ಅನನುಭವಿ ರಾಹುಲ್ ಗಾಂಧಿಯಿಂದ ಸಂಸತ್ ಕಲಾಪ ಹಾಳು: ಅನಂತ್ ಕುಮಾರ್
ಭೋಪಾಲ್ (ಮಧ್ಯಪ್ರದೇಶ), ಜೂನ್ 26 : ಮುಂಗಾರಿನ ಸಂಸತ್ ಅಧಿವೇಶನ ಮುಂದಿನ ತಿಂಗಳು ಆರಂಭ ಆಗಬೇಕಿದ್ದು, "ಅನನುಭವಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಸಂಸತ್ ನ ಕಲಾಪಗಳ ಮೇಲೆ ಪರಿಣಾಮ ಆಗುತ್ತಿದೆ" ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಮಂಗಳವಾರ ಹೇಳಿದರು.
'ವಂಶಪಾರಂಪರ್ಯ'ದ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಜಾಪ್ರಭುತ್ವಕ್ಕೆ ಉತ್ತಮವಲ್ಲ ಎಂದು ಕೂಡ ಇದೇ ಸಂದರ್ಭದಲ್ಲಿ ಅವರು ಹೇಳಿದರು. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಸಂಸತ್ ವ್ಯವಹಾರಗಳ ಮೇಲೆ ಭಾರೀ ಪರಿಣಾಮ ಆಗಿದೆ. ಶಾಸಕಾಂಗದ ಕೆಲಸಗಳ ಬಗ್ಗೆ ರಾಹುಲ್ ಗಾಂಧಿಗೆ ಯಾವುದೇ ಅನುಭವ ಇಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವರೂ ಆದ ಅನಂತ್ ಕುಮಾರ್ ಟೀಕಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, ವಂಶಾಡಳಿತ ಹಾಗೂ ಪ್ರಜಾಪ್ರಭುತ್ವ ಒಟ್ಟಿಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇನ್ನು ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದರು.

ಹಿಂದುಳಿದ ವರ್ಗಗಳ ಆಯೋಗದ ಬಗೆಗಿನ ಮಸೂದೆ ವಿಚಾರವನ್ನು ಗುರಿ ಮಾಡಿಕೊಂಡು ಮಾತನಾಡಿದ ಅನಂತ್ ಕುಮಾರ್, ಸಂಸತ್ ನ ಹಲವು ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುತ್ತಿದೆ. "ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ಮಾನ ನೀಡಲು ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಆದರೆ ಅದೇ ಮಸೂದೆಯನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ತಡೆದಿದೆ" ಎಂದು ಹೇಳಿದರು.
ಈ ಹಿಂದಿನ ಸರಕಾರಗಳಿಗೆ ಹೋಲಿಸಿದರೆ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ನಡೆದಿರುವ ಸಂಸತ್ ಅಧಿವೇಶನಗಳು ಹೆಚ್ಚು ಯಶಸ್ವಿಯಾಗಿವೆ. ಭಾರತದ ಸಂಸದೀಯ ಇತಿಹಾಸದಲ್ಲೇ ಇದು ದಾಖಲೆ. ಯಶಸ್ಸಿನ ಪ್ರಮಾಣ 119-120 ಪರ್ಸೆಂಟ್ ಇದೆ ಎಂದು ಅನಂತ್ ಕುಮಾರ್ ಹೇಳಿದರು.

ಜುಲೈ ಹದಿನೆಂಟನೇ ತಾರೀಕಿನಿಂದ ಸಂಸತ್ ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಇತರ ವಿಚಾರಗಳ ಜತೆಗೆ ಮೊದಲಿಗೆ ತ್ರಿವಳಿ ತಲಾಖ್ ಮಸೂದೆ ಮಂಡನೆ ಮಾಡಲಾಗುವುದು ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ನಲವತ್ಮೂರನೇ ವರ್ಷಾಚರಣೆಯನ್ನು ರಾಷ್ಟ್ರೀಯ 'ಕರಾಳ ದಿನ'ವನ್ನಾಗಿ ಬಿಜೆಪಿ ಆಚರಿಸಿದೆ ಎಂದ ಅವರು, ಕಾಂಗ್ರೆಸ್ ನ ವಂಶಪಾರಂಪರ್ಯ ಮತ್ತು ಕ್ರೌರ್ಯ ರಾಜಕಾರಣವನ್ನು ಜನರು ಮರೆಯಬಾರದು ಎಂದರು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications