ಇಂದು ಮೋದಿ, ಮುಂದೆ ಇನ್ನೊಬ್ಬರು: ಇದೇನಿದು ಅರುಣ್ ಜೇಟ್ಲಿ ಹೇಳಿಕೆ!
ಬಿಜೆಪಿ ಕಾರ್ಯಕರ್ತರನ್ನು ನಂಬಿ ಬೆಳೆದಿರುವ ಪಕ್ಷ, ಇಂದು ಮೋದಿ, ಮುಂದೆ ಇನ್ನೊಬ್ಬರು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.
ನವದೆಹಲಿ, ಮಾ 11: ಉತ್ತರಪ್ರದೇಶ ಮತ್ತು ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಸಾಧನೆಯ ಹಿಂದಿನ ಪ್ರಮುಖ ಕಾರಣಕರ್ತರಾರು ಎನ್ನುವ ಪ್ರಶ್ನೆಗೆ ಒಕ್ಕೂರಿಲಿನಿಂದ ಬರುವ ಹೆಸರೆಂದರೆ ಅದು ಪ್ರಧಾನಿ ಮೋದಿ.. ಮೋದಿ.. ಮೋದಿ..
ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಜಯಭೇರಿಯ ಹಿಂದೆ ಕಾರ್ಯಕರ್ತರ ಮತ್ತು ಪಕ್ಷದ ಇತರ ಮುಖಂಡರ ಪರಿಶ್ರಮ ಸಾಕಷ್ಟಿದ್ದರೂ, ಕೊನೆಗೆ ಅದು ಮತವಾಗಿ ವರ್ಕೌಟ್ ಆಗಿದ್ದು ಮೋದಿ ಎನ್ನುವ ಹೆಸರಿನಿಂದ. (ಎಂಟೆದೆಯ ಭಂಟನಾಗಿ ಹೊರಹೊಮ್ಮಿದ ಮೋದಿ)
ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿ ಸಿಂಗಲ್ ಹ್ಯಾಂಡ್ ಆಗಿ ಬಿಜೆಪಿಯನ್ನು ದಡ ಸೇರಿಸಿದರು ಎಂದು ಇಡೀ ದೇಶ ಮತ್ತು ವಿರೋಧ ಪಕ್ಷದವರೇ ಒಪ್ಪಿಕೊಳ್ಳುತ್ತಿದ್ದರೆ, ತಮ್ಮದೇ ಪಕ್ಷದ ಪ್ರಮುಖ ಮುಖಂಡರೊಬ್ಬರು ' ಬಿಜೆಪಿ ಕಾರ್ಯಕರ್ತರನ್ನು ನಂಬಿ ಬೆಳೆದಿರುವ ಪಕ್ಷ' ಎಂದು ಹೇಳಿದ್ದಾರೆ.

ಬಿಜೆಪಿಯ ಅತ್ಯುತ್ತಮ ಸಾಧನೆಯ ಬಗ್ಗೆ ಪ್ರತಿಕ್ರಿಯಿಸುತ್ತಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ಕಾರ್ಯಕರ್ತರನ್ನು ನಂಬಿದ ಪಕ್ಷ, ಕಾಂಗ್ರೆಸ್ ರೀತಿಯಲ್ಲಿ ಕುಟುಂಬ ಸದಸ್ಯರನ್ನು ನಂಬಿ ಬೆಳೆದ ಪಕ್ಷವಲ್ಲ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿರುವ ಜೇಟ್ಲಿ, ಪ್ರಧಾನಿ ಮೋದಿ, ಬಿಜೆಪಿ ಪಕ್ಷದ ಬಹುದೊಡ್ಡ ಆಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪಕ್ಷ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಎನ್ನುವ ನಾಯಕನನ್ನು ಹೊಂದಿತ್ತು, ಈಗ ನರೇಂದ್ರ ಮೋದಿ, ಮುಂದೆ ಇನ್ನೊಬ್ಬರು ಬರಲಿದ್ದಾರೆಂದು ಅರುಣ್ ಜೇಟ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡ ಜೇಟ್ಲಿ ಹೇಳಿಕೆ, ಮೋದಿ ಮತ್ತು ಜೇಟ್ಲಿ ನಡುವಿನ ಸಂಬಂಧ ಸರಿಯಿಲ್ಲವೇ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.












Click it and Unblock the Notifications