ಕೊರೊನಾ ನಿಯಂತ್ರಣ; ಸಣ್ಣ ಎಚ್ಚರಿಕೆ ರವಾನಿಸಿದ ಪ್ರಧಾನಿ ಮೋದಿ
ನವದೆಹಲಿ, ಮೇ 20: ದೇಶದಲ್ಲಿ ಕೊರೊನಾ ಸೋಂಕು ಕಳೆದ ಎರಡು ಮೂರು ದಿನಗಳಿಂದ ಕೊಂಚ ಇಳಿಕೆ ಕಂಡಿದೆ. ಆದರೂ ಕೆಲವು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರದೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ಸೋಂಕು ಹೆಚ್ಚು ದಾಖಲಾಗುತ್ತಿರುವ ಹತ್ತು ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದು, ಕೊರೊನಾ ನಿಯಂತ್ರಣ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ಸಂದರ್ಭ ಮೋದಿ ಮುಂದೆ ಎದುರಾಗಬಹುದಾದ ಅಪಾಯದ ಸಾಧ್ಯತೆಗಳ ಕುರಿತು ಸಣ್ಣ ಎಚ್ಚರಿಕೆಯನ್ನೂ ನೀಡಿದ್ದಾರೆ. ಮುಂದೆ ಓದಿ...

"ಹೊಸ ಸವಾಲಿಗೆ ಹೊಸ ಕಾರ್ಯತಂತ್ರ, ಪರಿಹಾರ"
ದೇಶದಲ್ಲಿ ಕೊರೊನಾ ಸೋಂಕು ಕೊಂಚ ತಗ್ಗುತ್ತಿದೆ ಎಂದು ನಿಟ್ಟುಸಿರುಬಿಡುವಂತಿಲ್ಲ. ಈ ಕೊರೊನಾ ಸೋಂಕು ಮುಂದೆ ಹಲವು ರೂಪಾಂತರಗಳನ್ನು ಸೃಷ್ಟಿಸಬಹುದು. ಹೀಗಾಗಿ ಈ ರೂಪಾಂತರಗಳ ವಿರುದ್ಧದ ಹೋರಾಟ ಮಾಡುವುದನ್ನೂ ಕಲಿಯಬೇಕಿದೆ. ನಮ್ಮ ಕಾರ್ಯತಂತ್ರಗಳನ್ನೂ ನಾವು ಬದಲಾಯಿಸಬೇಕಾಗಬಹುದು. ಈ ಹೊಸ ಸವಾಲುಗಳ ನಡುವೆ ಹೊಸ ಕಾರ್ಯತಂತ್ರ, ಪರಿಹಾರ ಮಾರ್ಗಗಳನ್ನು ನಾವು ಕಂಡುಕೊಳ್ಳಲೇಬೇಕಾಗುತ್ತದೆ ಎಂದಿದ್ದಾರೆ.

"ಸವಾಲು ಎಂದಿಗೂ ಇದ್ದೇ ಇದೆ"
ಕೊರೊನಾ ನಿಯಂತ್ರಣ ವಿಷಯದಲ್ಲಿ ನಾವು ಸ್ಥಳೀಯ ಅನುಭವಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಈ ಅನುಭವಗಳೊಂದಿಗೆ ಒಂದೇ ದೇಶವಾಗಿ ನಾವು ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಕೊರೊನಾ ಸೋಂಕು ಭಾರತದಲ್ಲಿ ಕಾಣಿಸಿಕೊಂಡ ಈ ಒಂದೂವರೆ ವರ್ಷದಲ್ಲಿ ಸಾಕಷ್ಟು ಅನುಭವಗಳಾಗಿವೆ. ಅದರ ವಿರುದ್ಧ ಹೋರಾಡಬೇಕಾದ ಅನಿವಾರ್ಯದ ಕುರಿತೂ ಮನದಟ್ಟಾಗಿದೆ. ಸಣ್ಣ ಮಟ್ಟದಲ್ಲಿದ್ದರೂ ಕೊರೊನಾ ನಿರ್ಲಕ್ಷಿಸುವಂತಿಲ್ಲ. ಸವಾಲು ಎಂದಿಗೂ ಇದ್ದೇ ಇದೆ ಎಂದು ಹೇಳಿದ್ದಾರೆ.

"ಪ್ರತಿ ಲಸಿಕೆಯೂ ಜೀವಹನಿ"
ದೇಶದಲ್ಲಿ ಕೊರೊನಾ ಲಸಿಕೆ ಕುರಿತು ಮಾತನಾಡಿದ ಅವರು, ಕೊರೊನಾ ಲಸಿಕೆಯ ಪ್ರತಿ ಡೋಸ್ ಕೂಡ ಜೀವಹನಿಯಾಗಿದೆ. ಹೀಗಿದ್ದಾಗ ಲಸಿಕೆ ವ್ಯರ್ಥವಾಗಲು ನಾವು ಬಿಡಬಾಡದು. ಲಸಿಕೆ ವ್ಯರ್ಥವಾಗದಂತೆ ತಡೆಯುವುದು ಅತಿ ಮುಖ್ಯ ಕೆಲಸವಾಗಿದೆ ಎಂದಿದ್ದಾರೆ.

ಕಾಶಿ ಮಾದರಿ ಶ್ಲಾಘಿಸಿದ ಮೋದಿ
ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಉತ್ತರ ಪ್ರದೇಶ ಸರ್ಕಾರ ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಕೈಗೊಂಡ ಕ್ರಮಗಳನ್ನು ಮೋದಿ ಶ್ಲಾಘಿಸಿದ್ದಾರೆ. ವಾರಾಣಸಿಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿಲ್ಲ. ಬದಲಾಗಿ ಕಂಟೈನ್ಮೆಂಟ್ ಝೋನ್ಗಳನ್ನು ಗುರುತಿಸಲಾಗಿದೆ. ಇದರಿಂದಾಗಿ ಸಕರಾತ್ಮಕತೆಯೊಂದಿಗೆ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ದೇಶದಲ್ಲಿ ಎರಡನೇ ಕೊರೊನಾ ಅಲೆ ಕಾಣಿಸಿಕೊಂಡ ಬಳಿಕ ಏಪ್ರಿಲ್ನಿಂದ ಕಾಶಿಯಲ್ಲಿ ಅಧಿಕಾರಿ ಎ ಕೆ ಶರ್ಮಾ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಕ್ಯಾಂಪೇನ್ಗಳು ನಡೆಸುತ್ತಿದ್ದಾರೆ. ಹಾಗೆಯೇ ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದಾರೆ ಎಂದರು.












Click it and Unblock the Notifications