ಸಂಸತ್ ವಿಶೇಷ ಅಧಿವೇಶನ : ಪ್ರಶ್ನೋತ್ತರ ಅವಧಿಯಿಲ್ಲದೇ ಅಧಿವೇಶನ ನಡೆದಿರೋದು ಕೆಲವೇ ಸಲ ಮಾತ್ರ! ಇದು ಏಕೆ ಪ್ರಮುಖ?
ಹೊಸದಿಲ್ಲಿ, ಸೆಪ್ಟೆಂಬರ್ 14: ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ಕಾಲ ಸಂಸತ್ನ ವಿಶೇಷ ಅಧಿವೇಶನ ನಡೆಯುತ್ತಿದೆ. ಈ ವಿಶೇಷ ಅಧಿವೇಶನದ ಅಜೆಂಡಾ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ ಪ್ರಶೋತ್ತರ ಅವಧಿ ಮತ್ತು ಶೂನ್ಯವೇಳೆ ಇರುವುದಿಲ್ಲ ಎಂದು ಹೇಳಿದೆ. ಜೊತೆಗೆ ಖಾಸಗಿ ಮಸೂದೆಗಳ ಮಂಡನೆಗೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರದ ಈ ನಿರ್ಧಾರವನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ.
ವಿಶೇಷ ಸಂಸತ್ ಅಧಿವೇಶನಗಳ ಬಗ್ಗೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ. ಅದನ್ನು ಹೇಗೆ ಕರೆಯಬೇಕು? ಹೇಗೆ ನಡೆಸಬೇಕು ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಿಯಮಿತ ಅಧಿವೇಶನಗಳನ್ನು ನಡೆಸದೇ ಇರುವಾಗ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿಶೇಷ ಅಧಿವೇಶನಗಳನ್ನು ಕರೆಯಬಹುದು ಎಂದು ಹೇಳಲಾಗಿದೆ. ಆದರೆ, ಅದನ್ನು ಹೊರತುಪಡಿಸಿ ವಿಶೇಷ ಅಧಿವೇಶನಗಳ ಕಾರ್ಯವಿಧಾನಗಳು ಅಸ್ಪಷ್ಟವಾಗಿವೆ.

ಇದುವರೆಗೂ 7 ಬಾರಿ ಪ್ರಶ್ನೋತ್ತರ ಅವಧಿಯಿಲ್ಲದೇ ಸಂಸತ್ನ ಅಧಿವೇಶನಗಳು ನಡೆದಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂದ ಬಳಿಕ ಎರಡು ಬಾರಿ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಿ, ಅಧಿವೇಶನ ನಡೆಸಲಾಗಿದೆ. ಪ್ರಶ್ನೋತ್ತರ ಅವಧಿ ಸದನದ ಅತ್ಯಗತ್ಯ ಭಾಗವಾಗಿದ್ದು, ಸಚಿವರಿಗೆ ಸದಸ್ಯರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾರೆ. ಈ ಮೂಲಕ ತಮ್ಮ ಸಮಸ್ಯೆಗಳ ಬಗ್ಗೆ ಸದಸ್ಯರು ಬೆಳಕು ಚೆಲ್ಲುತ್ತಾರೆ. ಆದರೆ, ಪ್ರಶ್ನೋತ್ತರ ಅವಧಿಯಿಲ್ಲದೇ ಅಧಿವೇಶನ ಸಂಪೂರ್ಣವಾಗುವುದಿಲ್ಲ ಎನ್ನುವುದು ರಾಜಕೀಯ ತಜ್ಞರ ಅಭಿಮತವಾಗಿದೆ.
ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸುವ ಅಥವಾ ನಡೆಸುವ ನಿರ್ಧಾರ ಸದನದ ಸಭಾಧ್ಯಕ್ಷರು ಅಂದರೆ ಲೋಕಸಭೆಯಲ್ಲಿ ಸ್ಪೀಕರ್ ಮತ್ತು ರಾಜ್ಯಸಭೆಯಲ್ಲಿ ಉಪಾಧ್ಯಕ್ಷರ ವಿವೇಚನೆಗೆ ಬಿಟ್ಟಿರುತ್ತದೆ. ಈ ಹಿಂದೆ ಕೊನೆಯ ಬಾರಿಗೆ ಪ್ರಶ್ನೋತ್ತರ ಅವಧಿಯನ್ನು 2020ರಲ್ಲಿ ರದ್ದುಗೊಳಿಸಲಾಗಿತ್ತು. ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಪ್ರಶ್ನೋತ್ತರ ಅವಧಿಯಿಲ್ಲದೇ ಮುಂಗಾರು ಅಧಿವೇಶನ ನಡೆದಿತ್ತು.
ಅದಕ್ಕೂ ಮುನ್ನ 2017ರಲ್ಲಿ ಜಿಎಸ್ಟಿ ಜಾರಿಗೆ ತರಲು ಮಧ್ಯರಾತ್ರಿಯಲ್ಲಿ ಅಧಿವೇಶನ ಕರೆದಾಗ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲಾಗಿತ್ತು. ಈ ವಿಶೇಷ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಮಾತ್ರವಲ್ಲದೇ ಸದನದ ಬೇರೆ ಯಾವುದೇ ವ್ಯವಹಾರಗಳು ನಡೆದಿದ್ದಿಲ್ಲ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಈ ಮುಂಚೆ ಎರಡು ಬಾರಿ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲಾಗಿದೆ. ಈಗ ಮೂರನೇ ಬಾರಿ ಪ್ರಶ್ನೋತ್ತರ ಅವಧಿ ರದ್ದಾಗುತ್ತಿದೆ.
ಮೋದಿ ಸರ್ಕಾರಕ್ಕೂ ಮುನ್ನ ಕೇವಲ 5 ಬಾರಿ ಪ್ರಶ್ನೋತ್ತರ ಅವಧಿ ರದ್ದು!
2017ಕ್ಕಿಂತ ಮೊದಲು ಕೆಲವೇ ಕೆಲವು ಸಮಯದಲ್ಲಿ ಮಾತ್ರ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲಾಗಿತ್ತು. ರಾಷ್ಟ್ರಪತಿ ಆಳ್ವಿಕೆಯಿದ್ದ ಒಡಿಶಾದ ಬಜೆಟ್ ಅನ್ನು ಚರ್ಚಿಸಲು 1961ರಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆದಾಗ 1961ರಲ್ಲಿ ಮೊದಲ ಬಾರಿಗೆ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲಾಗಿತ್ತು. ಪ್ರಶ್ನೋತ್ತರ ಅವಧಿಯಿಲ್ಲದೇ ಬಜೆಟ್ ಅನ್ನು ಅಂಗೀಕರಿಸಲಾಗಿತ್ತು. 1962ರಲ್ಲಿ ಭಾರತ - ಚೀನಾ ಯುದ್ಧದ ಸಮಯದಲ್ಲಿ ಸಂಸತ್ನ ಚಳಿಗಾಲದ ಅಧಿವೇಶನ ಕರೆಯಲಾಗಿತ್ತು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಒಪ್ಪಂದದಂತೆ ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಲಾಗಿತ್ತು.
ಇನ್ನು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಸತ್ತಿನ ಕನಿಷ್ಠ ಎರಡು ಅಧಿವೇಶನಗಳು ಪ್ರಶ್ನೋತ್ತರ ಅವಧಿಯನ್ನು ಹೊಂದಿರಲಿಲ್ಲ. 1975ರಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯನ್ನು ಅನುಮೋದಿಸಲು ಕರೆದ ಸಂಸತ್ ಅಧಿವೇಶನ ಹಾಗೂ 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ಅಂಗೀಕರಿಸಲು ಕರೆದ ವಿಶೇಷ ಅಧಿವೇಶನದ ವೇಳೆ ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಲಾಗಿತ್ತು. ಅದಾದ ಬಳಿಕ 1977ರಲ್ಲಿ ನಾಗಾಲ್ಯಾಂಡ್ ಮತ್ತು ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿಸ್ತರಿಸಲು ಸಂಸತ್ ಅಧಿವೇಶನ ಕರೆದಾಗ ಪ್ರಶ್ನೋತ್ತರ ಅವಧಿಯಿಲ್ಲದೆ ಐದು ದಿನಗಳ ವಿಶೇಷ ಅಧಿವೇಶನವನ್ನು ನಡೆಸಲಾಗಿತ್ತು.












Click it and Unblock the Notifications