ಕೊರೊನಾ ಮೂರನೇ ಅಲೆ; ಜನರಿಗೆ ಎಚ್ಚರಿಕೆ ಕೊಟ್ಟ ಕೇಂದ್ರ
ನವದೆಹಲಿ, ಜುಲೈ 13: ದೇಶದಲ್ಲಿ ಕೆಲವು ದಿನಗಳಿಂದೀಚೆ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಗೋಚರಿಸುತ್ತಿದೆ. ಆದರೆ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಈಗಾಗಲೇ ಕೊರೊನಾ ಮೂರನೇ ಅಲೆಗೆ ಸಾಕ್ಷಿಯಾಗುತ್ತಿವೆ. ಭಾರತದಲ್ಲಿ ಮೂರನೇ ಅಲೆ ತಡೆಯುವ ಪ್ರಯತ್ನ ಮಾಡಲೇಬೇಕಿದೆ. ಈ ನಡುವೆ ಜನರ ನಡವಳಿಕೆ ಭೀತಿ ಮೂಡಿಸುತ್ತಿದೆ ಎಂದು ಮಂಗಳವಾರ ಕೇಂದ್ರ ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, "ಕೊರೊನಾ ಮೂರನೇ ಅಲೆ ಎಚ್ಚರಿಕೆಯನ್ನು ಜನರು ಲಘುವಾಗಿ ತೆಗೆದುಕೊಂಡಿದ್ದಾರೆ. ಹೊರಗೆ ಸುಖಾಸುಮ್ಮನೆ ತಿರುಗಾಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮರೆಯುತ್ತಿದ್ದಾರೆ" ಎಂದು ಹೇಳಿದ್ದಾರೆ. ಇದೇ ಸಂದರ್ಭ ಜನರಿಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಮುಂದೆ ಓದಿ...

"ನಮ್ಮ ಶ್ರಮವೆಲ್ಲವೂ ವ್ಯರ್ಥವಾಗಬಹುದು"
"ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಯುತ್ತಿದ್ದಂತೆ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಆದರೆ ಮಾರುಕಟ್ಟೆಗಳಲ್ಲಿ ಜನಜಂಗುಳಿ ಮುಂಚಿನಂತಾಗಿದೆ. ಪ್ರವಾಸಿ ತಾಣಗಳಿಗೆ ಜನರು ನುಗ್ಗುತ್ತಿದ್ದಾರೆ. ಅಲ್ಲಿಯೂ ಕೊರೊನಾ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ಕಂಡುಬರುತ್ತಿದೆ" ಎಂದು ಉಲ್ಲೇಖಿಸಿರುವ ಅಗರ್ವಾಲ್, "ಜನರ ಈ ನಡವಳಿಕೆಯಿಂದ, ಕೊರೊನಾ ನಿಯಂತ್ರಣಕ್ಕೆ ಮಾಡಿದ ಶ್ರಮವೆಲ್ಲವೂ ವ್ಯರ್ಥವಾಗಬಹುದಾಗಿದೆ" ಎಂದು ಹೇಳಿದ್ದಾರೆ.

"ಎಚ್ಚರಿಕೆಯನ್ನು ಹವಾಮಾನ ವರದಿಯಂತೆ ಪರಿಗಣಿಸುತ್ತಿದ್ದಾರೆ"
"ಕೊರೊನಾ ಮೂರನೇ ಅಲೆ ಕುರಿತ ನಮ್ಮ ಎಚ್ಚರಿಕೆಯನ್ನು ಜನರು ಹವಾಮಾನ ವರದಿಯಂತೆ ಪರಿಗಣಿಸುತ್ತಿದ್ದಾರೆ. ಮೂರನೇ ಅಲೆ ಗಂಭೀರತೆಯನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ" ಎಂದು ಹೇಳಿದ್ದಾರೆ. ಜನರು ಕೊರೊನಾ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದೇಶದ ಕೊರೊನಾ ಪ್ರಕರಣಗಳಲ್ಲಿ 73.4% ಪಾಲು ಈ ರಾಜ್ಯಗಳದ್ದು
ರಾಜ್ಯಗಳಲ್ಲಿನ ಕೊರೊನಾ ಸ್ಥಿತಿಗತಿ ಕುರಿತು ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದ ಅವರು, "ದೇಶದಲ್ಲಿ ಇದುವರೆಗೂ ದಾಖಲಾದ ಕೊರೊನಾ ಪ್ರಕರಣಗಳ ಪೈಕಿ 73.4% ಪ್ರಕರಣಗಳು ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಒಡಿಶಾ ರಾಜ್ಯಗಳದ್ದಾಗಿವೆ. ದೇಶದಲ್ಲಿ 55 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರವು 10%ಗೂ ಅಧಿಕವಿದೆ. ಇಲ್ಲಿ ಕೊರೊನಾ ನಿಯಂತ್ರಣ ಸವಾಲಾಗಿದೆ" ಎಂದು ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಆತಂಕ
ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಸೋಂಕು ಇನ್ನೂ ತಗ್ಗಿಲ್ಲದಿರುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಚಿಂತೆಯಾಗಿದೆ. ಅಸ್ಸಾಂ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ ಸೇರಿದಂತೆ ಕೊರೊನಾ ಪ್ರಕರಣಗಳು ಹೆಚ್ಚಿರುವ ಹತ್ತು ರಾಜ್ಯಗಳಿಗೆ ಕೇಂದ್ರ ತಂಡ ಭೇಟಿ ನೀಡಿದ್ದು, ಕೊರೊನಾ ಪರಿಸ್ಥಿತಿ ನಿರ್ವಹಣೆ ಕುರಿತು ಸಲಹೆ ನೀಡುತ್ತಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿ ಅವರೂ, ಸೋಂಕಿನ ಪ್ರಮಾಣ ಹೆಚ್ಚಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿ, ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications