ಜಾಗತಿಕ ಮಟ್ಟದಲ್ಲಿ ಸಾಗರೋತ್ತರ ವಹಿವಾಟು ಅಭಿವೃದ್ಧಿಗೆ ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 9: ಜಾಗತಿಕ ಮಟ್ಟದಲ್ಲಿ ಕಡಲ ಭದ್ರತೆ ಹೆಚ್ಚಿಸುವುದು ಹಾಗೂ ಅಂತಾರಾಷ್ಟ್ರೀಯ ಸಹಕಾರ ನೀಡುವುದೇ ಪ್ರಮುಖ ಧ್ಯೇಯ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ.
"ಸಮುದ್ರವು ನಮ್ಮ ಪಾಲುದಾರಿಕೆ ಪರಂಪರೆಯಾಗಿದೆ. ಸಮುದ್ರ ಮಾರ್ಗಗಳು ಅಂತರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗಿದೆ. ನಮ್ಮ ಭವಿಷ್ಯ ದೃಷ್ಟಿಯಿಂದ ಸಮುದ್ರಗಳು ನಿರ್ಣಾಯಕ ಪಾತ್ರ ವಹಿಸಲಿವೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೇ ಸಮುದ್ರವು ಇಂದು ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಸಾಗರೋತ್ತರ ಮಾರ್ಗಗಳು ಇಂದು ಕಡಲುಗಳ್ಳತನ ಹಾಗೂ ಭಯೋತ್ಪಾದನೆಗಾಗಿ ದುರುಪಯೋಗವಾಗುತ್ತಿದೆ ಎಂದು ಪ್ರಧಾನಿ ಮೋದಿ ತಮ್ಮ ವಿಡಿಯೋ ಸಂವಾದದ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಆಗಸ್ಟ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಲಿರುವ ಭಾರತ
ಸಮುದ್ರ ತೀರವು ಹಲವು ರಾಷ್ಟ್ರಗಳ ನಡುವೆ ವಿವಾದಕ್ಕೆ ಕಾರಣವಾಗಿವೆ. ಹವಾಮಾನ ಬದಲಾವಣೆ ಸೇರಿದಂತೆ ಕಡಲ ಭಾಗದ ಹಲವು ವಿಷಯಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮಾತಿನಲ್ಲಿ ಉಲ್ಲೇಖಿಸಿದ್ದಾರೆ. ಕಡಲ ತೀರಗಳಿಗೆ ಸಂಬಂಧಿಸಿದಂತೆ ಸಹಕಾರ ಹೆಚ್ಚಿಸುವುದರ ಬಗ್ಗೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಐದು ಅಂಶಗಳ ಕಾರ್ಯಸೂಚಿಯನ್ನು ಹಾಕಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತು:
ಕೇವಲ ಒಂದು ರಾಷ್ಟ್ರದಿಂದ ವಿಶಿಷ್ಟ ಕಾರ್ಯ ಯೋಜನೆಯನ್ನು ಜಾರಿಗೊಳಿಸುವುದಕ್ಕೆ ಅಸಾಧ್ಯವಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಕಾರ್ಯ ಮಾಡಬೇಕಾಗುತ್ತಿದೆ. ಆದ್ದರಿಂದಲೇ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಅದನ್ನೇ ಪ್ರಮುಖ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಿದ ಮೋದಿ ತಮ್ಮ ಮಾತಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.
ಕಡಲ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ಮೋದಿ ಪಂಚಸೂತ್ರ:
1. ಕಡಲ ವ್ಯಾಪಾರಕ್ಕೆ ಅಡೆತಡೆಗಳನ್ನು ತೆಗೆಯುವುದು: ಜಾಗತಿಕ ಅಭಿವೃದ್ಧಿಯು ಸಮುದ್ರ ಮಾರ್ಗದಲ್ಲಿನ ನಿರಂತರ ವಹಿವಾಟು ಪ್ರಕ್ರಿಯಯನ್ನು ಅವಲಂಬಿಸಿರುತ್ತದೆ. ಕಡಲ ವ್ಯಾಪಾರದಲ್ಲಿ ಆಗುವ ಯಾವುದೇ ರೀತಿ ವ್ಯತ್ಯಾಸ ಆರ್ಥಿಕತೆಗೆ ಹೊಡೆತ ನೀಡುವ ಅಪಾಯವಿದೆ. ಸಾಗರೋತ್ತರ ವಹಿವಾಟು ಭಾರತೀಯರ ನಾಗರೀಕತ್ವದ ಮೂಲತತ್ವವಾಗಿದೆ. ಈ ತತ್ವ ಅಳವಡಿಸಿಕೊಳ್ಳುವ ಮೂಲಕ ಎಲ್ಲ ರಾಷ್ಟ್ರಗಳು ಸಾಗರೋತ್ತರ ವ್ಯಾಪಾರದ ಸಿದ್ದಾಂತವನ್ನು ಬೆಳೆಸಬೇಕಿದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
2. ಜಾಗತಿಕ ಮಟ್ಟದಲ್ಲಿ ಸಮುದ್ರ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸುವುದು: ಬಾಂಗ್ಲಾದೇಶದ ಜೊತೆಗಿನ ಭಾರತದ ಕಡಲ ವಿವಾದವನ್ನು ಬಗೆಹರಿಸಿದ ಉದಾಹರಣೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಮುಕ್ತ ಸಮುದ್ರ ವ್ಯಾಪಾರಕ್ಕೆ ಪರಸ್ಪರ ರಾಷ್ಟ್ರಗಳು ಸಮುದ್ರಯಾನದ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸುವುದು ಅಗತ್ಯವಾಗಿದೆ ಎಂದಿದ್ದಾರೆ.
3. ಪ್ರಾಕೃತಿಕ ವಿಕೋಪಗಳಿಂದ ಎದುರಾಗುವ ಬೆದರಿಕೆಗಳ ವಿರುದ್ಧ ಹೋರಾಡುವುದು: 2008 ರಿಂದ ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳತನವನ್ನು ಎದುರಿಸಲು ಭಾರತೀಯ ನೌಕಾಪಡೆಯು ಗಸ್ತು ತಿರುಗುತ್ತಿದೆ. "ನಮ್ಮ ವೈಟ್ ಶಿಪ್ಪಿಂಗ್ ಮಾಹಿತಿ ಸಮ್ಮಿಲನ ಕೇಂದ್ರದ ಮೂಲಕ ನಾವು ಈ ಪ್ರದೇಶದ ಸಾಮಾನ್ಯ ಕಡಲುಗಳಲ್ಲಿ ಜಾಗೃತಿ ಹೆಚ್ಚಿಸುತ್ತಿದ್ದೇವೆ. ಹೈಡ್ರೋಗ್ರಾಫಿಕ್ ಸಮೀಕ್ಷೆ ಮತ್ತು ಕಡಲ ಭದ್ರತಾ ಸಿಬ್ಬಂದಿಗೆ ಹಲವು ದೇಶಗಳಿಗೆ ತರಬೇತಿ ನೀಡಲು ನಾವು ಬೆಂಬಲ ಒದಗಿಸಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು.
4. ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ: "ನಮ್ಮ ಸಾಗರಗಳು ನಮ್ಮ ಹವಾಮಾನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಆದ್ದರಿಂದ, ನಮ್ಮ ಸಮುದ್ರ ಪರಿಸರವನ್ನು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ತೈಲ ಸೋರಿಕೆಯಂತಹ ಮಾಲಿನ್ಯಕಾರಕಗಳಿಂದ ಮುಕ್ತವಾಗಿಡುವುದು ಮುಖ್ಯವಾಗುತ್ತದೆ. ಅತಿಯಾದ ಮೀನುಗಾರಿಕೆ ಮತ್ತು ಸಮುದ್ರ ಬೇಟೆಯ ವಿರುದ್ಧ ನಾವು ಜಂಟಿ ಕ್ರಮ ಕೈಗೊಳ್ಳಬೇಕಾಗಿದೆ," ಎಂದು ಪ್ರಧಾನಿ ಮೋದಿ ಹೇಳಿದರು. ಸಾಗರ ವಿಜ್ಞಾನ ಸಂಶೋಧನೆಯಲ್ಲಿ ಪರಸ್ಪರ ಸಹಕಾರದ ಅಗತ್ಯವನ್ನು ಮೋದಿ ಒತ್ತಿ ಹೇಳಿದ್ದಾರೆ.
5. ಜವಾಬ್ದಾರಿಯುತ ಕಡಲ ಸಂಪರ್ಕಕ್ಕೆ ಉತ್ತೇಜನ: ಕಡಲ ವ್ಯಾಪಾರವನ್ನು ಹೆಚ್ಚಿಸಲು ಮೂಲಸೌಕರ್ಯಗಳ ಸೃಷ್ಟಿ ಅಗತ್ಯ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಆ ಬಳಿಕ ಆತಿಥೇಯ ರಾಷ್ಟ್ರಗಳ ಹಣಕಾಸಿನ ಸುಸ್ಥಿರತೆ ಸಾಮರ್ಥ್ಯದ ಪ್ರಕಾರ ಮೂಲಸೌಕರ್ಯ ಯೋಜನೆಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸೂಕ್ತವಾದ ಜಾಗತಿಕ ನಿಯಮ ಮತ್ತು ಮಾನದಂಡಗಳ ಬಗ್ಗೆ ಪ್ರಧಾನಿ ಮೋದಿ ಪ್ರತಿಪಾದಿಸಿದರು.