NCERT Textbook Row: 10ನೇ ತರಗತಿ ಪುಸ್ತಕದಿಂದ ಆವರ್ತಕ ಕೋಷ್ಟಕ, ಪ್ರಜಾಪ್ರಭುತ್ವ, ಶಕ್ತಿಯ ಮೂಲಗಳು ಚಾಪ್ಟರ್ ಔಟ್
ನವದೆಹಲಿ, ಜೂನ್ 01: ಆವರ್ತಕ ಕೋಷ್ಟಕ, ಪ್ರಜಾಪ್ರಭುತ್ವ ಮತ್ತು ಶಕ್ತಿಯ ಮೂಲಗಳಿಗೆ ಸಂಬಂಧಿಸಿದ ಪಾಠಗಳನ್ನು ಎನ್ಸಿಇಆರ್ಟಿ 10 ನೇ ತರಗತಿಯ ಪಠ್ಯದಿಂದ ತೆಗೆದುಹಾಕಲಾಗಿದೆ. ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಈ ಅಧ್ಯಾಯಗಳನ್ನು ಪಠ್ಯದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.
10 ನೇ ತರಗತಿಯ ಪಠ್ಯಕ್ರಮದಿಂದ ಡಾರ್ವಿನ್ ಅವರ ಜೀವ ವಿಕಾಸದ ಸಿದ್ಧಾಂತವನ್ನು ತೆಗೆದುಹಾಕಲಾಗಿತ್ತು. ಈ ವರ್ಷದ ಆರಂಭದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್ಸಿಇಆರ್ಟಿ) ಹೊಸದಾಗಿ ಬಿಡುಗಡೆ ಮಾಡಿರುವ ಪಠ್ಯಪುಸ್ತಕಗಳು ಆವರ್ತಕ ಕೋಷ್ಟಕದ ಅಧ್ಯಾಯ ಸೇರಿದಂತೆ ಮತ್ತಷ್ಟು ಕಡಿತಗಳನ್ನು ಬಹಿರಂಗಪಡಿಸಿವೆ.

ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಡಲಾದ ವಿಷಯಗಳಲ್ಲಿ ಪರಿಸರ ಸುಸ್ಥಿರತೆ ಮತ್ತು ಶಕ್ತಿಯ ಮೂಲಗಳ ಅಧ್ಯಾಯಗಳೂ ಸೇರಿವೆ. ಇತ್ತೀಚಿನ ಪರಿಷ್ಕರಣೆಯ ನಂತರ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮತ್ತು ರಾಜಕೀಯ ಪಕ್ಷಗಳಿಗೆ ಸವಾಲುಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಕೈಬಿಡಲಾಗಿದೆ.
ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡುವುದು ಅನಿವಾರ್ಯವಾಗಿದೆ ಎಂದು ಎನ್ಸಿಇಆರ್ಟಿ ಹೇಳಿಕೊಂಡಿದೆ. ಕಷ್ಟಕರ ವಾಗುವ, ಹೊರೆಯಾಗುವ ಮತ್ತು ಪ್ರಸ್ತುತ ಸಂದರ್ಭದಲ್ಲಿ ಅಪ್ರಸ್ತುತವಾದ ವಿಷಯಗಳನ್ನು ಪಠ್ಯಕ್ರಮದಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ವಿದ್ಯಾರ್ಥಿಗಳು ಈ ವಿಷಯಗಳ ಬಗ್ಗೆ ಇನ್ನೂ ಕಲಿಯಬಹುದು, ಆದರೆ ಅವರು 11 ಮತ್ತು 12 ನೇ ತರಗತಿಯಲ್ಲಿ ಸಂಬಂಧಿತ ವಿಷಯವನ್ನು ತೆಗೆದುಕೊಂಡರೆ ಮಾತ್ರ ಇವುಗಳನ್ನು ವ್ಯಾಸಂಗ ಮಾಡಬಹುದು. ಭಾರತದಲ್ಲಿ, 10 ನೇ ತರಗತಿಯು ವಿಜ್ಞಾನವನ್ನು ಕಡ್ಡಾಯ ವಿಷಯವಾಗಿ ಕಲಿಸುವ ಕೊನೆಯ ವರ್ಷವಾಗಿದೆ. ಶಿಕ್ಷಣದ ಕೊನೆಯ ಎರಡು ವರ್ಷಗಳಲ್ಲಿ (ವಿಶ್ವವಿದ್ಯಾಲಯದ ಮೊದಲು) ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಲು ಆಯ್ಕೆ ಮಾಡುವ ವಿದ್ಯಾರ್ಥಿಗಳು ಮಾತ್ರ ಆವರ್ತಕ ಕೋಷ್ಟಕದ ಬಗ್ಗೆ ಕಲಿಯುತ್ತಾರೆ.

ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನ-ಶಿಕ್ಷಣ ಸಂಶೋಧಕ ಜೊನಾಥನ್ ಓಸ್ಬೋರ್ನ್ ಪ್ರಕಾರ ಆಷ್ಟಕವು ರಸಾಯನಶಾಸ್ತ್ರಜ್ಞರ ಶ್ರೇಷ್ಠ ಬೌದ್ಧಿಕ ಸಾಧನೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ ಇದು ಜೀವನದ ಬಿಲ್ಡಿಂಗ್ ಬ್ಲಾಕ್ಗಳು ಹೇಗೆ ವಿವಿಧ ಗುಣಲಕ್ಷಣಗಳೊಂದಿಗೆ ವಸ್ತುಗಳನ್ನು ಉತ್ಪಾದಿಸಲು ಸಂಯೋಜಿಸುತ್ತದೆ ಎಂಬುದನ್ನು ವಿವರಿಸುತ್ತದೆ.
ಈ ವರ್ಷದ ಆರಂಭದಲ್ಲಿ, ಎನ್ಸಿಇಆರ್ಟಿ 10 ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದಿಂದ ವಿಕಾಸದ ಸಿದ್ಧಾಂತವನ್ನು ಕೈಬಿಟ್ಟಿದ್ದಕ್ಕಾಗಿ ಟೀಕೆಗೆ ಗುರಿಯಾಗಿತ್ತು. 1,800 ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಶಿಕ್ಷಣತಜ್ಞರು ಕಳವಳ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿದ್ದಾರೆ.
ಕೋವಿಡ್ 19 ಕಾರಣದಿಂದಾಗಿ, ಮಗುವಿನ ಮೇಲಿನ ಅಧ್ಯಯನದ ಹೊರೆ ಕಡಿಮೆ ಮಾಡಲು ಕೋರ್ಸ್ಗಳ ತರ್ಕಬದ್ಧಗೊಳಿಸುವಿಕೆ ನಡೆಯುತ್ತಿದೆ. ಮಗುವು ಅಧ್ಯಯನ ಮಾಡಲು ಬಯಸಿದರೆ, ಡಾರ್ವಿನ್ ಸಿದ್ಧಾಂತವು ಎಲ್ಲಾ ವೆಬ್ಸೈಟ್ಗಳಲ್ಲಿ ಲಭ್ಯವಿದೆ. 12 ನೇ ತರಗತಿಯಲ್ಲಿ, ಈಗಾಗಲೇ ಡಾರ್ವಿನ್ ಸಿದ್ಧಾಂತವಿದೆ. ಇಂತಹ ಸುಳ್ಳು ಪ್ರಚಾರ ಮಾಡಬಾರದು ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳಿದ್ದಾರೆ.












Click it and Unblock the Notifications