ಲಾಕ್ಡೌನ್ ವೇಳೆ ಸುಳ್ಳು ಸುದ್ದಿಗಳಿಂದಾಗಿ ವಲಸೆ ಸಮಸ್ಯೆ: ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್ 16: ಸುಳ್ಳು ಸುದ್ದಿಗಳ ಸೃಷ್ಟಿಯಿಂದ ಆತಂಕಕ್ಕೆ ಒಳಗಾಗಿದ್ದರಿಂದ ಲಾಕ್ ಡೌನ್ ಸಂದರ್ಭದಲ್ಲಿ ಅಪಾರ ಪ್ರಮಾಣದ ವಲಸೆ ಕಾರ್ಮಿಕರು ವಲಸೆ ಹೋಗಲು ಕಾರಣ ಎಂದು ಕೇಂದ್ರ ಗೃಹ ಸಚಿವಾಲಯ ಸಂಸತ್ನಲ್ಲಿ ಹೇಳಿದೆ.
ತೃಣಮೂಲ ಕಾಂಗ್ರೆಸ್ ಸಂಸದೆ ಮಾಲಾ ರಾಯ್ ಕೇಳಿದ ಚುಕ್ಕಿರಹಿತ ಗುರುತಿನ ಪ್ರಶ್ನೆಗೆ ಬುಧವಾರ ಲೋಕಸಭೆಯಲ್ಲಿ ರಾಜ್ಯ ಖಾತೆ ಗೃಹ ಸಚಿವ ಜಿ. ಕಿಶನ್ ರೆಡ್ಡಿ, ಈ ಉತ್ತರ ನೀಡಿದ್ದಾರೆ. ಲಾಕ್ಡೌನ್ ನಂತರ ಸಾವಿರಾರು ಕಾರ್ಮಿಕರು ವಲಸೆ ಹೋಗಲು ಕಾರಣವೇನು? ಎಂದು ಮಾಲಾ ರಾಯ್ ಪ್ರಶ್ನಿಸಿದ್ದರು.
'ಲಾಕ್ ಡೌನ್ ಸಂದರ್ಭದಲ್ಲಿ ಸೃಷ್ಟಿಯಾದ ಫೇಕ್ ನ್ಯೂಸ್ಗಳು ಜನರಲ್ಲಿ ತೀವ್ರ ಆತಂಕಗಳನ್ನು ಮೂಡಿಸಿದ್ದವು. ಈ ಕಾರಣದಿಂದ ಅಪಾರ ಸಂಖ್ಯೆಯ ವಲಸೆ ನಡೆಯಿತು. ಜನರು, ಮುಖ್ಯವಾಗಿ ವಲಸೆ ಕಾರ್ಮಿಕರು ಆಹಾರ, ಕುಡಿಯುವ ನೀರು, ಆರೋಗ್ಯ ಸೇವೆಗಳು ಮತ್ತು ವಸತಿಯಂತ ಮೂಲ ಅಗತ್ಯ ಸೌಲಭ್ಯಗಳ ಪೂರೈಕೆ ಬಗ್ಗೆ ಕಳವಳ ಹೊಂದಿದ್ದರು. ಆದರೆ ಸರ್ಕಾರದಕ್ಕೆ ಇದರ ಬಗ್ಗೆ ಸಂಪೂರ್ಣ ಅರಿವಿತ್ತು. ಲಾಕ್ ಡೌನ್ ಸಮಯದಲ್ಲಿ ಯಾವುದೇ ನಾಗರಿಕ ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳು ಮುಂತಾದ ಮೂಲ ಸವಲತ್ತುಗಳಿಂದ ವಂಚಿತನಾಗಬಾರದು ಎಂಬ ಕಾಳಜಿಯಿಂದ ಅಗತ್ಯ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು' ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ.

ಆದರೆ, ವಲಸೆ ವೇಳೆ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಮಾಲಾ ರಾಯ್ ಅವರ ಪ್ರಶ್ನೆಗೆ, ಇದನ್ನು ಕೇಂದ್ರಿತವಾಗಿ ನಿರ್ವಹಣೆ ಮಾಡಿಲ್ಲದ ಕಾರಣ ವಲಸೆ ಕಾರ್ಮಿಕರ ಸಾವಿನ ಬಗ್ಗೆ ಅಂಕಿ ಅಂಶಗಳಿಲ್ಲ ಎಂದು ತಿಳಿಸಿದರು.
ಮಾರ್ಚ್ 21ರಿಂದ ಗೃಹ ವ್ಯವಹಾರಗಳ ಸಚಿವಾಲಯದ ನಿಯಂತ್ರಣ ಕೊಠಡಿಗಳು ಜಂಟಿ ಕಾರ್ಯದರ್ಶಿಗಳ ಮಟ್ಟದಲ್ಲಿ, ಪ್ರಮುಖ ಕೇಂದ್ರ ಸಚಿವರ ಸಲಹೆಯ ಜತೆಗೆ ಹಿರಿಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ 24*7 ಗಂಟೆ ಕಾರ್ಯನಿರ್ವಹಿಸಿದ್ದವು. ಸಂಕಷ್ಟದಲ್ಲಿರುವ ಜನರ ಅಹವಾಲುಗಳನ್ನು ಆಲಿಸಿ ಅವರಿಗೆ ತಕ್ಷಣವೇ ಸಹಾಯ ಮಾಡುವುದು ಇದರ ಉದ್ದೇಶವಾಗಿತ್ತು ಎಂದು ಸಚಿವಾಲಯ ತಿಳಿಸಿದೆ.












Click it and Unblock the Notifications