ಕಾಂಗ್ರೆಸ್ ವಿರುದ್ಧ ಸಿಡಿದು ನಿಂತ ಶೆಹಜಾದ್ ನನ್ನು ಹೊಗಳಿದ ಮೋದಿ
ಕಾಂಗ್ರೆಸ್ ಬಂಡಾಯ ನಾಯಕರಾಗಿ ಅವತರಿಸಿರುವ ಶೆಹಜಾದ್ ಪೂನ್ ವಲ್ಲಾರ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭತ್ವವನ್ನು ಮೋದಿ ಗುಜರಾತ್ ನ ಚುನಾವಣೆ ಪ್ರಚಾರದ ವೇಳೆ ಪ್ರಶ್ನೆ ಮಾಡಿದ್ದಾರೆ.
ಭಿನ್ನಮತೀಯ ನಾಯಕ ಶೆಹಜಾದ್ ರ ಧ್ವನಿ ಅಡಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ನರೇಂದ್ರ ಮೋದಿ ಆರೋಪಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶೆಹಜಾದ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
"ಶೆಹಜಾದ್ ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಏಕಪಕ್ಷೀಯತೆಯನ್ನು ಬಯಲು ಮಾಡಿದ್ದಾರೆ. ಶೆಹಜಾದ್ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ. ಕಾಂಗ್ರೆಸ್ ನಿಂದ ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯಿತು. ಅಷ್ಟೇ ಏಕೆ, ಆ ಪಕ್ಷದ ಸಾಮಾಜಿಕ ಮಾಧ್ಯಮ ಗುಂಪಿನಿಂದ ತೆಗೆಯಲು ಸಹ ಪ್ರಯತ್ನಿಸಿತು. ಯಾವ ರೀತಿಯ ಸಹಿಷ್ಣುತೆ ಇದು" ಎಂದು ಮೋದಿ ಗುಜರಾತ್ ನ ಸುರೇಂದ್ರನಗರದಲ್ಲಿ ಪ್ರಶ್ನಿಸಿದರು.

ಆಂತರಿಕವಾಗಿಯೇ ಪ್ರಜಾಪ್ರಭುತ್ವ ಇಲ್ಲದವರು ಜನರಿಗಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಶೆಹಜಾದ್ ಗೆ ಹೇಳುವುದಕ್ಕೆ ಇಷ್ಟಪಡುವುದೇನೆಂದರೆ, ನೀವು ಧೈರ್ಯವಾದ ಕೆಲಸ ಮಾಡಿದ್ದೀರಿ. ಆದರೆ ಬೇಸರದ ಸಂಗತಿಯೆಂದರೆ, ಯಾವಾಗಲೂ ಇದು ಕಾಂಗ್ರೆಸ್ ನಲ್ಲಿ ಆಗುವಂಥದ್ದೇ ಎಂದು ಮೋದಿ ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಹೇರಿದ ದಿವಂಗತ ಪ್ರಧಾನಿ ಇಂದಿರಾಗಾಂಧಿ ಇಡೀ ದೇಶವನ್ನೇ ಜೈಲಿನಂತೆ ಮಾಡಿದರು. ಯಾವುದೇ ಸುದ್ದಿಯನ್ನು ಪ್ರಕಟಿಸುವ ಮುನ್ನ ಇಂದಿರಾ ಜೀ ಅವರನ್ನು ಕೇಳಬೇಕಾಗಿತ್ತು. ಆದ್ದರಿಂದ ಶೆಹಜಾದ್ ಹೇಳಿದ್ದರಲ್ಲಿ ಯಾವುದೇ ವಿಶೇಷವಿಲ್ಲ. ಇದೇ ಕಾಂಗ್ರೆಸ್ ಸಂಸ್ಕೃತಿ ಎಂದರು.
ಜನರನ್ನು ಜಾತಿ, ಸಮುದಾಯ, ನಗರ- ಗ್ರಾಮಾಂತರ ಎಂದು ಒಡೆಯುವುದೇ ಕಾಂಗ್ರೆಸ್ ನ ತಂತ್ರಗಾರಿಕೆ. ಗುಜರಾತ್ ಜನರಿಗೆ ಕಾಂಗ್ರೆಸ್ ಏನು ಎಂದು ಗೊತ್ತಿದೆ. ಸಹೋದರರ ಮಧ್ಯೆ ಗೋಡೆಗಳನ್ನು ನಿರ್ಮಿಸುತ್ತಿದೆ. ನಿಮ್ಮಗಳ ಮಧ್ಯೆಯೇ ಜಗಳ ತಂದಿಡುತ್ತಾರೆ. ಈವು ಹೊಡೆದಾಡಿ ಸಾಯುತ್ತಿದ್ದರೆ ಕಾಂಗ್ರೆಸ್ ಸಿಹಿ ತಿನ್ನುತ್ತಿರುತ್ತದೆ ಎಂದು ಆರೋಪಿಸಿದ್ದಾರೆ.












Click it and Unblock the Notifications