ಕಾನೂನು ಸಚಿವರ ಜತೆ ಪ್ರಧಾನಿ ಮೋದಿ ತುರ್ತು ಸಭೆ
ನವದೆಹಲಿ, ಜನವರಿ 12: ಸುಪ್ರೀಂಕೋರ್ಟಿನ ನಾಲ್ವರು ನ್ಯಾಯಮೂರ್ತಿಗಳು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕರೆಸಿಕೊಂಡು ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸಿದ್ದಾರೆ.
ನಾಲ್ವರು ನ್ಯಾಯಮೂರ್ತಿಗಳು ಏಳು ಪುಟಗಳ ಪತ್ರವನ್ನು ಪ್ರಕಟಿಸಿದ್ದು, ಇದರಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ಜಡ್ಜ್ ಆಗಿದ್ದ ನ್ಯಾ. ಲೋಯಾ ಅವರ ಸಾವಿನ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಇದಲ್ಲದೆ, ಸುಪ್ರೀಂಕೋರ್ಟಿನಲ್ಲಿ ನೇಮಕಾತಿಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಪ್ರಭಾವ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಕಾನೂನು ಸಚಿವರ ಜತೆ ಪ್ರಧಾನಿ ಮೋದಿ ಅವರು ತುರ್ತು ಸಭೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ ಜಡ್ಜ್ ಗಳಾದ ಕುರಿಯನ್ ಜೋಸೆಫ್, ಜೆ ಚಲಮೇಶ್ವರ್, ರಂಜನ್ ಗೋಗಾಯಿ ಹಾಗೂ ಮದನ್ ಲೊಕುರ್ ಅವರು ಶುಕ್ರವಾರದಂದು ದೆಹಲಿಯ ತುಘಲಕ್ ಲೇನ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಆರೋಪ ಹೊರೆಸಿದ್ದಾರೆ.
ಸುಪ್ರೀಂಕೋರ್ಟಿನ ಘನತೆ ಉಳಿಸಲು ನಾಲ್ವರು ಜಡ್ಜ್, ಸಿಜೆಐ ಜತೆ ಮಾತನಾಡಿ ಒಮ್ಮತ ಮೂಡಿಸುವ ಅಗತ್ಯವಿದೆ ಎಂದು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications