ಎಸ್ಪಿ ಸಲ್ವಿಂದರ್ ಸಿಂಗ್ಗೆ ಸುಳ್ಳುಪತ್ತೆ ಪರೀಕ್ಷೆ?
ಬೆಂಗಳೂರು, ಜನವರಿ 16 : ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್ಗೆ ಸುಳ್ಳುಪತ್ತೆ ಪರೀಕ್ಷೆ ನಡೆಸಲು ರಾಷ್ಟ್ರೀಯ ತನಿಖಾ ದಳ ನಿರ್ಧರಿಸಿದೆ. ಉಗ್ರರ ಅಪಹರಣದ ಬಗ್ಗೆ ಸಿಂಗ್ ನೀಡುತ್ತಿರುವ ಹೇಳಿಕೆಗಳು ಎನ್ಐಎಗೆ ತೃಪ್ತಿ ತಂದಿಲ್ಲ. ಹೇಳಿಕೆಗಳಲ್ಲಿ ಗೊಂದಲಗಳು ಮುಂದುವರೆದಿರುವ ಹಿನ್ನಲೆಯಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿದ ನಾಲ್ವರು ಉಗ್ರರ ತಂಡ ಸಲ್ವಿಂದರ್ ಸಿಂಗ್ ಮತ್ತು ಇತರ ಮೂವರನ್ನು ಅಪಹರಣ ಮಾಡಿತ್ತು. ಈ ಬಗ್ಗೆ ಎನ್ಐಎ ಎರಡು ಬಾರಿ ಸಿಂಗ್ ವಿಚಾರಣೆ ನಡೆಸಿದೆ. ಆದರೆ, ಅವರು ನೀಡಿರುವ ಹೇಳಿಕೆಗಳಲ್ಲಿ ಗೊಂದಲಗಳಿವೆ. [ಸಲ್ವಿಂದರ್ ಸಿಂಗ್ ಉತ್ತರಿಸಬೇಕಾದ ಮೂರು ಪ್ರಶ್ನೆಗಳು]

ವಿಚಾರಣೆ ವೇಳೆ ಭಾರತ-ಪಾಕ್ ಗಡಿಯಲ್ಲಿರುವ ದೇವಾಲಯಕ್ಕೆ ಹೋಗಿದ್ದೆ ಎಂದು ಸಿಂಗ್ ಹೇಳಿದ್ದಾರೆ. ಡಿಸೆಂಬರ್ 31ರಂದು ಮುಂಜಾನೆ ಸಿಂಗ್ ದೇವಾಲಯಕ್ಕೆ ಹೋಗಿದ್ದರು, ರಾತ್ರಿ ಪುನಃ ಹೋಗಿದ್ದೇಕೆ? ಎಂಬುದಕ್ಕೆ ಎನ್ಐಎಗೆ ಉತ್ತರ ಬೇಕಾಗಿದೆ. [ಸಿಂಗ್, ಗೋಪಾಲ್, ವರ್ಮಾ ಮುಖಾಮುಖಿ ವಿಚಾರಣೆ]
ದೇವಾಲಯದ ಆಡಳಿತ ಮಂಡಳಿಯವರನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಪಠಾಣ್ ಕೋಟ್ ವಾಯುನೆಲೆಗೆ ಉಗ್ರರು ಗಡಿ ನುಸುಳಿ ಆಗಮಿಸಿದ ಸ್ಥಳದಿಂದ ಕೆಲವೇ ಅಂತರದ ದೂರದಲ್ಲಿ ದೇವಾಲಯವಿದೆ. ಈ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ನಡೆದಿರಬಹುದು ಎಂದು ಎನ್ಐಎ ಶಂಕಿಸಿದೆ.
ಕಳ್ಳ ಸಾಗಣೆ ನಂಟು : ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿರುವ ಉಗ್ರರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂಬ ಆರೋಪವಿದೆ. ಅದರಲ್ಲೂ ಪಂಜಾಜ್ ಪೊಲೀಸ್ನ ಕೆಲವು ಅಧಿಕಾರಿಗಳು ಕಳ್ಳಸಾಗಣೆ ದಾರರ ಜೊತೆ ಕೈ ಜೋಡಿಸಿದ್ದಾರೆ ಎಂಬ ಸುದ್ದಿ ಇದೆ. ಆದ್ದರಿಂದ ಎನ್ಐಎ ಅವರ ವಿಚಾರಣೆಯನ್ನೂ ನಡೆಸಲಿದೆ.












Click it and Unblock the Notifications