ಲಾಕ್ ಡೌನ್ ಆಗಿರುವ ಭಾರತದ ಬಗ್ಗೆ ಪ್ರಧಾನಿ ಮೋದಿ 'ಮನ್ ಕೀ ಬಾತ್'?
ನವದೆಹಲಿ, ಏಪ್ರಿಲ್.26: ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಭಾರತ ಲಾಕ್ ಡೌನ್ ಘೋಷಣೆ ಆದ ಬಳಿಕ ಎರಡನೇ ಬಾರಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. 64ನೇ ಕಂತಿನ ಮನ್ ಕೀ ಬಾತ್ ಉದ್ದೇಶಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ ನಾವು ವೆಬ್ ಸೈಟ್ ಆರಂಭಿಸಿದ್ದೇವೆ. ಸಾಮಾಜಿಕ ಸಂಘಟನೆಗಳು, ಸ್ಥಳೀಯ ಆಡಳಿತಗಳು ಇದರ ಮೂಲಕ ಸಂಪರ್ಕದಲ್ಲಿವೆ. 1.25 ಕೋಟಿ ಜನರು ಡಾಕ್ಟರ್, ನರ್ಸ್, ಎನ್ಸಿಸಿ ಕೆಡೆಟ್ ಗಳು ಸೇರಿದಂತೆ ಹಲವರು ವೆಬ್ ಸೈಟ್ಗೆ ಭೇಟಿ ನೀಡುವ ಮೂಲಕ ಕೊರೊನಾ ವಾರಿಯರ್ಸ್ ಆಗಿದ್ದಾರೆ.
ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಆರೋಗ್ಯವಂತ ದೇಶಕ್ಕಾಗಿ ಹೋರಾಟವನ್ನು ಮುಂದುವರಿಸೋಣ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು, ಕಾರ್ಮಿಕರು ಸೇರಿದಂತೆ ಎಲ್ಲ ರಂಗದ ವಾರಿಯರ್ಸ್ ಜೊತೆಗೆ ಕೈ ಜೋಡಿಸೋಣ ಎಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮನೆಯಲ್ಲಿದ್ದುಕೊಂಡು ಹಬ್ಬ ಆಚರಿಸಿ ಎಂದ ಮೋದಿ
ಮನ್ ಕೀ ಬಾತ್ ಭಾಷಣದಲ್ಲಿ ಬಸವ ಜಯಂತಿ, ರಂಜಾನ್ ಶುಭಾಶಯಗಳನ್ನು ಕೋರಿದ ಮೋದಿ ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಪಾಲಿಸೋಣ. ಸಾಮಾಜಿಕ ಅಂತವನ್ನು ನಾವು ಕಾಯ್ದುಕೊಳ್ಳೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಕೊರೊನಾ ವಿರುದ್ಧ ಹೋರಾಡುತ್ತಾ ನಾವು ಹಬ್ಬವನ್ನು ಆಚರಣೆ ಮಾಡುವ ರೀತಿಯೂ ಬದಲಾಗಿದೆ. ಈ ಬಾರಿ ಕ್ರಿಶ್ಚಿಯನ್ ಬಾಂಧವರು ಈಸ್ಟರ್ಅನ್ನು ಮನೆಯಲ್ಲಿಯೇ ಆಚರಣೆ ಮಾಡಿದ್ದಾರೆ. ನಾವು ಮನೆಯಲ್ಲಿಯೇ ಇರೋಣ, ಕೊರೊನಾ ವಿರುದ್ಧ ಹೋರಾಟವನ್ನು ಮುಂದುವರೆಸೋಣ. ಮುಂದಿನ ಮನ್ ಕೀ ಬಾತ್ ಕಾರ್ಯಕ್ರಮದ ವೇಳೆಗೆ ದೇಶ, ಪ್ರಪಂಚ ಕೊರೊನಾದಿಂದ ಮುಕ್ತವಾಗಿರುವ ಶುಭ ಸುದ್ದಿ ಬಂದಿರುತ್ತದೆ ಎಂದು ಆಶಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ಕೊರೊನಾ ಹೋರಾಟಗಾರರನ್ನು ಸೈನಿಕರಿಗೆ ಹೋಲಿಸಿದ ಮೋದಿ
ಕೊರೊನಾ ವಿರುದ್ಧದ ದೇಶದ ಹೋರಾಟದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸೈನಿಕರು. ತಮ್ಮ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಅವರು ಹೋರಾಡುತ್ತಿದ್ದಾರೆ. ಕೊರೊನಾ ವಿರುದ್ಧ ದೇಶದ ಹೋರಾಟ ಸರಿಯಾದ ದಿಕ್ಕಿನಲ್ಲಿದೆ. ಬಡತನದ ವಿರುದ್ಧ ಹೋರಾಡುತ್ತಲೇ ನಾವು ಮಾರಕ ರೋಗದ ವಿರುದ್ಧವೂ ಹೋರಾಟ ನಡೆಸುತ್ತಿದ್ದೇವೆ. ಕ್ವಾರಂಟೈನ್ನಲ್ಲಿರುವ ಕೆಲವು ಕಾರ್ಮಿಕರು ಮಾಸ್ಕ್ ತಯಾರು ಮಾಡುತ್ತಿದ್ದಾರೆ. ಕೆಲವು ಕಾರ್ಮಿಕರು ಶಾಲೆಗೆ ಬಣ್ಣವನ್ನು ಬಳಿದಿದ್ದಾರೆ. ದೇಶದ ಜನರಿಗೆ ನಾವು ಈ ಸಮಯದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ದೇಶದ ಹಸಿವು ನೀಗಿಸಲು ರೈತರ ಪರಿಶ್ರಮ ಸ್ಮರಿಸಿದ ಪ್ರಧಾನಿ
ದೇಶದಲ್ಲಿನ ಯಾವ ಜನರು ಸಹ ಹಸಿವಿನಿಂದ ಬಳಲಬಾರದು ಎಂದು ರೈತರು ಹೊಲಗಳಲ್ಲಿ ಹಗಲು-ರಾತ್ರಿ ಕಷ್ಟಪಡುತ್ತಿದ್ದಾರೆ. ಪ್ರತಿಯೊಂದು ಹೋರಾಟವೂ ಹೊಸ ಹೊಸ ಪಾಠಗಳನ್ನು ಕಲಿಸುತ್ತದೆ. ಇದಕ್ಕೆ ಜನರು ಸಹ ಬೆಂಬಲ ನೀಡುತ್ತಿದ್ದಾರೆ. ಹೊಸ-ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯಗಳ ಪಾತ್ರವೂ ಮುಖ್ಯವಾದದ್ದು. ರಾಜ್ಯಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.

ವಿಮಾನ, ರೈಲ್ವೆ ಮೂಲಕ ಔಷಧಿಗಳ ಪೂರೈಕೆ
ಹವಾಯಿ ಉಡಾನ್ ಎಂಬ ಘೋಷಣೆಯಡಿ ದೇಶದ ವಿವಿಧ ಭಾಗಗಳಿಗೆ ವಿಮಾನದ ಮೂಲಕ ಔಷಧಿಗಳನ್ನು ಸಾಗಣೆ ಮಾಡಲಾಗಿದೆ. ಭಾರತೀಯ ರೈಲ್ವೆ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆಯಾಗದಂತೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಜನರಿಗೆ ವಸ್ತುಗಳನ್ನು ತಲುಪಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಹಲವಾರು ಪೋಸ್ಟ್ಗಳು ಹರಿದಾಡುತ್ತಿವೆ. ಆರೋಗ್ಯ ಇಲಾಖೆ ನೀಡಿದ ಕ್ರಮಗಳನ್ನು ನೀವು ಪಾಲನೆ ಮಾಡುತ್ತಿದ್ದೀರಿ ಎಂದು ನಾನು ನಂಬಿದ್ದೇನೆ.

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಜೈಲುಶಿಕ್ಷೆ
ಕೊರೊನಾ ತೊಲಗಿಸಲು ಡಾಕ್ಟರ್, ವೈದ್ಯಕೀಯ ಸಿಬ್ಬಂದಿ ಕಷ್ಟ ಪಡುತ್ತಿದ್ದಾರೆ. ಅವರ ರಕ್ಷಣೆ ನಮ್ಮ ಆದ್ಯತೆಯಾಗಿದೆ. ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನಿನ ಅಗತ್ಯವಿತ್ತು ಎಂದು ನರೇಂದ್ರ ಮೋದಿ ಹೇಳಿದರು. ಉದ್ಯಮ, ಕಚೇರಿ, ಶಿಕ್ಷಣ, ಮೆಡಿಕಲ್ ಸ್ಟೋರ್ ಸೇರಿದಂತೆ ಎಲ್ಲಾ ಕಡೆ ಬದಲಾವಣೆ ಕಂಡು ಬರುತ್ತಿದೆ. ಕೊರೊನಾ ಸೋಂಕಿನ ಹೋರಾಟದಲ್ಲಿ ಭಾರತ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಮಾಸ್ಕ್ ಧರಿಸುವುದು ಆರೋಗ್ಯಕರ ಸಮಾಜದ ಲಕ್ಷಣವಾಗಿದೆ. ನೀವು ಮಾಸ್ಕ್ ಧರಿಸಿ ನಿಮ್ಮ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡಿ ಎಂದು ಪ್ರಧಾನಿ ಕರೆ ಕೊಟ್ಟರು.












Click it and Unblock the Notifications