Prliament Special Session; ಸೆ. 17ರಂದು ಸರ್ವಪಕ್ಷಗಳ ಸಭೆ
ನವದೆಹಲಿ, ಸೆಪ್ಟೆಂಬರ್ 14; ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಕರೆದಿರುವ ಕೇಂದ್ರ ಸರ್ಕಾರ ಅಧಿವೇಶನದ ಕಾರ್ಯಸೂಚಿ ಬಿಡುಗಡೆ ಮಾಡಿ ಕುತೂಹಲಗಳಿಗೆ ತೆರೆ ಎಳೆದಿದೆ. ಸೆಪ್ಟೆಂಬರ್ 18ರಂದು ಆರಂಭವಾಗಲಿರುವ ಅಧಿವೇಶನಕ್ಕೆ ಒಂದು ದಿನ ಮೊದಲು ಸರ್ವಪಕ್ಷಗಳ ಸಭೆ ಕರೆದಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 18 ರಿಂದ 5 ದಿನಗಳ ಕಾಲ ಸಂಸತ್ ಉಭಯ ಸದನಗಳ ವಿಶೇಷ ಅಧಿವೇಶನ ನಡೆಯಲಿದೆ. ಆದರೆ ಪ್ರಶ್ನೋತ್ತರ ಸಮಯ ಅಥವಾ ಖಾಸಗಿ ಮಸೂದೆಯ ಮಂಡನೆ ಇರುವುದಿಲ್ಲ.

ಸರ್ವಪಕ್ಷಗಳ ಸಭೆ ಕುರಿತು ಸಚಿವರು ಟ್ವೀಟ್ ಮಾಡಿದ್ದು, 'ಇದೇ ಸೆಪ್ಟೆಂಬರ್ 18ರಿಂದ ಆರಂಭವಾಗಲಿರುವ ವಿಶೇಷ ಅಧಿವೇಶನದ ಪೂರ್ವಭಾವಿಯಾಗಿ ದಿನಾಂಕ 17ರಂದು ಸಂಜೆ 4.30ಕ್ಕೆ ಸರ್ವ ಪಕ್ಷಗಳ ನಾಯಕರ ಸಭೆಯನ್ನು ಕರೆಯಲಾಗಿದೆ. ಎಲ್ಲಾ ನಾಯಕರಿಗೂ ಈ ಕುರಿತು ಈ-ಮೇಲ್ ಮೂಲಕ ಮಾಹಿತಿ ನೀಡಿ, ಆಮಂತ್ರಣ ನೀಡಲಾಗಿದೆ' ಎಂದು ಹೇಳಿದ್ದಾರೆ.
ಅಧಿವೇಶನ ಕಾರ್ಯಸೂಚಿ; ಕೇಂದ್ರ ಸರ್ಕಾರ ಬುಧವಾರ 5 ದಿನಗಳ ವಿಶೇಷ ಅಧಿವೇಶನದ ಕಾರ್ಯಸೂಚಿ ಬಿಡುಗಡೆ ಮಾಡಿದೆ. 'ಸಂಸತ್ 75 ವರ್ಷಗಳ ಪಯಣ' ಕುರಿತು ಉಭಯ ಸದನಗಳಲ್ಲಿ ಚರ್ಚೆಗಳು ನಡೆಯಲಿವೆ. ಕೆಲವು ಮಸೂದೆಗಳನ್ನು ಮಂಡನೆ ಮಾಡಲಾಗುತ್ತದೆ ಎಂದು ಕಾರ್ಯಸೂಚಿ ತಿಳಿಸಿದೆ.
ಮೊದಲ ದಿನವಾದ ಸೆಪ್ಟೆಂಬರ್ 18ರಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಧಾನಸಭೆಯಿಂದ ಸಂಸತ್ ತನಕ ನಡೆದು ಬಂದ ಸಂಸದೀಯ ಹಾದಿ ಕುರಿತು ಸಾಧನೆ, ಅನುಭವ, ನೆನಪುಗಳು ಮತ್ತು ಕಲಿಕೆ ಕುರಿತು ಚರ್ಚೆಗೆಗಳು ನಡೆಯಲಿವೆ.
ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯುಕ್ತರ (ನೇಮಕಾತಿ, ಕರ್ತವ್ಯ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ, ಲೋಕಸಭೆಯಲ್ಲಿ ವಕೀಲರ ಮಸೂದೆ (ತಿದ್ದುಪಡಿ), ನಿಯತಕಾಲಿಕೆಗಳ ಮುದ್ರಣ ಹಾಗೂ ನೋಂದಣಿ ಮಸೂದೆಯನ್ನು ಮಂಡಿಸಿ, ಅಂಗೀಕಾರ ಪಡೆಯಲು ಉದ್ದೇಶಿಸಲಾಗಿದೆ.
ಈ ಹಿಂದೆ ನಡೆದ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ (ನೇಮಕಾತಿ, ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ, ಅಂಚೆ ಕಛೇರಿ ಮಸೂದೆ ಮಂಡಿಸಲಾಗಿದೆ. ಇವುಗಳನ್ನು ಈಗ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ, ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ ಸೇರಿದಂತೆ ಇತರ ವಿಚಾರಗಳ ಕುರಿತು ಸಹ ಚರ್ಚೆ ನಡೆಯುವ ನಿರೀಕ್ಷೆ ಇದೆ.
5 ದಿನಗಳ ವಿಶೇಷ ಅಧಿವೇಶನದ ಮೊದಲ ದಿನದ ಕಲಾಪ ಹಳೆ ಸಂಸತ್ ಭವನದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 19ರಿಂದ ಹೊಸ ಸಂಸತ್ ಭವನದಲ್ಲಿ ಕಲಾಪಗಳು ನಡೆಯಲಿದೆ, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ನೂತನ ಸಂಸತ್ ಭವನದಲ್ಲಿ ನಡೆಯಲಿರುವ ಕಲಾಪದಲ್ಲಿ ಸಂಸತ್ನ ಸಿಬ್ಬಂದಿಗಳು ಹೊಸ ಸಮವಸ್ತ್ರ ಧರಿಸಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಹೊಸ ಸಮವಸ್ತ್ರಗಳನ್ನು ವಿತರಣೆ ಮಾಡಲಾಗಿದ್ದು, ಭದ್ರತಾ ಸಿಬ್ಬಂದಿಯಿಂದ ಹಿಡಿದು, ವಿವಿಧ ಸಚಿವಾಲಯಗಳ ಸಿಬ್ಬಂದಿಗಳು ಬೇರೆ-ಬೇರೆ ಬಣ್ಣದ ಸಮವಸ್ತ್ರವನ್ನು ವಿಶೇಷ ಅಧಿವೇಶನದ ಸಮಯದಲ್ಲಿ ಧರಿಸಲಿದ್ದಾರೆ.
ನವದೆಹಲಿಯಲ್ಲಿ ಜಿ 20 ಶೃಂಗ ಸಭೆ ಮುಕ್ತಾಯಗೊಂಡ ಒಂದು ವಾರದಲ್ಲಿಯೇ ಈ ವಿಶೇಷ ಅಧಿವೇಶನ ನಡೆಯಲಿದೆ. ಅಲ್ಲದೇ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಸರ್ಕಾರ 5 ದಿನಗಳ ವಿಶೇಷ ಅಧಿವೇಶವನ್ನು ನಡೆಯುತ್ತಿದೆ. ಸೆ. 18 ಮತ್ತು 19ರಂದು ಗೌರಿ ಗಣೇಶ ಹಬ್ಬವಿದೆ. ದೇಶದ್ಯಾಂತ ಸಂಭ್ರಮ ಇರುವಾಗ ಅಧಿವೇಶನ ನಡೆಸಲಾಗುತ್ತಿದೆ.












Click it and Unblock the Notifications