉಗ್ರರ ಲಾಂಚ್ ಪ್ಯಾಡ್ಗಳು ಭರ್ತಿ, ದಾಳಿಗೆ ಪಾಕ್ ಹುನ್ನಾರ: ಭಾರತೀಯ ಸೇನೆ ಎಚ್ಚರಿಕೆ
ನವದೆಹಲಿ, ಜೂನ್ 1: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ಯಲ್ಲಿ ಇರುವಂತಹ ಉಗ್ರರ ಶಿಬಿರಗಳು ಮತ್ತು 15 ಲಾಂಚ್ಪ್ಯಾಡ್ಗಳು ತುಂಬಿವೆ, ಯಾವುದೇ ಕ್ಷಣದಲ್ಲಿ ಬೇಕಾದರೂ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮುಂದಾಗಬಹುದು ಎಂದು ಭಾರತೀಯ ಸೇನೆ ಎಚ್ಚರಿಸಿದೆ.
'ಜಮ್ಮು ಮತ್ತು ಕಾಶ್ಮೀರದ ಗಡಿಯುದ್ಧಕ್ಕೂ ಈ ಬೇಸಿಗೆಯಲ್ಲಿ ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗುವುದನ್ನು ನಿರೀಕ್ಷಿಸುತ್ತೇವೆ' ಎಂದು ಸೇನೆಯ ಉನ್ನತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿ.ಎಸ್ ರಾಜು ಹೇಳಿದ್ದಾರೆ.
ಬೇಸಿಗೆಯಲ್ಲಿ ಹಿಮ ಕಡಿಮೆ ಆಗುವುದರಿಂದ ಭಾರತದಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ಯಲ್ಲಿ ಇರುವ ಉಗ್ರರ ಶಿಬಿರಗಳು ಮತ್ತು ಲಾಂಚ್ ಪ್ಯಾಡ್ಗಳು ಭರ್ತಿಯಾಗಿವೆ. ಯಾವುದೇ ಕ್ಷಣದಲ್ಲಿ ಉಗ್ರರು ದಾಳಿಗೆ ಮುಂದಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಣಿವೆ ರಾಜ್ಯ ಹಾಗೂ ಕಣಿವೆ ಕೇಂದ್ರಾಡಳಿತ ಪ್ರದೇಶದ ಜನರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕುತ್ತಿರುವುದನ್ನು ಅರಗಿಸಿಕೊಳ್ಳಲಾಗದ ಪಾಕಿಸ್ತಾನ, ಅಲ್ಲಿ ಕಡಿಮೆಯಾಗುತ್ತಿರುವ ಉಗ್ರರ ಸಂಖ್ಯೆಯನ್ನು ಹೆಚ್ಚಿಸಲು ಹುನ್ನಾರ ನಡೆಸುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.
ಇನ್ನು, ಉಗ್ರರ ಗಡಿ ನುಸುಳುವಿಕೆಗೆ ಅನುವು ಮಾಡಿಕೊಡಲು ಪಾಕ್ ಯೋಧರು ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದ ಲೆಫ್ಟಿನೆಂಟ್ ಜನರಲ್ ರಾಜು, ಪಾಕಿಸ್ತಾನ ಸೇನೆಯ ದಾಳಿಗೆ ತಕ್ಕದುದಾದ ಪ್ರತಿ ದಾಳಿ ಮಾಡುವ ಮೂಲಕ ಸೇನೆ, ಉಗ್ರರ ಒಳನುಸುಳುವಿಕೆಯನ್ನು ವಿಫಲಗೊಳಿಸಲಾಗುತ್ತಿದೆ ಎಂದಿದ್ದಾರೆ.











Click it and Unblock the Notifications