ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರಧಾನಿ ನರೇಂದ್ರ ಮೋದಿ
ನಕ್ಸಲ್ ಕಾಟದಲ್ಲಿ ನರಳಿ ಹೋದ ಛತ್ತೀಸ್ಗಢ ರಾಜ್ಯದಲ್ಲಿ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಮೊದಲ ಹಂತದ ಮತದಾನ ಮುಗಿಸಿರುವ ಛತ್ತೀಸ್ಗಢದಲ್ಲಿ ಇನ್ನೇನು ನವೆಂಬರ್ 17 ರಂದು 2ನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯುತ್ತೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕೇಂದ್ರ ನಾಯಕರು ಭರ್ಜರಿಯಾಗಿ ಕ್ಯಾಂಪೇನ್ ನಡೆಸುತ್ತಿದ್ದು, ಈಗ ಕಾಂಗ್ರೆಸ್ ವಿರುದ್ಧ ಪಿಎಂ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಛತ್ತೀಸ್ಗಢ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಅಂತಾ ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದ್ರೆ ಈ ಬಾರಿ ಛತ್ತೀಸ್ಗಢದಲ್ಲಿ ಜಿದ್ದಿಗೆ ಬಿದ್ದ ಬಿಜೆಪಿ ನಾಯಕರು ಗೆದ್ದೇ ಗೆಲ್ಲಬೇಕು ಅಂತಾ ಪಣತೊಟ್ಟಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಕೂಡ ಛತ್ತೀಸ್ಗಢ ರಾಜ್ಯದ ಚುನಾವಣೆಯಲ್ಲಿ ಅಖಾಡ ಪ್ರವೇಶ ಮಾಡಿದ್ದು, ಕಾಂಗ್ರೆಸ್ನ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಛತ್ತೀಸಗಢ ರಾಜ್ಯದ ಕಾಂಗ್ರೆಸ್ ನೆತೃತ್ವದ ಸರ್ಕಾರದ ಪತನಕ್ಕೆ ಕ್ಷಣಗಣನೆ ಶುರುವಾಗಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ಆರೋಪ ಏನು?
ಅಷ್ಟಕ್ಕೂ ಛತ್ತೀಸಗಢ ಮುಂಗೇಲಿ & ಮಹಾಸಮುಂದ್ನಲ್ಲಿ ಚುನಾವಣೆಯ ರ್ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ವೇಳೆ ಹಾಲಿ ಸಿಎಂ ಭೂಪೇಶ್ ಬಘೆಲ್ ವಿರುದ್ಧವೂ ವಾಗ್ದಾಳಿ ನಡೆಸಿದರು. ಛತ್ತೀಸಗಢವನ್ನು ಲೂಟಿ ಮಾಡಿ ಖಜಾನೆ ಭರ್ತಿ ಮಾಡೋದಕ್ಕೆ ಮಾತ್ರ ಕಾಂಗ್ರೆಸ್ಸಿನ ನಾಯಕರು ಇಲ್ಲಿ ಗುರಿ ಇಟ್ಟುಕೊಂಡಿದ್ದಾರೆ. ಬಘೆಲ್ ಪುತ್ರ & ಇತರರು ಸೂಪರ್ ಸಿಎಂ ರೀತಿ ವರ್ತಿಸಿ ರಾಜ್ಯ ನಾಶ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತನ್ನ ಅವಧಿ ಮುಗಿದಿದೆ ಎಂಬುದು..
ಹಾಗೇ ಛತ್ತೀಸ್ಗಢದಲ್ಲಿ ತನ್ನ ಅವಧಿ ಮುಗಿದಿದೆ ಎಂಬುದು ಕಾಂಗ್ರೆಸ್ಸಿಗೆ ಅರ್ಥವಾಗಿದೆ ಎಂದು ಹೇಳಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಮತಬ್ಯಾಂಕ್ ಹಾಗೂ ಓಲೈಕೆಗಾಗಿ ಏನು ಬೇಕಿದ್ದರೂ ಮಾಡಬಲ್ಲದು ಎಂದಿದ್ದಾರೆ. ಈ ಮೂಲಕ ಛತ್ತೀಸ್ಗಢ ಅಖಾಡದಲ್ಲಿ ಮತ್ತೆ ಸಂಚಲನವು ಸೃಷ್ಟಿಯಾಗಿದೆ.

ಈಗಾಗಲೇ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹಲವು ಉಚಿತ ಕೊಡುಗೆಗಳನ್ನ ಘೋಷಣೆ ಮಾಡಿದ್ದು, ಮತದಾರರ ಮನವೊಲಿಸಲು ಯತ್ನಿಸುತ್ತಿದೆ. ಹಾಗೇ ಇನ್ನೊಂದು ಕಡೆ ಕಾಂಗ್ರೆಸ್ ಕೂಡ ಕರ್ನಾಟಕದ ರೀತಿಯೇ ಹಲವು ಗ್ಯಾರಂಟಿ ಆಶ್ವಾಸನೆ ನೀಡಿದೆ.
ಒಟ್ನಲ್ಲಿ ಛತ್ತೀಸ್ಗಢ ರಣಕಣ ರಂಗೇರಿದ್ದು ಅಂತಿಮ ಹಂತದ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಎರಡನೇ ಹಂತದ ಮತದಾನ ಮುಗಿಯಲಿದ್ದು ಡಿಸೆಂಬರ್ 3ಕ್ಕೆ ಫಲಿತಾಂಶ ಕೂಡ ಹೊರಬೀಳಲಿದೆ. ಹೀಗಾಗಿ ಅಂತಿಮ ಹಂತದ ಪ್ರಚಾರ ಕಾರ್ಯ ಕೂಡ ಭರ್ಜರಿಯಾಗಿ ಸಾಗಿದೆ.
ಅದರಲ್ಲೂ ಇದೀಗ ಕಾಂಗ್ರೆಸ್ ವಿರುದ್ಧ, ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications