ಜಿಎಸ್ ಟಿ ಅಂಗೀಕಾರಕ್ಕೆ ನರೇಂದ್ರ ಮೋದಿ ಸರ್ಕಾರದ ಹೆಜ್ಜೆ
ನವದೆಹಲಿ, ಜುಲೈ, 18: ಸಂಸತ್ ನ ಮುಂಗಾರು ಅಧಿವೇಶನ ಜುಲೈ 18, ಸೋಮವಾರದಿಂದ ಆರಂಭವಾಗಲಿದೆ.ಈ ಬಾರಿ ಕೇಂದ್ರ ಸರ್ಕಾರ ಜಿಎಸ್ ಟಿ(ಸರಕು ಮತ್ತು ಸೇವಾ ತೆರಿಗೆ) ಮಸೂದೆ ಅಂಗೀಕಾರ ಮಾಡುವ ಬಗ್ಗೆ ಶತ ಪ್ರಯತ್ನ ಮಾಡಲಿದೆ.
ಒಟ್ಟು 20 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಗಸ್ಟ್ 15 ರಂದು ಅಧಿವೇಶನ ಮುಕ್ತಾಯವಾಗಲಿದ್ದು ವಿವಿಧ ಮಸೂದೆಗಳ ಮಂಡನೆ ಸಾಧ್ಯತೆ ಇದೆ. ಸುಗಮ ಕಲಾಪಕ್ಕೆ ಸಹಕರಿಸಲು ಪ್ರಧಾನಿ ಮೋದಿ ವಿಪಕ್ಷಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.[ತಮಿಳುನಾಡು ಬಿಟ್ಟು ಎಲ್ಲಾ ರಾಜ್ಯಗಳಿಂದ ಜಿಎಸ್ ಟಿಗೆ ಬೆಂಬಲ]

ಸರಕಾರ ಸರಕು ಮತ್ತು ಸೇವಾ ತೆರಿಗೆ -ಜಿಎಸ್ಟಿ ಮಸೂದೆ ಸೇರಿದಂತೆ 25 ಮಸೂದೆಗಳನ್ನು ಕಲಾಪ ಪಟ್ಟಿಯಲ್ಲಿರಿಸಿಕೊಂಡಿದ್ದು ಅವುಗಳನ್ನು ಪಾಸ್ ಮಾಡಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸಹಕಾರ ಕೋರಿದೆ. ತಮಿಳುನಾಡೊಂದನ್ನು ಬಿಟ್ಟು ಎಲ್ಲಾ ರಾಝ್ಯಗಳು ಜಿಎಸ್ ಟಿಗೆ ಹಿಂದೆಯೇ ಒಪ್ಪಿಗೆ ನೀಡಿದ್ದವು. [ಜಿಎಸ್ ಟಿ: ಮೋದಿ ಕೈಗೆ 29 ಅಂಶಗಳ 94 ಪುಟಗಳ ಬೇಡಿಕೆ ಪಟ್ಟಿ ಕೊಟ್ಟ ಜಯಲಲಿತಾ]
ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ(ಜಿಎಸ್ ಟಿ) ಲೋಕಸಭೆ ಈ ಹಿಂದೆಯೇ ಅನುಮೋದನೆ ನೀಡಿದೆ. ಆದರೆ ರಾಜ್ಯಸಭೆಯಲ್ಲಿ ಅನುಮೋದನೆ ಲಭಿಸದ ಕಾರಣ ಅದು ನನೆಗುದಿಗೆ ಬಿದ್ದಿದೆ. ಏಪ್ರಿಲ್ 1, 2016 ರಿಂದ ಜಾರಿಗೊಳಿಸಲು ಮೋದಿ ಸರ್ಕಾರ ಮುಂದಾಗಿತ್ತು.
ಅರುಣಾಚಲ ಪ್ರದೇಶದ ರಾಜಕೀಯ ವ್ಯವಸ್ಥೆ ಬಗ್ಗೆ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ, ಬೆಲೆ ಏರಿಕೆ, ಕಾಶ್ಮೀರ ಹಿಂಸಾಚಾರದಂಥ ಅಂಶಗಳನ್ನು ಇಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿವೆ.












Click it and Unblock the Notifications