ಸೋನಿಯಾ 'ಹವಾಬಾಜಿ' ಟೀಕೆಗೆ ಮೋದಿ ಖಡಕ್ ತಿರುಗೇಟು
ಭೋಪಾಲ್, ಸೆ 11: ಎರಡು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತನ್ನ ಮೇಲೆ ಮಾಡಿದ್ದ 'ಹವಾಬಾಜಿ' ಎನ್ನುವ ಪದ ಪ್ರಯೋಗದ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
ಭೋಪಾಲ್ ನಲ್ಲಿ ಗುರುವಾರ (ಸೆ 10) ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಲೋಕಸಭೆಯ ಮಳೆಗಾಲದ ಅಧಿವೇಶನವನ್ನು ಸಂಪೂರ್ಣವಾಗಿ ಹಾಳು ಮಾಡಿದ ಕಾಂಗ್ರೆಸ್ಸಿಗರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದಿದ್ದಾರೆ.
ತನ್ನನ್ನು ಹವಾಬಾಜಿ ಎಂದು ಕರೆದಿದ್ದಕ್ಕೆ ತಿರುಗೇಟು ನೀಡಿದ ಮೋದಿ, ಕಾಂಗ್ರೆಸ್ಸಿಗರು ' ಹವಾಲಾಬಾಜಿಗಳು', ಅವರ ಬುಡವೇ ಅಲ್ಲಾಡುತ್ತಿದೆ. ಕಪ್ಪುಹಣದ ವಿಚಾರ ಅವರಿಗೆ ಆತಂಕ ತಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಮ್ಮ ವಿರೋಧ ಪಕ್ಷವಾಗಿದ್ದರೂ ನನ್ನ ಎಲ್ಲಾ ಸಹದ್ಯೋಗಿಗಳು ಯುಪಿಎ ಮೈತ್ರಿಕೂಟದ ಹಿರಿಯ ಮುಖಂಡರ ಜೊತೆ ಸಂಪರ್ಕದಲ್ಲಿದ್ದು ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸಲು ಬಯಸಿದ್ದರು. ಆದರೆ ಕಾಂಗ್ರೆಸ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ ಎಂದು ಮೋದಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ದಯನೀಯವಾಗಿ ಸೋತರೂ ತನ್ನ ಜುಟ್ಟು ಮಣ್ಣಾಗಲಿಲ್ಲ ಎನ್ನುವ ದುರಂಹಕಾರ ಧೋರಣೆಯನ್ನು ಕಾಂಗ್ರೆಸ್ ತೋರುತ್ತಿದೆ. ನಾವು ಅದಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಮೋದಿ, ಕಾಂಗೆಸ್ಸಿಗೆ ಎಚ್ಚರಿಕೆ ನೀಡಿದ್ದಾರೆ.
ಮೋದಿ ವಾಗ್ದಾಳಿಯ ಕೆಲವೊಂದು ಸ್ಯಾಂಪಲ್ ಸ್ಲೈಡಿನಲ್ಲಿ..

ಸೋನಿಯಾ ಗಾಂಧಿ ಮೋದಿ ಬಗ್ಗೆ ಹೇಳಿದ್ದೇನು?
ಬಿಹಾರದ ಚುನಾವಣೆ ಹತ್ತಿರ ಬರುತ್ತಿದೆ. ಮೋದಿ ಚುನಾವಣೆಯ ಸಂದರ್ಭದಲ್ಲಿ ನೀಡುವ ಭರವಸೆ ಹವಾಬಾಜಿ (ನಂಬಿಕೆಗೆ ಅನರ್ಹವಾದ ಭರವಸೆಗಳು) ಹೇಳಿಕೆಗಳು. ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಲ್ಲಿ ಮೋದಿ ಒಂದಾದರೂ ಪೂರೈಸಿದ್ದಾರಾ ಎಂದು ಸೋನಿಯಾ ಟೀಕಿಸಿದ್ದರು. ಇದಾದ ನಂತರ ಮೋದಿ ಹವಾಲಬಾಜಿ ಹೇಳಿಕೆಗೆ ಸೋನಿಯಾ, ಮೋದಿಯವರನ್ನು ದಗಾಬಾಜ್ ಎಂದು ದೆಹಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಇಂದಿರಾಜಿ ಸಾವನ್ನಪ್ಪಿದಾಗ
ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಸಾವನ್ನಪ್ಪಿದಾಗ (1984) ಕಾಂಗ್ರೆಸ್ ಪರವಾಗಿ ಅಭೂತಪೂರ್ವ ಜನಾದೇಶ ವ್ಯಕ್ತವಾಯಿತು. ನಮಗೆ ಜನಾದೇಶ ಬಂದಿಲ್ಲವೆಂದು ನಾವು ಯಾರನ್ನೂ ದೂಷಿಸಲು ಹೋಗಿಲ್ಲ - ಮೋದಿ.

ರಾಜೀವ್ ಗಾಂಧಿ ಹೀಯಾಳಿಸಿದ್ದು ಮರೆಯೋಲ್ಲ
ನಾವು ಈಗ ಕ್ಲಿಯರ್ ಮೆಜಾರಿಟಿಯಲ್ಲಿದ್ದೇವೆ. ಈ ಹಿಂದೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ನಲ್ಲಿ ನಾಲ್ಕೂರಕ್ಕೂ ಹೆಚ್ಚು ಸಂಸದರಿದ್ದರು. ನಮ್ಮ ಮುಖಂಡರನ್ನು ಅಂದು ರಾಜೀವ್ ಗಾಂಧಿ ಹೀಯಾಳಿಸಿದ್ದನ್ನು ಮರೆಯಲು ಸಾಧ್ಯವೇ - ಮೋದಿ.

ಬೋಗಸ್ ಎಲ್ಪಿಜಿ ಕನೆಕ್ಷನ್
ನಮ್ಮ ಆರ್ಥಿಕ ನೀತಿಯ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುತ್ತಿಲ್ಲ. ನಮ್ಮ ಕೆಲವು ನೇರ ಹಣ ವರ್ಗಾವಣೆ ಪದ್ದತಿಯಿಂದ ಸರಕಾರದ ಬೊಕ್ಕಸಕ್ಕೆ ಲಾಭವಾಗಿದೆ. ಉದಾಹರಣೆಗೆ ಬೋಗಸ್ ಎಲ್ಪಿಜಿ ಕನೆಕ್ಷನ್ ಗಳು ಕಮ್ಮಿಯಾಗುತ್ತಿವೆ. ಇದರಿಂದ ಕೋಟ್ಯಾಂತರ ರೂಪಾಯಿ ಪೋಲಾಗುವುದನ್ನು ನಮ್ಮ ಸರಕಾರ ತಪ್ಪಿಸಿದೆ - ಮೋದಿ.

ಹವಾಲ ಕಾಂಗ್ರೆಸ್ಸಿಗರು
ದಶಕಗಳಿಂದ ಅಧಿಕಾರದ ಮದ ಏರಿ ಆಡಳಿತ ಯಂತ್ರವನ್ನು ದುರುಪಯೋಗ ಪಡೆಸಿಕೊಂಡ ಹವಾಲಬಾಜಿ ಕಾಂಗ್ರೆಸ್ಸಿಗರು ಈಗ ನಮ್ಮಲ್ಲಿ ಲೆಕ್ಕ ಕೇಳುತ್ತಿದ್ದಾರೆ. ದೇಶದ ಮೂಲೆ ಮೂಲೆಗೆ ಹೋಗಿ ಕಾಂಗ್ರೆಸ್ ನಡೆಸಿದ್ದ ದುರಾಡಳಿತವನ್ನು ಜನರಿಗೆ ಮನದಟ್ಟು ಮಾಡಿ ಎಂದು ಮೋದಿ, ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಗಾಂಧಿ, ಉಪಾಧ್ಯಾಯ ಜನ್ಮಶತಾಬ್ದಿ
ಸೆಪ್ಟಂಬರ್ 25ರಿಂದ ಅಕ್ಟೋಬರ್ ಎರಡರ ತನಕದ ಮಹಾತ್ಮ ಗಾಂಧಿ ಮತ್ತು ದೀನ್ ದಯಾಳ್ ಉಪಾಧ್ಯಾಯ ಜನ್ಮಶತಾಬ್ದಿ ಅವಧಿಯನ್ನು ಸಾರ್ಥಕಪೂರ್ಣ ಗೊಳಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದಾರೆ.












Click it and Unblock the Notifications