ಜನರಿಗೆ ಬೇರೆ ಆಯ್ಕೆಯೇ ಇಲ್ಲ; ಕೊರೊನಾ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ಕೇಂದ್ರ
ನವದೆಹಲಿ, ಮಾರ್ಚ್ 12: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಯಾವುದೇ ಕಾರಣಕ್ಕೂ ಸೋಂಕನ್ನು ನಿರ್ಲಕ್ಷ್ಯ ಮಾಡಬೇಡಿ. ಸೋಂಕಿನ ವಿರುದ್ಧ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳನ್ನು ಕೈಬಿಡಬೇಡಿ ಎಂದು ಕೇಂದ್ರ ಸರ್ಕಾರ ಗುರುವಾರ ಜನರಿಗೆ ಮತ್ತೊಮ್ಮೆ ಸಲಹೆ ನೀಡಿದೆ.
ದೇಶದ ಕೆಲವು ರಾಜ್ಯಗಳಲ್ಲಿ, ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ದಿಢೀರನೆ ಏರಿಕೆಯಾಗಿದೆ. ನೆರೆ ರಾಜ್ಯಗಳಿಗೂ ವೇಗವಾಗಿ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳು ವ್ಯಕ್ತವಾಗಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ, ಜಾಗರೂಕತೆಯಿಂದ ಇರಲೇಬೇಕಿದೆ ಹಾಗೂ ಕೊರೊನಾ ಸೋಂಕು ಇನ್ನೂ ಸಂಪೂರ್ಣ ಹೋಗಿಲ್ಲ ಎಂಬುದನ್ನು ಮರೆಯಲೇಬಾರದು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

"ಸದ್ಯದ ಸ್ಥಿತಿ ಆತಂಕಕಾರಿಯಾಗಿದೆ"
ಸದ್ಯದ ಸ್ಥಿತಿಯನ್ನು ಆತಂಕಕಾರಿ ಎಂದು ನೀತಿ ಆಯೋಗ ಸದಸ್ಯ ಡಾ.ವಿ.ಕೆ.ಪೌಲ್ ವಿವರಿಸಿದ್ದಾರೆ. ವರ್ಷದ ನಂತರ ಮಹಾರಾಷ್ಟ್ರದ ನಾಗಪುರದಲ್ಲಿ ಲಾಕ್ಡೌನ್ ಹೇರಲಾಗಿದ್ದು, ಲಾಕ್ಡೌನ್ನಂಥ ಕ್ರಮಗಳನ್ನು ಮರಳಿ ತರುವ ಪರಿಸ್ಥಿತಿಯನ್ನು ನಾವು ತಲುಪುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇಲ್ಲಿನ ಜನರು ಮುಂಜಾಗ್ರತೆ ವಹಿಸಲೇಬೇಕು ಎಂದು ತಿಳಿಸಿದ್ದಾರೆ.

"ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ"
ನಮಗೆ ಕೊರೊನಾ ಎರಡು ಪಾಠಗಳನ್ನು ಹೇಳುತ್ತಿದೆ. ಒಂದು, ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ. ಯಾವಾಗ ಬೇಕಾದರೂ ಅನಿರೀಕ್ಷಿತವಾಗಿ ಬರಬಹುದು. ಎರಡನೆಯದಾಗಿ, ಸೋಂಕಿನಿಂದ ಮುಕ್ತವಾಗಿರಬೇಕು ಎಂದು ಬಯಸುವುದಾದರೆ, ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದೂ ಅತಿ ಮುಖ್ಯ. ಕೊರೊನಾದಿಂದ ದೂರ ಉಳಿಯಬೇಕಾದರೆ ನಿಯಮಗಳನ್ನು ಜನರು ಪಾಲಿಸಲೇಬೇಕು. ಲಸಿಕೆಯನ್ನೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

"ಲಸಿಕೆ ಪ್ರಮಾಣವನ್ನೂ ಹೆಚ್ಚಿಸಬೇಕಿದೆ"
ಕೊರೊನಾ ಪ್ರಕರಣಗಳು ಏರುತ್ತಿರುವ ಕಡೆಗಳಲ್ಲಿ ಲಸಿಕೆ ನೀಡುವ ಪ್ರಮಾಣವನ್ನೂ ಹೆಚ್ಚಿಸಬೇಕು. ಹಾಗೆಯೇ ಆದ್ಯತೆಯಲ್ಲಿ ಲಸಿಕೆ ನೀಡುವುದನ್ನು ತ್ವರಿತಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಲಸಿಕೆಯನ್ನು ಬಳಸಿಕೊಂಡು ನಾವು ಸೋಂಕಿನ ವಿರುದ್ಧ ಬಲವಾದ ಹೋರಾಟ ನಡೆಸಬೇಕಿದೆ ಎಂದು ಜನರಿಗೆ ಮನವಿ ಮಾಡಿದ್ದಾರೆ.

ಎರಡು ತಿಂಗಳ ನಂತರ ಕೊರೊನಾ ಪ್ರಕರಣಗಳಲ್ಲಿ ಏರಿಕೆ
ಎರಡು ತಿಂಗಳ ನಂತರ ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಫೆಬ್ರವರಿ ಮಧ್ಯದಿಂದ ಕೊರೊನಾ ಪ್ರಕರಣಗಳಲ್ಲಿ ದಿಢೀರನೆ ಏರಿಕೆಯಾಗಿದ್ದು, ಹರಿಯಾಣ, ಗುಜರಾತ್, ಮಧ್ಯ ಪ್ರದೇಶ, ಪಂಜಾಬ್ ಹಾಗೂ ಮಹಾರಾಷ್ಟ್ರದಿಂದ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಸದ್ಯಕ್ಕೆ ಕೇರಳ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರಕರಣಗಳು ಕಡಿಮೆಯಾಗಿರುವುದಾಗಿ ತಿಳಿದುಬಂದಿದೆ.











Click it and Unblock the Notifications