ಮೋದಿ - ಗಡ್ಕರಿ ಹಳಸಿದ ಸಂಬಂಧ? ಏನಿದು ಪರೋಕ್ಷ ಟಾಂಗ್!
ಕೇಂದ್ರ ಸರಕಾರದ ಪ್ರಭಾವೀ ಸಚಿವ ಮತ್ತು ಆರ್ಎಸ್ಎಸ್ ಶ್ರೀರಕ್ಷೆ ಹೊಂದಿರುವ ಭೂಹೆದ್ದಾರಿ, ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬಿಜೆಪಿ ಹೈಕಮಾಂಡ್ ಜೊತೆ ಮುನಿಸಿಕೊಂಡಿದ್ದಾರಾ? ಈ ರೀತಿಯ ಪ್ರಶ್ನೆ ಉದ್ಭವವಾಗುವುದು ಅವರ ಇತ್ತೀಚಿನ ಎರಡು ಹೇಳಿಕೆಗಳು.
ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಗಡ್ಕರಿ ರಾಜಕೀಯ ಸಂಬಂಧಗಳು ಸರಿಯಿಲ್ಲ ಎನ್ನುವ ರೀತಿಯಲ್ಲಿ ಹಲವು ಮಾಧ್ಯಮಗಳು ಈಗಾಗಲೇ ಬಿಂಬಿಸಿವೆ. ಇದಕ್ಕೆ ಪೂರಕ ಎನ್ನುವಂತೆ ಬಿಜೆಪಿಯ ಸಂಸದೀಯ ಮಂಡಳಿಯಲ್ಲಾದ ಬದಲಾವಣೆ.
ನಾಗಪುರ ಕ್ಷೇತ್ರದ ಸಂಸದ ಮತ್ತು ಬಿಜೆಪಿಯಲ್ಲಿ ಹೆವೀವೈಟ್ ಎಂದೇ ಕರೆಯಲ್ಪಡುವ ನಿತಿನ್ ಗಡ್ಕರಿ ಅವರನ್ನು ಇತ್ತೀಚೆಗೆ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿತ್ತು. ಮೂಲಗಳ ಪ್ರಕಾರ, ಗಡ್ಕರಿ ಅವರಿಗೆ ಮತ್ತೊಂದು ಮಹತ್ವದ ಹುದ್ದೆಯನ್ನು ನೀಡಲು ವರಿಷ್ಠರು ನಿರ್ಧರಿಸಿದ್ದಾರೆ.
ಆದರೆ, ಗಡ್ಕರಿ ಅವರು ಬುಧವಾರ (ಆ 31) ಕೃತಜ್ಞತೆ ಇರಬೇಕು ಎನ್ನುವ ಹೇಳಿಕೆಯನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಈ ಮಾತನ್ನು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೇ ಉಲ್ಲೇಖಿಸಿ ಗಡ್ಕರಿ ಹೇಳಿದ್ದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ
ಕಳೆದ ತಿಂಗಳು ಬಿಜೆಪಿ ವರಿಷ್ಠರು ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯಲ್ಲಿ ಬದಲಾವಣೆಯನ್ನು ತಂದಿದ್ದರು. ಯಡಿಯೂರಪ್ಪನವರು ಈ ಪಟ್ಟಿಯಲ್ಲಿ ಸೇರ್ಪಡೆಯಾದರೆ, ನಿತಿನ್ ಗಡ್ಕರಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಹೆಸರನ್ನು ಅಚ್ಚರಿಯ ರೀತಿಯಲ್ಲಿ ಪಟ್ಟಿಯಿಂದ ಕೈಬಿಡಲಾಗಿತ್ತು. ಇದು, ಮೋದಿ - ಅಮಿತ್ ಶಾ - ನಿತಿನ್ ಗಡ್ಕರಿ ನಡುವಿನ ಸಂಬಂಧ ಹಳಸಿದೆ ಎಂದು ವಿಶ್ಲೇಷಿಸಲಾಗಿತ್ತು. ಅದಕ್ಕೆ ಇಂಬು ನೀಡುವಂತೆ ಗಡ್ಕರಿಯವರ ಹೇಳಿಕೆ ಕೂಡಾ ಅದೇ ದಾಟಿಯಲ್ಲಿತ್ತು.

ಇದೇ ವೇಳೆ ಗಡ್ಕರಿ ಕಾಂಗ್ರೆಸ್ ಸೇರುತ್ತಾರಾ ಎನ್ನುವ ವಿಷಯ
ಇದೇ ವೇಳೆ ಗಡ್ಕರಿ ಕಾಂಗ್ರೆಸ್ ಸೇರುತ್ತಾರಾ ಎನ್ನುವ ವಿಷಯವು ಮುನ್ನಲೆಗೆ ಬರಲಾರಂಭಿಸಿತು. ಇದಕ್ಕೆ ಖಡಕ್ ಆಗಿ ಉತ್ತರ ನೀಡಿದ್ದ ಗಡ್ಕರಿ, "ಕಾಂಗ್ರೆಸ್ ಪಕ್ಷದ ಸಿದ್ಧಾಂತ ಸರಿಯಿಲ್ಲ.. ಹೀಗಾಗಿ ನಾನು ಹಾಳು ಬಾವಿಗೆ ಬೀಳುತ್ತೇನೆಯೇ ಹೊರತು ಆ ಪಕ್ಷವನ್ನು ಸೇರುವುದಿಲ್ಲ. ಇದೆಲ್ಲಾ ಕೆಲವೊಂದು ಮಾಧ್ಯಮಗಳ ಕಪೋಕಲ್ಪಿತ ಸುದ್ದಿ"ಎಂದು ಗಡ್ಕರಿ ಹೇಳಿದ್ದರು.

ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ
ಇದಾದ ನಂತರ, "ಇಂದು ಬಿಜೆಪಿ ಅಧಿಕಾರಕ್ಕೆ ಬರಲು ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಮತ್ತು ದೀನದಯಾಳ್ ಉಪಾಧ್ಯಾಯ ಅವರ ಪರಿಶ್ರಮವೇ ಕಾರಣ. ಮುಂದೊಂದು ದಿನ ಕತ್ತಲೆ ಮರೆಯಾಗಿ, ಸೂರ್ಯ ಕಾಣಿಸಲಿದ್ದಾನೆ ಮತ್ತು ಕಮಲ (ಬಿಜೆಪಿಯ ಚಿಹ್ನೆ) ಅರಳಲಿದೆ ಎನ್ನುವ ಮಾತನ್ನು ಅಟಲ್ ಜೀ ಹೇಳಿದ್ದರು. ಅವರ ಭಾಷಣಕ್ಕೆ ನಾನು ಸಾಕ್ಷಿಯಾಗಿದ್ದೆ" ಎಂದು ಗಡ್ಕರಿ ಹೇಳಿದ್ದರು. ಇದು, ಪರೋಕ್ಷವಾಗಿ ಮೋದಿ ಮತ್ತು ಅಮಿತ್ ಶಾ ಜೋಡಿಗೆ ಟಾಂಗ್ ಕೊಟ್ಟಿದ್ದು ಎಂದು ವ್ಯಾಖ್ಯಾನಿಸಲಾಗಿತ್ತು.

ಮೋದಿ - ಅಮಿತ್ ಶಾ ವಿರುದ್ದದ ಅಸಮಾಧಾನದ ಮಾತು
ಈಗ, ಒಂದು ದಿನದ ಹಿಂದೆ ಮಾತನಾಡುತ್ತಾ "ಕೆಲವೊಮ್ಮೆ ರಾಜಕೀಯದಿಂದ ದೂರವಿರಬೇಕೆಂದು ಮನಸ್ಸು ಹೇಳುತ್ತಿದೆ. ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೃತಜ್ಞತೆಯಿಂದ ಇರಬೇಕು, ಗೆಳೆಯನೊಬ್ಬನಿಂದ ಸಹಾಯ ಪಡೆದುಕೊಂಡು ಕೆಲಸ ಮುಗಿದ ನಂತರ ಅವನನ್ನು ದೂರ ಮಾಡುವುದಲ್ಲ. ಅದು ಗೆಳೆಯನಾಗಿರಲಿ ಇನ್ನೊಬ್ಬರೇ ಆಗಿರಲಿ"ಎಂದು ಗಡ್ಕರಿ ಹೇಳಿದ್ದರು. ಅವರ ಈ ಮಾತನ್ನೂ ಮೋದಿ - ಅಮಿತ್ ಶಾ ವಿರುದ್ದದ ಅಸಮಾಧಾನದ ಮಾತು ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications