ಕೆಸಿಆರ್ ಎನ್ಡಿಎ ಸೇರಲು ಬಯಸಿದ್ದರು: ತೆಲಂಗಾಣದಲ್ಲಿ ಹೊಸ ಬಾಂಬ್ ಸಿಡಿಸಿದ ಪ್ರಧಾನಿ ನರೇಂದ್ರ ಮೋದಿ
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು 2020 ರಲ್ಲಿ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ನಂತರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸೇರಲು ಬಯಸಿದ್ದರು ಆದರೂ, ಕೆಸಿಆರ್ ಅವರನ್ನು ಎನ್ಡಿಎಗೆ ಸೇರಿಸಿಕೊಳ್ಳಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ತೆಲಂಗಾಣದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ''ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಾಗ, ಕೆಸಿಆರ್ ಅವರಿಗೆ ಬೆಂಬಲ ಬೇಕಿತ್ತು, ಈ ಚುನಾವಣೆಯ ಮೊದಲು ಅವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿದ್ದರು, ಆದರೆ ನಂತರ ಅವರು ಅದನ್ನು ನಿಲ್ಲಿಸಿದರು." ಎಂದು ಹೇಳಿದರು.

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ನಂತರ, ಕೆಸಿಆರ್ ನನ್ನನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರು, ಭೇಟಿಯ ಸಂದರ್ಭದಲ್ಲಿ ಎನ್ಡಿಎ ಸೇರಲು ಆಸಕ್ತಿ ಹೊಂದಿರುವುದಾಗಿ ಹೇಳಿದರು. ನನಗೆ ಬೆಂಬಲ ನೀಡುವಂತೆ ಮನವಿ ಮಾಡಿದರೆ, ಆದರೆ ನಿಮ್ಮ ಕೆಲಸಗಳನ್ನು ನೋಡಿದಾಗ ನಿಮ್ಮ ಜೊತೆ ಸೇರಲು ಸಾಧ್ಯವಿಲ್ಲ ಎಂದು ನಾವು ಅವರಿಗೆ ಹೇಳಿದೆ ಎಂದು ಮೋದಿ ಹೇಳಿದ್ದಾರೆ.
2020 ರಲ್ಲಿ ನಡೆದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಚುನಾವಣೆಯಲ್ಲಿ, ಕೆಸಿಆರ್ ಅವರ ಭಾರತ್ ರಾಷ್ಟ್ರ ಸಮಿತಿ (BRS) ಬಹುಮತಕ್ಕಿಂತ 21 ಕಡಿಮೆ ಸೀಟುಗಳಲ್ಲಿ ಗೆಲುವು ಸಾಧಿಸಿತ್ತು, 150 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಈ ಸಂಧರ್ಭದಲ್ಲಿ ಅಧಿಕಾರ ಪಡೆಯಲು ಕೆಸಿಆರ್ ಬಿಜೆಪಿ ಸಾಂಗತ್ಯ ಬಯಸಿದ್ದರು ಎಂದು ಮೋದಿ ಹೇಳಿದ್ದಾರೆ.
ಇದು ಸುಳ್ಳು ಎಂದ ಬಿಆರ್ಎಸ್ ನಾಯಕ
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ತಿರಸ್ಕರಿಸಿದೆ. ಬಿಆರ್ಎಸ್ ನಾಯಕ ಖಲೀಕುರ್ ರೆಹಮಾನ್ ಪ್ರತಿಕ್ರಿಯೆ ನೀಡಿ ಇದೊಂದು ಸುಳ್ಳು ಹೇಳಿಕೆ ಎಂದು ಕರೆದಿದ್ದಾರೆ.
ಬಿಆರ್ಎಸ್ ವಕ್ತಾರ ಎಂ ಕ್ರಿಶಾಂಕ್ ಮಾತನಾಡಿ, ಪ್ರಧಾನ ಮಂತ್ರಿಗಳು ರಾಜಕೀಯ ಲಾಭಕ್ಕಾಗಿ ಸುಳ್ಳಿನೊಂದಿಗೆ ಈ ರೀತಿ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಹರಿಹಾಯ್ದರು.
"ಮುಂದಿನ ಬಾರಿ ಮುಖ್ಯಮಂತ್ರಿಯೊಬ್ಬರು ಪ್ರಧಾನಿಯನ್ನು ಭೇಟಿ ಮಾಡಿದಾಗ ಅವರು ಕ್ಯಾಮೆರಾ ಜೊತೆಗೆ ಹೋಗಬೇಕಾಗುತ್ತದೆ, ಏಕೆಂದರೆ ನರೇಂದ್ರ ಮೋದಿ ರಾಜಕೀಯ ಲಾಭಕ್ಕಾಗಿ ಸುಳ್ಳಿನ ಮೂಲಕ ಯಾವುದೇ ಕೀಳು ಮಟ್ಟಕ್ಕೆ ಇಳಿಯಬಹುದು" ಎಂದು ಬಿಆರ್ಎಸ್ ನಾಯಕ ಹೇಳಿದರು.
ಪ್ರಧಾನಿ ಮೋದಿ ಅವರ ಹೇಳಿಕೆ ಸದ್ಯ ಭಾರಿ ಸಂಚಲನ ಮೂಡಿಸಿದೆ. ಲೋಕಸಭಾ ಚುನಾವಣೆಗಾಗಿ ಎನ್ಡಿಎ ವಿರುದ್ಧ ಸೆಡ್ಡು ಹೊಡೆಯಲು ಕೆಸಿಆರ್ ದೇಶಾದ್ಯಂತ ಪ್ರವಾಸ ಮಾಡಿ, ವಿಪಕ್ಷ ನಾಯಕರನ್ನು ಭೇಟಿ ಮಾಡಿದ್ದರು. ಈಗ ವಿಕ್ಷಗಳ ಇಂಡಿಯಾ ಒಕ್ಕೂಟದಿಂದ ಅಂತರ ಕಾಯ್ದುಕೊಂಡು, ತೆಲಂಗಾಣ ವಿಧಾನಸಭೆ ಚುನಾವಣೆಯತ್ತ ಗಮನ ಹರಿಸಿದ್ದಾರೆ.
ನರೇಂದ್ರ ಮೋದಿ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದ ಕೆಸಿಆರ್, ಮೋದಿ ಭಾಗವಹಿಸಿದ್ದ ಹಲವು ಸಾರ್ವಜನಿಕ ಕಾರ್ಯಕ್ರಮಗಳನ್ನು ಕೂಡ ತಪ್ಪಿಸಿಕೊಂಡಿದ್ದರು.












Click it and Unblock the Notifications