ಉತ್ತರಪ್ರದೇಶದಲ್ಲಿ ಎಂಟದೆಯ ಭಂಟನಾಗಿ ಹೊರಹೊಮ್ಮಿದ ಪಿಎಂ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅಲೆ: ಉತ್ತರಪ್ರದೇಶದಲ್ಲಿ ಭರ್ಜರಿ ಜಯದತ್ತ ಬಿಜೆಪಿ
ದೇಶದ ಪ್ರಧಾನಿ ಎನ್ನುವ ಕಿಂಚಿತ್ ಗೌರವ ನೀಡದೇ, ಮೋದಿಯನ್ನು 'ಕತ್ತೆ' ಗೆ ಹೋಲಿಸಿ ತುಂಬಿದ ಸಭೆಯಲ್ಲಿ ಮಾತನಾಡಿದಾಗಲೇ, ಅಖಿಲೇಶ್ ಯಾದವ್ ಅವರ ಮತ್ತೊಂದು ಅವಧಿಗೆ ಸಿಎಂ ಆಗಬೇಕು ಎನ್ನುವ ಕನಸಿನ ಕಿರೀಟದ ಗರಿ ಹೆಚ್ಚುಕಮ್ಮಿ ಒಂದೊಂದಾಗಿ ಕಳಚಲಾರಂಭಿಸಿತ್ತು.
ಜೊತೆಗೆ, ಮೋದಿ ತಲೆಕಡಿಯಿರಿ ಎನ್ನುವ ತನ್ನ ಪಕ್ಷದ ಮುಖಂಡರ ಹೇಳಿಕೆ ಸಮಾಜವಾದಿ ಪಕ್ಷಕ್ಕೆ ಮುಳುವಾಯಿತು. ಮೊದಲೇ ಪ್ರಧಾನಿ ಮೋದಿಗೆ ಮಾತನಾಡಲು ಹೇಳಿ ಕೊಡ್ಬಬೇಕಾ, ಅಪ್ರತಿಮ ವಾಗ್ಮಿಯಾಗಿರುವ ಮೋದಿ ಇದೇ ಕತ್ತೆ ಎನ್ನುವ ಪದವನ್ನು ಬಳಸಿಕೊಂಡು ಉತ್ತರಪ್ರದೇಶದಾದ್ಯಂತ ಎಸ್ಪಿ ಮತ್ತು ಕಾಂಗ್ರೆಸ್ಸನ್ನು ರುಬ್ಬಿದ್ದೋ ರುಬ್ಬಿದ್ದು.
ಕತ್ತೆ ಯಜಮಾನನ ನಂಬಿಕೆಯ ಪ್ರಾಣಿ, ಅದು ಯಜಮಾನನಿಗಾಗಿ ದುಡಿಯುತ್ತದೆ. ನೀವು ನನ್ನ ಯಜಮಾನರು, ನಿಮಗಾಗಿ ನಾನು ಕತ್ತೆ ರೀತಿಯಲ್ಲಿ ಹಗಲು ರಾತ್ರಿ ದುಡಿಯುತ್ತೇನೆಂದು.. ತನಗಿರುವ ಈಗಿನ ಜನಪ್ರಿಯತೆಯ ಜೊತೆಗೆ ತಮ್ಮ ಮೈಲೇಜನನ್ನು ಮೋದಿ ಮತ್ತಷ್ಟು ಹೆಚ್ಚಿಸಿಕೊಂಡರು.
ದೇಶದ ಅತಿಹೆಚ್ಚು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಹಲವಾರು ಕಾರಣಕ್ಕಾಗಿ ಬಿಜೆಪಿಗೆ ಮಹತ್ವದ್ದಾಗಿತ್ತು ಮತ್ತು ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
ದೇಶದ ಇಡೀ ವಿರೋಧ ಪಕ್ಷದ ನಾಯಕರು ಒಂದೆಡೆ ಮತ್ತು ಪ್ರಧಾನಿ ಮೋದಿ ಒಂದೆಡೆ ಎನ್ನುವ ರೀತಿಯಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಸಿಂಗಲ್ ಹ್ಯಾಂಡ್ ಆಗಿ ಮೋದಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿಯನ್ನು ದಡಕ್ಕೆ ಸೇರಿಸಿದ್ದಾರೆ. ಮುಂದೆ ಓದಿ..

ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ
2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೊದಲ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಐದು ರಾಜ್ಯಗಳ ಚುನಾವಣೆಯಲ್ಲಿ, ಅದರಲ್ಲೂ ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಗಣನೀಯ ಸಾಧನೆ ಮಾಡಿದೆ. ಮೋದಿ ಅಲೆಯ ಮುಂದೆ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ ಮತ್ತು ಬಿಎಸ್ಪಿ ಧೂಳೀಪಟವಾಗಿದೆ.

ಮೋದಿಗೆ ಸವಾಲಾಗಿದ್ದ ಚುನಾವಣೆ
ವೈಯಕ್ತಿಕವಾಗಿ ಮೋದಿಯವರಿಗೆ ಸವಾಲಾಗಿದ್ದ ಈ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸುಮಾರು ಮೂವತ್ತಕ್ಕೂ ಹೆಚ್ಚು ಸಾರ್ವಜನಿಕ ಸಭೆ ಜೊತೆಗೆ, ತಾವು ಪ್ರತಿನಿಧಿಸುವ ವಾರಣಾಸಿಯಲ್ಲಿ ಮೋದಿ ರೋಡ್ ಶೋ ನಡೆಸಿದ್ದರು. ಮೋದಿ ಜೊತೆ ರಾಜನಾಥ್ ಸಿಂಗ್, ಅಮಿತ್ ಶಾ, ಯೋಗಿ ಆದಿತ್ಯಾನಂದ, ಉಮಾಭಾರತಿ ಸೇರಿ ಪಕ್ಷದ ಪ್ರಮುಖರು ಸುಮಾರು 150ಕ್ಕೂ ಸಾರ್ವಜನಿಕ ಸಭೆಯನ್ನು ನಡೆಸಿದ್ದರು.

ಬಿಹಾರದಲ್ಲಾದ ತಪ್ಪು ಮರುಕಳಿಸದಂತೆ ಎಚ್ಚರ
ಬಿಹಾರದಲ್ಲಾದ ಕೆಲವೊಂದು ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಂಡು, ಪಕ್ಷದ ಮುಖಂಡರು ಆಕ್ರೋಶಭರಿತ ಹೇಳಿಕೆ ನೀಡುವುದಕ್ಕೆ ತಡೆನೀಡಿ, ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಜಾತಿ ಲೆಕ್ಕಾಚಾರಕ್ಕೆ ಹೆಚ್ಚಿನ ಒತ್ತು ನೀಡಿ, ಬಿಜೆಪಿ ನಿರೀಕ್ಷೆಗೂ ಮೀರಿದ ಜಯ ಸಾಧಿಸಿದೆ. ಅಮಿತ್ ಶಾ ತಂತ್ರಗಾರಿಕೆ, ಮೋದಿ ಎನ್ನುವ ಹೆಸರು ಮತ್ತೊಮ್ಮೆ ಪಕ್ಷಕ್ಕೆ ವರ್ಕೌಟ್ ಆಗಿದೆ.

ಪ್ರಾದೇಶಿಕ ಪಕ್ಷಗಳ ಮಹತ್ವಕ್ಕೆ ಧಕ್ಕೆ
ಉತ್ತರಪ್ರದೇಶದಲ್ಲಿನ ಜಯ, ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರಬೇಕು ಎನ್ನುವವರಿಗೆ ತೀವ್ರ ಹಿನ್ನಡೆಯಾಗಿದೆ. ರಾಷ್ಟ್ರ ಮಟ್ಟದಲ್ಲಿನ ಅಲೆ ಮತ್ತು ರಾಷ್ಟ್ರೀಯ ನಾಯಕನ ವರ್ಚಸ್ಸು ರಾಜ್ಯಗಳಲ್ಲಿ ಯಾವ ಮಟ್ಟಿಗೆ ಪ್ರಭಾವ ಬೀಳಲಿದೆ ಎನ್ನುವುದಕ್ಕೆ ಉತ್ತರಪ್ರದೇಶ ಚುನಾವಣಾ ಫಲಿತಾಂಶ ಉತ್ತರವಾಗಿದೆ.

ಕಲ್ಯಾಣ್ ಸಿಂಗ್ ದಾಖಲೆಗಿಂತಲೂ ಹೆಚ್ಚು
1991ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ 221 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ಭರ್ಜರಿ ತಂದುಕೊಟ್ಟಿದ್ದರು. ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆ ದಾಖಲೆಯನ್ನು ಬ್ರೇಕ್ ಮಾಡಿ, ಮುನ್ನೂರರ ಆಸುಪಾಸಿಗೆ ಬಂದು ನಿಂತಿದೆ. ಆ ಮೂಲಕ ಯಾರ ಹಂಗೂ ಇಲ್ಲದೇ ಸ್ವಂತ ಬಲದಿಂದ ಗದ್ದುಗೇರಲು ಸಜ್ಜಾಗಿದೆ.

ಎಂಟೆದೆಯ ಭಂಟನಾಗಿ ಹೊರಹೊಮ್ಮಿದ ಮೋದಿ
ಸಮಾಜವಾದಿ ಪಕ್ಷದ ಕುಟುಂಬ ಕಲಹ, ದೇಶದ ಸೀಸನ್ ಪೊಲಿಟಿಸಿಯನ್ ಮುಲಾಯಂ ಸಿಂಗ್ ಪ್ರಚಾರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳದೇ ಇದ್ದದ್ದು, ಸೋನಿಯಾ ಅನಾರೋಗ್ಯ, ವರ್ಚಸ್ಸು ಇಲ್ಲದ ರಾಹುಲ್ ನಾಯಕತ್ವ, ಈ ಎಲ್ಲವನ್ನೂ ಮೀರಿ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದಲ್ಲಿ ಎಂಟೆದೆಯ ಭಂಟನಾಗಿ ಹೊರಹೊಮ್ಮಿದ್ದಾರೆ.











Click it and Unblock the Notifications